ಸಿಎಂ ಗಾದಿಗೆ ಪನ್ನೀರ್: ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ಸ್ಪಷ್ಟನೆ
ನ್ಯಾಯಾಲಯಲ್ಲಿ ಶಶಿಕಲಾ ಅವರ ಅಕ್ರಮ ಆಸ್ತಿ ಪ್ರಕರಣಗಳ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪನ್ನೀರ್ ಗೆ ಮೊದಲ ಆದ್ಯತೆ ನೀಡಲು ನಿರ್ಧಾರ
ಚೆನ್ನೈ, ಫೆಬ್ರವರಿ 10: ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಅವಕಾಶವನ್ನು ಶಶಿಕಲಾ ಅವರ ಬದಲಿಗೆ ಪನ್ನೀರ್ ಸೆಲ್ವಂ ಅವರಿಗೇ ನೀಡುವುದಾಗಿ ತಮಿಳುನಾಡಿನ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರು ತಿಳಿಸಿದ್ದಾರೆ.[ಎಐಎಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದ ಶಶಿಕಲಾ ಉಚ್ಚಾಟನೆ]
ಶಶಿಕಲಾ ಅವರ ಮೇಲೆ ಅಕ್ರಮ ಆಸ್ತ್ರಿ ಪ್ರಕರಣಗಳ ವಿಚಾರಣೆಯಿನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೇರಲು ಅವಕಾಶ ನೀಡಲು ಕಾನೂನಾತ್ಮಕ ಅಡಚಣೆಗಳಿರುವುದರಿಂದ ಪನ್ನೀರ್ ಸೆಲ್ವಂ ಅವರಿಗೆ ಈ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆಂದು ವಾಹಿನಿಯೊಂದು ವರದಿ ಮಾಡಿದೆ.[ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿ?]

ಗುರುವಾರ ಸಂಜೆ ಎಐಡಿಎಂಕೆ ನಾಯಕರಾದ ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದ ವಿದ್ಯಾಸಾಗರ್ ರಾವ್, ಆನಂತರ, ತಮಿಳುನಾಡಿನ ಪ್ರಸಕ್ತ ರಾಜಕೀಯ ಸನ್ನಿವೇಶದ ವಿಸ್ತೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು.
ರಾಜ್ಯಪಾಲರು ಸಲ್ಲಿಸಿದ ವರದಿಯ ಕೂಲಂಕಷ ಅಧ್ಯಯನ ನಡೆಸಿರುವ ಕೇಂದ್ರ ಗೃಹ ಸಚಿವಾಲಯ, ಶಶಿಕಲಾ ಬದಲಿಗೆ ಪನ್ನೀರ್ ಸೆಲ್ವಂ ಅವರಿಗೇ ಮುಖ್ಯಮಂತ್ರಿ ಪಟ್ಟಕ್ಕೇರಲು ಮೊದಲ ಆದ್ಯತೆ ನೀಡುವಂತೆ ರಾಜ್ಯಪಾಲರಿಗೆ ಸೂಚನೆ ನೀಡಲಿದೆ ಎಂದು ಮೂಲಗಳು ಹೇಳಿವೆ.
ಏತನ್ಮಧ್ಯೆ, ವಾಹಿನಿಯೊಂದಕ್ಕೆ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರತಿಯೊಂದು ಲಭ್ಯವಾಗಿದ್ದು, ಅದರ ವಿವರ ಹೀಗಿದೆ.
ನ್ಯಾಯಾಲಯದಲ್ಲಿ ಶಶಿಕಲಾ ಅವರ ಅಕ್ರಮ ಆಸ್ತಿ ವಿಚಾರಣೆ ತೀರ್ಪು ಹೊರಬಿದ್ದಿಲ್ಲ. ಇದಲ್ಲದೆ, ಎಐಡಿಎಂಕೆ ಪಕ್ಷದ ಮಹಾ ಕಾರ್ಯದರ್ಶಿಯಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯೂ ನಡೆಯುತ್ತಿದೆ.
ಈ ಎಲ್ಲಾ ಪ್ರಕರಣಗಳ ಹಿನ್ನೆಲೆಯಲ್ಲಿ ಶಶಿಕಲಾ ಅವರಿಗೆ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಅವಕಾಶ ನೀಡುವ ಔಚಿತ್ಯದ ಬಗ್ಗೆ ರಾಜ್ಯಪಾಲರು ಕೇಂದ್ರ ಸರ್ಕಾರದ ಸಲಹೆ ಕೇಳಿದ್ದಾರೆನ್ನಲಾಗಿದೆ. ಅಲ್ಲದೆ, ಹಾಗೊಂದು ವೇಳೆ ಶಶಿಕಲಾ ಅವರನ್ನು ಸರ್ಕಾರ ರಚಿಸಲು ಆಹ್ವಾನ ನೀಡುವುದು ಬೇಡ ಎನ್ನುವುದಾದರೆ ಅವರ ಬದಲಿಗೆ ಪನ್ನೀರ್ ಸೆಲ್ವಂ ಅವರಿಗೆ ಅವಕಾಶ ನೀಡಲು ಸಿದ್ಧರಿರುವುದಾಗಿ ರಾಜ್ಯಪಾಲರು ವರದಿಯಲ್ಲಿ ತಿಳಿಸಿದ್ದಾರೆನ್ನಲಾಗಿದೆ.












Click it and Unblock the Notifications