ಮೇಕೆದಾಟು ಯೋಜನೆ: ಮಧ್ಯಸ್ಥಿಕೆ ವಹಿಸುವಂತೆ ಮೋದಿಗೆ ತಮಿಳುನಾಡು ಸಿಎಂ ಒತ್ತಾಯ
ಚೆನ್ನೈ, ಜೂನ್ 14: ಕರ್ನಾಟಕದ ಜೊತೆ ನೀರಿನ ವಿಚಾರದಲ್ಲಿ ಸದಾ ಏನಾದರೊಂದು ಕ್ಯಾತೆ ತೆಗೆಯುವುದು ತಮಿಳುನಾಡಿನ ಕೆಲಸ. ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ, ಮುಂದಿನ ಚುನಾವಣೆ ವೇಳೆಗೆ ಪ್ರಮುಖ ರಾಜಕೀಯ ಅಸ್ತ್ರವಾಗಲಿರುವ ಪ್ರತಿಷ್ಠಿತ ಮೇಕೆದಾಟು ಯೋಜನೆಗೆ ತಮಿಳುನಾಡು ತಗಾದೆ ತೆಗೆದಿತ್ತು. ಈಗ ಅದು ಪ್ರಧಾನಿ ನರೇಂದ್ರ ಮೋದಿವರೆಗೂ ಹೋಗಿ ತಲುಪಿದೆ.
ಜೂನ್ 17ರಂದು ನಡೆಯಲಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತು ಚರ್ಚಿಸದಂತೆ ಕ್ರಮ ವಹಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಪತ್ರ ಬರೆದಿದೆ.
ಬೆಂಗಳೂರಿಗೆ 2027ಕ್ಕೆ ಕುಡಿಯುವ ನೀರಿನ ಸಮಸ್ಯೆ: ಜಲಮಂಡಳಿ ಪ್ಲಾನ್ ಏನು?
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕಾರ್ಯನಿರ್ವಹಣೆಯ ವ್ಯಾಪ್ತಿಯು ತೀರ್ಪಿನ ಅನುಷ್ಠಾನಕ್ಕೆ ಕಟ್ಟುನಿಟ್ಟಾಗಿ ಸೀಮಿತವಾಗಿದೆ ಮತ್ತು ಅದು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಬಾರದು ಎಂದು ಮುಖ್ಯಮಂತ್ರಿ ಸ್ಟಾಲಿನ್ ಒತ್ತಾಯಿಸಿದ್ದಾರೆ. ಯೋಜನೆ ಜಾರಿಯಿಂದ ರಾಜ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಧಾನಿ ಮೋದಿಗೆ ಸ್ಟಾಲಿನ್ ಪತ್ರ
''ಕಾವೇರಿ ವಿವಾದ ಕುರಿತ ಸುಪ್ರೀಂ ಕೋರ್ಟ್ ನೀಡಿರುವ ಐತೀರ್ಪಿನ ಅನುಷ್ಠಾನ ಮಾಡುವುದಷ್ಟೇ ಪ್ರಾಧಿಕಾರದ ಕೆಲಸವಾಗಿದೆ. ಪ್ರಾಧಿಕಾರವು ಯಾವ ವಿಷಯಗಳನ್ನೂ ಸಭೆಯಲ್ಲಿ ಚರ್ಚಿಸಬಾರದು. ಅಲ್ಲದೇ ಮೇಕೆದಾಟು ಯೋಜನೆ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಗಳು ಸುಪ್ರೀಂಕೋರ್ಟ್ನಲ್ಲಿ ಇನ್ನೂ ವಿಚಾರಣೆಗೆ ಬಾಕಿ ಇದೆ. ವಿಚಾರಣೆಗೂ ಮುನ್ನವೇ ಯೋಜನೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸುವುದು ನ್ಯಾಯಸಮ್ಮತವಲ್ಲ. ಈ ಯೋಜನೆ ಕುರಿತು ಸಭೆಯಲ್ಲಿ ಯಾವ ಕಾರಣಕ್ಕೂ ಚರ್ಚಿಸದಂತೆ ಪ್ರಾಧಿಕಾರದ ಮುಖ್ಯಸ್ಥರಿಗೆ ಸೂಚನೆ ನೀಡಬೇಕೆಂದು ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶಿಸಿ,'' ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಧಾನಿ ಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
"ಕರ್ನಾಟಕ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಿದರೆ, ತಮಿಳುನಾಡಿನ ಸಾವಿರಾರು ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಈ ಯೋಜನೆಗೆ ಅನುಮತಿ ನೀಡಬಾರದು" ಎಂದು ಹೇಳಿರುವ ಸ್ಟಾಲಿನ್ 2021ರ ಜೂನ್ 17ರಂದು ತಮ್ಮ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನೂ ಉಲ್ಲೇಖಿಸಿದ್ದಾರೆ.
ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆ 2022ರ ಮಾರ್ಚ್ 21ರಂದು ಅವಿರೋಧವಾಗಿ ಕೈಗೊಂಡ ನಿರ್ಣಯದ ವಿವರವನ್ನು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ಗೆ ನೀಡಿದ್ದು ಮತ್ತು ಅದಕ್ಕೆ ಜಲಶಕ್ತಿ ಸಚಿವ ಸಕಾರತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಮೇ ತಿಂಗಳಲ್ಲಿ ಕೆಆರ್ಎಸ್ನಲ್ಲಿ 100 ಅಡಿ ನೀರು ಇರುವುದು ಹೇಗೆ?
ಮೇಕೆದಾಟು ಯೋಜನೆ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧ
ಕಾವೇರಿ ನದಿಗೆ ಅಡ್ಡಲಾಗಿ ಹೊಸ ಜಲಾಶಯವನ್ನು ನಿರ್ಮಿಸುವುದು ಕಾವೇರಿ ಜಲವಿವಾದ ನ್ಯಾಯಮಂಡಳಿಯ (ಸಿಡಬ್ಲ್ಯೂಡಿಟಿ) 2007 ರ ಅಂತಿಮ ತೀರ್ಪು ಮತ್ತು ಸುಪ್ರೀಂ ಕೋರ್ಟ್ 2018 ರ ತೀರ್ಪಿಗೆ ವಿರುದ್ಧವಾಗಿದೆ ಎಂದು ಹೇಳಿರುವ ತಮಿಳುನಾಡು ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ.
Recommended Video
ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅನುಮತಿ ಅಗತ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಆದರೆ ಕರ್ನಾಟಕದಲ್ಲಿ ಹೊಸ ಜಲಾಶಯ ನಿರ್ಮಿಸಿದರೆ ತಮಿಳುನಾಡಿಗೆ ನೀರು ಹರಿಸುವುದಕ್ಕೆ ಅಡ್ಡಿಯಾಗುತ್ತದೆ ಎಂಬುದು ತಮಿಳುನಾಡು ಸರ್ಕಾರ ವಾದಿಸುತ್ತಲೇ ಇದೆ.