ತಮಿಳುನಾಡು:1 ಕೋಟಿ ತುಂಬಿದ್ದ ಚೀಲ ವಶಪಡಿಸಿಕೊಂಡ ಚುನಾವಣಾ ಅಧಿಕಾರಿಗಳು
ಚೆನ್ನೈ, ಮಾರ್ಚ್ 25: ತಮಿಳುನಾಡು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಹಣ ತುಂಬಿದ ಚೀಲಗಳು ಹೊರಬೀಳುತ್ತಿವೆ.
ರಸ್ತೆಯಲ್ಲೇ ಎರಡು ಗುಂಪುಗಳ ಮಧ್ಯೆ ಘರ್ಷಣೆ ಶುರುವಾಗಿತ್ತು, ಅದನ್ನು ಬಿಡಿಸಲು ಹೋದ ಪೊಲೀಸರಿಗೆ 1 ಕೋಟಿ ರೂ. ಇದ್ದ ಬ್ಯಾಗ್ ಸಿಕ್ಕಿತ್ತು. ತಕ್ಷಣವೇ ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಣ ವಶಪಡಿಸಿಕೊಂಡಿದ್ದಾರೆ.
ಹಾಗೆಯೇ ಒಂದು ಕೋಟಿ ರೂ. ನಗದು ಎಲ್ಲಿಂದ ಬಂತು ಎಂದು ತನಿಖೆ ಆರಂಭಿಸಿದ್ದಾರೆ. ಆದರೆ ಒಂದು ಗುಂಪು ಅಲ್ಲಿಂದ ಎಸ್ಕೇಪ್ ಆಗಿದ್ದು, ಮತ್ತೊಂದು ಗುಂಪು ಎಐಎಡಿಎಂಕೆಗೆ ಸಂಬಂಧಪಟ್ಟಿದ್ದು, ನಾವು ಇಲ್ಲಿ ಕಾರು ನಿಲ್ಲಿಸಿದ್ದೇವೆ ಅಷ್ಟೇ ಈ ಹಣಕ್ಕೂ, ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಪೆಟ್ಟೈವೈಥಲೈ ಪೊಲೀಸರಿಗೆ ಎರಡು ಗುಂಪುಗಳು ರಸ್ತೆಯಲ್ಲಿ ಜಗಳವಾಡುತ್ತಿರುವ ಕುರಿತು ಮಾಹಿತಿ ಬಂದಿತ್ತು. ತಕ್ಷಣ ಏನಾಗಿದೆ ಎಂದು ನೋಡಲು ಪೊಲೀಸರು ಅಲ್ಲಿಗೆ ಧಾವಿಸಿದ್ದಾರೆ.
ಕಾರ್ ಬಳಿ ಇದ್ದ ಬ್ಯಾಗ್ ತೆಗೆದು ನೋಡಿದಾಗ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ತಕ್ಷಣ ಚುನಾವಣಾ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಈ ಹಣವನ್ನು ರಾಜ್ಯ ಸರ್ಕಾರದ ಖಜಾನೆಯಲ್ಲಿರಿಸಲಾಗಿದೆ. ಪೊಲೀಸರು ಬರುತ್ತಿದ್ದಂತೆ ಒಂದು ಗುಂಪಿನವರು ಜಾಗ ಖಾಲಿ ಮಾಡಿದ್ದು, ಅವರ ಕಾರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications