ದಿನಕರನ್ ಗೆ ಹಿನ್ನಡೆ, ಪ್ರೆಶರ್ ಕುಕ್ಕರ್ ಚಿಹ್ನೆ ನೀಡಲು ಸುಪ್ರೀಂ ನಕಾರ
ನವದೆಹಲಿ, ಫೆಬ್ರವರಿ 07: 'ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ'(ಎಎಂಎಂಕೆ) ಪಕ್ಷಕ್ಕೆ ಪ್ರೆಶರ್ ಕುಕ್ಕರ್ ಚಿಹ್ನೆಯನ್ನು ನೀಡಲು ಸುಪ್ರೀಂ ಕೋರ್ಟ್ ಗುರುವಾರದಂದು ನಿರಾಕರಿಸಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿದೆ. ಹೀಗಾಗಿ, ಟಿಟಿವಿ ದಿನಕರನ್ ಅವರಿಗೆ ಹಿನ್ನಡೆಯುಂಟಾಗಿದೆ.
ದಿನಕರನ್ ಬಣದ ಎಐಎಡಿಎಂಕೆ(ಅಮ್ಮ) ಪಕ್ಷಕ್ಕೆ ಪ್ರೆಷರ್ ಕುಕ್ಕರ್ನ್ನು ಚಿಹ್ನೆಯಾಗಿ ನೀಡುವಂತೆ ಚುನಾವಣೆ ಆಯೋಗಕ್ಕೆ ಕಳೆದ ಮಾರ್ಚ್ ನಲ್ಲಿ ಕೋರ್ಟ್ ಆದೇಶಿಸಿತ್ತು. ತಿರುವರೂರ್ ಉಪ ಚುನಾವಣೆಗೆ ತಾತ್ಕಾಲಿಕವಾಗಿ ಚಿಹ್ನೆ ನೀಡಿದೆ.
ಚುನಾವಣಾ ಚಿಹ್ನೆ ಹಂಚಿಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪ್ರಕರಣವನ್ನು ಮುಂದಿನ ನಾಲ್ಕು ವಾರಗಳಲ್ಲಿ ಹೈಕೋರ್ಟ್ ಇತ್ಯರ್ಥ ಮಾಡದಿದ್ದರೆ, ಮಾರ್ಚ್ 09, 2018ರ ಆದೇಶದನ್ವಯ ಚುನಾವಣೆ ಆಯೋಗ ನಿರ್ಧಾರ ಕೈಗೊಳ್ಳಬಹುದು ಎಂದು ನ್ಯಾ. ಎ ಎಂ ಖಾನ್ವಿಲ್ಕರ್ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿದೆ.

ತಮಿಳುನಾಡಿನಲ್ಲಿ ಸದ್ಯ ಖಾಲಿ ಇರುವ ಸ್ಥಾನಗಳಿಗೆ ನಾಲ್ಕು ವಾರಗಳಲ್ಲಿ ಚುನಾವಣೆಯನ್ನು ಘೋಷಿಸಿದ್ದೇ ಆದರೆ ಇನ್ನೊಂದು ವಾರದಲ್ಲಿ ಟಿಟಿವಿ ದಿನಕರನ್ ಪಕ್ಷಕ್ಕೆ ಹೊಸ ಚಿಹ್ನೆಯನ್ನು ಹೈಕೋರ್ಟ್ ಆದೇಶದ ಪ್ರಕಾರ ಚುನಾವಣೆ ಆಯೋಗ ನೀಡಬೇಕಾಗುತ್ತದೆ.
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಣವು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಬಳಿಕ ದಿನಕರನ್ ಗುಂಪಿನ ಪಕ್ಷದ ಚಿಹ್ನೆಯಾಗಿ ಪ್ರೆಷರ್ ಕುಕ್ಕರ್ ನೀಡುವಂತೆ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಅಮಾನತು ಮಾಡಿತ್ತು.
ಪಳನಿಸ್ವಾಮಿ ನೇತೃತ್ವದ ಗುಂಪಿಗೆ ಎರಡು ಎಲೆಗಳ ಚಿಹ್ನೆಯನ್ನು ನೀಡಿ ನವೆಂಬರ್ 23, 2017 ರಂದು ಚುನಾವಣೆ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದಿನಕರನ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಜಯಲಲಿತಾ ಅವರು ಪ್ರತಿನಿಧಿಸಿದ್ದ ಚೆನ್ನೈನ ಆರ್.ಕೆ.ನಗರ ಕ್ಷೇತ್ರದಲ್ಲಿ ಪ್ರೆಷರ್ ಕುಕ್ಕರ್ ಚಿಹ್ನೆಯೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ದಿನಕರನ್ ಅವರು ಪ್ರೆಷರ್ ಕುಕ್ಕರ್ ಅನ್ನೇ ಚಿಹ್ನೆಯಾಗಿ ನೀಡುವಂತೆ ಕೋರಿದ್ದರು.












Click it and Unblock the Notifications