ಶಿಸ್ತು ಉಲ್ಲಂಘಿಸಿದರೆ ಅಭಿಮಾನಿ ಸಂಘದಿಂದ ಗೇಟ್ ಪಾಸ್: ರಜನಿ
ರಜನಿ ತಮ್ಮ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಿಸ್ತು ಉಲ್ಲಂಘಿಸಿದರೆ ಮುಲಾಜಿಲ್ಲದೆ ಅಭಿಮಾನಿ ಸಂಘದಿಂದ ಹೊರ ಹಾಕಿ ಎಂದು ಸಂಘದ ಹಿರಿಯರಿಗೆ ಸೂಚನೆ ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಚೆನ್ನೈ, ಮೇ 25: ಶಿಸ್ತಾಗಿ ಇರಲಿಲ್ಲ ಅಂದರೆ, ಅಭಿಮಾನಿ ಸಂಘದ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅಂಥವರನ್ನು ಸಂಘದಿಂದ ಹೊರ ಹಾಕಲಾಗುತ್ತದೆ ಎಂದು ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಗುರುವಾರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಾವುದೇ ನಿರ್ದಿಷ್ಟ ಘಟನೆಯನ್ನು ಉದಾಹರಿಸಿ ಈ ಎಚ್ಚರಿಕೆಯನ್ನು ನೀಡಿಲ್ಲ.
ಆದರೆ, ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ಬಿಟ್ಟು ಕೊಟ್ಟ ಮೇಲೆ ಚೆನ್ನೈ ಸೇರಿದಂತೆ ನಾನಾ ಕಡೆ ಇದೇ ವಿಚಾರವಾಗಿ ಪೋಸ್ಟರ್ ಗಳನ್ನು ಹಾಕಲಾಗುತ್ತಿದೆ. ಇನ್ನು ರಜನಿ ರಾಜಕೀಯ ಪ್ರವೇಶವನ್ನು ವಿರೋಧಿಸುತ್ತಿರುವ ಕೆಲವು ಗುಂಪುಗಳ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.[ಖಾಮೋಶ್, ಬೇರೆ ಪಕ್ಷಗಳೇ ರಜನಿ ಪಕ್ಷವನ್ನು ಸೇರಲಿ!]
ಇನ್ನೂ ಕೆಲ ಅಭಿಮಾನಿಗಳು ರಜನಿ ರಾಜಕೀಯ ಪ್ರವೇಶವನ್ನು ವಿರೋಧಿಸುತ್ತಿರುವವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಮಧ್ಯೆ ರಜನೀಕಾಂತ್ ಪ್ರಕಟಣೆ ಹೊರಡಿಸಿ, ಅಖಿಲ ಭಾರತ ರಜನೀಕಾಂತ್ ಅಭಿಮಾನಿಗಳ ಹಿತರಕ್ಷಣಾ ವೇದಿಕೆಯ ಹಿರಿಯರಾದ ವಿಎಂ ಸುಧಾಕರ್ ಅವರಿಗೆ ಅಧಿಕಾರ ನೀಡಿದ್ದೇನೆ. ಯಾವುದೇ ಅಶಿಸ್ತಿನ ನಡವಳಿಕೆ ತೋರುವವರನ್ನು ಸಂಘದಿಂದ ತೆಗೆದುಹಾಕಲು ಸೂಚಿಸಿದ್ದೇನೆ ಎಂದಿದ್ದಾರೆ.
ಕಳೆದ ವಾರ ಅಭಿಮಾನಿಗಳನ್ನು ಭೇಟಿಯಾಗಿ ಮಾತನಾಡಿದ್ದ ರಜನೀಕಾಂತ್, ಸ್ಟಾಲಿನ್, ಅನ್ಬುಮಣಿಯಂಥ ನಾಯಕರಿದ್ದರೂ ವ್ಯವಸ್ಥೆ ಬದಲಾವಣೆ ಆಗಿಲ್ಲ ಎಂದಿದ್ದರು. ರಜನಿ ಕನ್ನಡ ಮೂಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದವರಿಗೆ, ನಾನು ಅಪ್ಪಟ ತಮಿಳಿಗ ಎಂದು ಉತ್ತರಿಸಿದ್ದರು.