ಚೆನ್ನೈನಲ್ಲಿ ಎಬೋಲಾ ಅನುಮಾನ, ವ್ಯಕ್ತಿ ಆಸ್ಪತ್ರೆಗೆ
ಚೆನ್ನೈ, ಆ.10: ಆಫ್ರಿಕಾದಿಂದ ಚೆನ್ನೈಗೆ ಬಂದಿರುವ ವ್ಯಕ್ತಿಯೊಬ್ಬರಿಗೆ ಎಬೋಲಾ ವೈರಾಣು ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ, ಗಿನಿಯಾದಿಂದ ಬಂದಿರುವ ಥೇಣಿ ಮೂಲದ ಪಾರ್ಥಿಬನ್ ಎಂಬ ವ್ಯಕ್ತಿಯನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಲಾಗುತ್ತಿದೆ.
ಎಮಿರೈಟ್ಸ್ ವಿಮಾನ ಮೂಲಕ ಆಫ್ರಿಕಾ ಖಂಡದ ಗಿನಿಯಾ ದೇಶದಿಂದ ಚೆನ್ನೈನ ವಿಮಾನ ನಿಲ್ದಾಣಕ್ಕೆ ಶನಿವಾರ ಬಂದಿಳಿದ 25 ವರ್ಷ ವಯಸ್ಸಿನ ಪಾರ್ಥಿಬನ್ ಎಂಬ ಪ್ರಯಾಣಿಕನನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾಗಿದ್ದು, ಎಬೋಲಾ ಸೋಂಕು ಇರುವುದು ಪತ್ತೆಯಾಗಿದೆ. ಹೀಗಾಗಿ ತಕ್ಷಣವೇ ಜಿಎಚ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಎಬೋಲಾ ವೈರಾಣು ಕಾಯಿಲೆ ಇರುವ ಬಗ್ಗೆ ಖಚಿತಪಡಿಸಲಾಗುವುದು ಎಂದು ವೈದ್ಯಾಧಿಕಾರಿ ಹೇಳಿದ್ದಾರೆ.
ಎಬೋಲಾ ರೋಗಿಗಳ ಚಿಕಿತ್ಸೆಗೆ ವಿಶೇಷ ವಾರ್ಡ್ ಆರಂಭಿಸಲಾಗಿದ್ದು, ಡಾಕ್ಟರ್ ಅಲ್ಲದೆ ನರ್ಸ್, ವಾರ್ಡ್ ಬಾಯ್ ಸೇರಿದಂತೆ ಎಲ್ಲರೂ ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಇತರೆ ವಾರ್ಡ್ ಗಳಿಂದ ಈ ವಾರ್ಡ್ ಪ್ರತ್ಯೇಕಿಸಲಾಗಿದೆ. ಶಂಕಿತ ವ್ಯಕ್ತಿಯ ರಕ್ತದ ಸ್ಯಾಂಪಲ್ ಗಳನ್ನು ಪುಣೆಗೆ ಕಳಿಸಲಾಗಿದ್ದು, ರಕ್ತದ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕಟ್ಟೆಚ್ಚರ: ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಎಬೋಲಾ ರೋಗವು ರಾಜ್ಯ ಪ್ರವೇಶಿಸದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನ ವಿಮಾನ ನಿಲ್ದಾಣ ನಂತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿರುವ ವಿದೇಶಿ ಪ್ರಯಾಣಿಕರನ್ನು ತಕ್ಷಣವೇ ತಪಾಸಣೆ ನಡೆಸಲಾಗುತ್ತಿದೆ. ಶಂಕಿತರನ್ನು ಪರೀಕ್ಷಿಸಲು ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 15 ಹಾಸಿಗೆಗಳ ವಿಶೇಷ ವಾರ್ಡ್ ಕೂಡಾ ತೆರೆಯಲಾಗಿದೆ ಎಂದಿದ್ದಾರೆ.
ಎಬೋಲಾ ವೈರಸ್ ಗಾಳಿ ಅಥವಾ ನೀರಿನ ಮೂಲಕ ಸಾಂಕ್ರಾಮಿಕವಾಗಿ ಹರಡುವುದಿಲ್ಲ. ರೋಗ ಪೀಡಿತ ರಕ್ತ, ಜಿಹ್ವಾರಸ, ಮೂತ್ರ ಮುಂತಾದವುಗಳ ಸೋಕುವಿಕೆಯಿಂದ ಹರಡುತ್ತದೆ. ಮಲೇರಿಯಾ, ಕಾಲರ, ವೈರಲ್ ಫೀವರ್ ಮಾದರಿಯಲ್ಲೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ, ಗಂಟಲು ನೋವು, ಕೈಕಾಲು ನೋವು, ತಲೆನೋವಿನೊಂದಿಗೆ ಆರಂಭವಾಗಿ ಆಮಶಂಕೆ, ಕರಳು ಬೇನೆ, ಕಿಡ್ನಿ ವೈಫಲ್ಯ ಉಂಟಾಗಲಿದೆ. ಕೊನೆ ಕೊನೆಗೆ ರಕ್ತ ಸ್ರಾವ ಉಂಟಾಗಿ ರೋಗಿ ಸಾವನ್ನಪ್ಪುತ್ತಾನೆ. [ಇಲ್ಲಿವರೆಗಿನ ಸಾವು ನೋವಿನ ಪಟ್ಟಿ]
ಭಾರತದಲ್ಲಿ ಮಾರಕ ಎಬೋಲಾ ಕಾಯಿಲೆ ಭೀತಿ ಆವರಿಸಿದೆ. ಎಬೋಲಾ ಹರಡುವುದನ್ನು ತಡೆಯುವ ಕ್ರಮಗಳ ಅಂಗವಾಗಿ ದೇಶದ ಎಲ್ಲ ವಿಮಾನ ನಿಲ್ದಾಣಗಳನ್ನು ಜಾಗೃತಗೊಳಿಸಲಾಗಿದ್ದು, ತುರ್ತು ಸಹಾಯ ವಾಣಿಯೊಂದನ್ನು ಆರಂಭಿಸಲಾಗಿದೆ. [ಹೆಚ್ಚಿನ ವಿವರ ಇಲ್ಲಿ ಓದಿ]












Click it and Unblock the Notifications