ತಮಿಳು ಶಾಶ್ವತ, ಜಾಗತಿಕ ಸಂಸ್ಕೃತಿ: ನರೇಂದ್ರ ಮೋದಿ
ಚೆನ್ನೈ, ಮೇ 27: ಇತ್ತೀಚಿನ ತಿಂಗಳುಗಳಲ್ಲಿ ಹಿಂದಿ ಹೇರಿಕೆ ಕುರಿತು ತೀವ್ರ ಚರ್ಚೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮಿಳು ಭಾಷೆ ಶಾಶ್ವತ ಮತ್ತು ತಮಿಳು ಸಂಸ್ಕೃತಿ ಜಾಗತಿಕವಾಗಿದೆ ಎಂದು ಹೇಳಿದ್ದಾರೆ.
ಚೆನ್ನೈನ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ತಮಿಳುನಾಡು ರಾಜ್ಯಕ್ಕೆ ಬರುವುದು ನನಗೆ ಯಾವಾಗಲೂ ವಿಶೇಷವಾಗಿದೆ. ಈ ಭೂಮಿ ಒಂದು ವಿಶೇಷವಾದದ್ದಾಗಿದೆ. ಇಲ್ಲಿನ ಜನರು, ಸಂಸ್ಕೃತಿ, ಭಾಷೆ ಎಲ್ಲವೂ ತುಂಬಾ ಒಳ್ಳೆಯದು, ತಮಿಳು ಭಾಷೆ ಶಾಶ್ವತವಾಗಿದೆ ಅಲ್ಲದೆ ಸಂಸ್ಕೃತಿ ಜಾಗತಿಕವಾಗಿದೆ" ಎಂದು ಹೇಳಿದರು.
ತಮಿಳುನಾಡಿನಲ್ಲಿ 31,500 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಿಲಾನ್ಯಾಸ
"ತಮಿಳು ಮತ್ತು ತಮಿಳು ಸಂಸ್ಕೃತಿಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಕೇಂದ್ರ ಸರಕಾರವು ಸಂಪೂರ್ಣ ಬದ್ಧವಾಗಿದೆ. ಈ ವರ್ಷದ ಜನವರಿಯಲ್ಲಿ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳಿನ ಹೊಸ ಕ್ಯಾಂಪಸ್ ಅನ್ನು ಚೆನ್ನೈನಲ್ಲಿ ಉದ್ಘಾಟಿಸಲಾಗಿದ್ದು, ಹೊಸ ಕ್ಯಾಂಪಸ್ಗೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಹಣ ನೀಡಲಾಗಿದೆ" ಎಂದು ಅವರು ಹೇಳಿದರು.
'ವಂಶ ರಾಜಕೀಯ ಕೊನೆಗೊಳಿಸಲು ಇದು ಸಮಯ'- ಪ್ರಧಾನಿ ನರೇಂದ್ರ ಮೋದಿ
ತಮಿಳುನಾಡಿನಲ್ಲಿ ಪೂರ್ಣಗೊಂಡಿರುವ ಹೊಸ ಯೋಜನೆಗಳನ್ನು ಉದ್ಘಾಟಿಸಿ ಮತ್ತು ಹೊಸ ಯೋಜನೆಗಳಿಗೆ ಅಡಿಗಲ್ಲು ಹಾಕಿದ ನಂತರ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ತಮಿಳನ್ನು ಹೊಗಳಿ ಕವಿ ಸುಬ್ರಹ್ಮಣ್ಯ ಭಾರತಿ ಜನಪ್ರಿಯ ಪದ್ಯವನ್ನು ಉಲ್ಲೇಖಿಸಿದರು ಮತ್ತು ಪ್ರತಿ ಕ್ಷೇತ್ರದಲ್ಲೂ ತಮಿಳುನಾಡಿನವರು ಶ್ರೇಷ್ಠರಾಗಿದ್ದಾರೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಪತ್ರವನ್ನು ಬರೆದಿದ್ದ ಸ್ಟಾಲಿನ್
ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ತಮಿಳನ್ನು ಹಿಂದಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಹೇಳಿದ ಬೆನ್ನಲ್ಲೇ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ. ಸ್ಟಾಲಿನ್ ತನ್ನ ಬೇಡಿಕೆಯೊಂದರಲ್ಲಿ, ರಾಜ್ಯದ ಹೈಕೋರ್ಟ್ ಮತ್ತು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂದು ಸ್ಟಾಲಿನ್ ಕೆಲವು ದಿನಗಳ ಹಿಂದೆ ಪತ್ರವನ್ನು ಬರೆದಿದ್ದು, ಈಗ ಕಾರ್ಯಕ್ರಮದಲ್ಲೂ ಕೇಳಿಕೊಂಡರು.
ಭಾಷೆಯ ವಿವಾದವು ಮರುಕಳಿಸಿತ್ತು
ಹಿಂದಿಯನ್ನು ಇಂಗ್ಲಿಷ್ಗೆ ಪರ್ಯಾಯವಾಗಿ ಸ್ವೀಕರಿಸಬೇಕು ಮತ್ತು ದೇಶಾದ್ಯಂತ ಸ್ಥಳೀಯ ಭಾಷೆಗಳಿಗೆ ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದಾಗ ಭಾಷೆಯ ವಿವಾದವು ಮರುಕಳಿಸಿತ್ತು. ಏಪ್ರಿಲ್ 10ರಂದು, ಸ್ಟಾಲಿನ್ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಿಂದಿ ಹೇರಿಕೆಯ ಯಾವುದೇ ಹೊಸ ಪ್ರಯತ್ನದ ವಿರುದ್ಧ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತು ಮತ್ತು ಅದರ ವಿರುದ್ಧ ಹೋರಾಡಲು ಜನರನ್ನು ಪ್ರೇರೇಪಿಸಿತ್ತು.
ಹಿಂದಿ ವಿರೋಧಿ ಆಂದೋಲನವನ್ನು ನೆನಪಿಸಿಕೊಳ್ಳುತ್ತಾರೆ
ಹಿಂದಿ ಹೇರಿಕೆಯ ಈ ಕ್ರಮವು ರಾಷ್ಟ್ರದ ಸಮಗ್ರತೆಯನ್ನು ಹಾಳುಮಾಡುತ್ತದೆ. ಕರುಣಾನಿಧಿ ನೇತೃತ್ವದ ಹಿಂದಿ ವಿರೋಧಿ ಆಂದೋಲನವನ್ನು ತಮಿಳು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ ಎಂದು ಪಕ್ಷದ ಮುಖವಾಣಿ ಮುರಸೋಲಿಯಲ್ಲಿನ ಲೇಖನ ಹೇಳಿದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಕ್ರಮವನ್ನು ಕಟುವಾಗಿ ವಿರೋಧಿಸುವಂತೆ ಲೇಖನವು ಜನರಿಗೆ ಕರೆ ನೀಡಿದೆ. ರಾಷ್ಟ್ರೀಯ ಭಾಷೆ ಮತ್ತು ಪ್ರಾದೇಶಿಕ ಭಾಷೆಯ ಸುತ್ತ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಹಲವಾರು ದಶಕಗಳಿಂದ ಡಿಎಂಕೆ ಮುಂಚೂಣಿಯಿಂದ ಪ್ರತಿಭಟನೆಗಳನ್ನು ನಡೆಸುತ್ತಿದೆ.
ಅಪಾರ ಅಭಿಮಾನವನ್ನು ಎಲ್ಲಿದ್ದರೂ ಬಿಟ್ಟುಕೊಡುವುದಿಲ್ಲ
ಭಾಷೆ ವಿಚಾರವಾಗಿ ತಮಿಳುನಾಡು ಜನರು ಎಂದಿಗೂ ರಾಜಿಯಾದವರಲ್ಲ. ಭಾಷೆ, ನೀರು, ನೆಲೆ ಎಂದು ಅಪಾರ ಅಭಿಮಾನವನ್ನು ಅವರು ಎಲ್ಲಿದ್ದರೂ ಬಿಟ್ಟುಕೊಡುವುದಿಲ್ಲ. ಹಾಗಾಗಿ ಪ್ರಧಾನಿ ಮೋದಿ ತಮ್ಮ ಚೆನ್ನೈ ಭೇಟಿಯಲ್ಲಿತಮಿಳುನಾಡು ಜನರ ಎದುರು ತಮಿಳು ಭಾಷೆಯನ್ನು ಹೊಗಳಿರುವುದು ಈಗ ಚರ್ಚೆಯ ವಿಷಯವಾಗಿದೆ.