ರಜನಿಕಾಂತ್ ಹಿಡಿಶಾಪದ ಟ್ವೀಟ್ ವೈರಲ್: ಆದರೆ, ತಮಿಳುನಾಡು ಸರಕಾರ ಡೋಂಟ್ ಕೇರ್?
ರಾಜಕೀಯದಲ್ಲಿ ತಾನು ಅಂದುಕೊಂಡಿದ್ದನ್ನು ಸಾಧಿಸಲು ರಜನಿಕಾಂತ್ ಗೆ ಹಿನ್ನಡೆಯಾಗುತ್ತಿದ್ದರೂ, ತಮಿಳುನಾಡಿನಲ್ಲಿ ರಜನಿ ಮಾತಿಗೆ ಬೆಲೆಯಿದ್ದೇ ಇದೆ. ಹಾಗಾಗಿಯೇ, ರಜನಿ ಮಾಡಿರುವ ಒಂದು ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇ.ಪಳನಿಸ್ವಾಮಿ ನೇತೃತ್ವದ ಸರಕಾರದ ವಿರುದ್ದ ರಜನಿಕಾಂತ್ ಕೆಂಡಕಾರಿದ್ದಾರೆ. ತಮಿಳುನಾಡು ಸರಕಾರದ ವಿರುದ್ದ ರಜನಿ ಗರಂ ಆಗಲು ಕಾರಣವಾಗಿದ್ದು ಮದ್ಯ ಮಾರಾಟದ ವಿಚಾರ.
ಮದ್ಯದಂಗಡಿಗಳನ್ನು ತೆರೆಯಲು ಅನುಮತಿ, ರಜನಿಕಾಂತ್ ಗರಂ
45 ದಿನಗಳ ನಂತರ ಸರಕಾರೀ ಒಡೆತನದ ಮದ್ಯದ ಮಳಿಗೆಗಳನ್ನು ಆರಂಭಿಸಲು ತಮಿಳುನಾಡು ಸರಕಾರ ಆದೇಶ ನೀಡಿತ್ತು. ಆದರೆ, ಸರಕಾರದ ನಿರ್ಧಾರಕ್ಕೆ ಸಿಟ್ಟಾದ ಮದರಾಸು ಹೈಕೋರ್ಟ್ ತಕ್ಷಣದಿಂದಲೇ ಮದ್ಯ ಮಾರಾಟ ನಿಲ್ಲಿಸಲು ಸೂಚಿಸಿತ್ತು.
ಮದರಾಸು ಹೈಕೋರ್ಟಿನ ತೀರ್ಪಿಗೆ ತಡೆನೀಡಲು ತಮಿಳುನಾಡು ಸರಕಾರ, ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ್ದು ತಲೈವಾ ರಜನಿಕಾಂತ್ ಸಿಟ್ಟಿಗೆ ಕಾರಣ. ರಜನಿ ಮಾಡಿದ ಟ್ವೀಟ್ ಹೀಗಿದೆ:
ಸಿಎಂ ಆಗುವ ಬಗ್ಗೆ ನಾನು ಎಂದೂ ಯೋಚಿಸಿಲ್ಲ: ರಜನಿ
ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ನಿಗಮ
ದೇಶದ ಬಹುತೇಕ ರಾಜ್ಯಗಳಲ್ಲಿ ಮೇ ನಾಲ್ಕರಿಂದ ಮದ್ಯ ಮಾರಾಟ ಮಾಡಲು ಕೇಂದ್ರ ಸರಕಾರ ಅನುವು ಮಾಡಿಕೊಟ್ಟಿತ್ತು. ಆದರೆ, ಪಳನಿಸ್ವಾಮಿ ಸರಕಾರ, ಎರಡು ದಿನದ ನಂತರ, ಅಂದರೆ ಮೇ ಆರರಿಂದ, ಸರಕಾರೀ ಒಡೆತನದ 'ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ನಿಗಮ' ಮೂಲಕ ಪಾರ್ಸೆಲ್ ವ್ಯವಸ್ಥೆಗೆ ಗ್ರೀನ್ ಸಿಗ್ನಲ್ ನೀಡಿತ್ತು.
ರಜನಿಕಾಂತ್ ಹಿಡಿಶಾಪದ ಟ್ವೀಟ್ ವೈರಲ್
"ಇಂತಹ ಆರೋಗ್ಯ ಎಮರ್ಜೆನ್ಸಿಯ ಸಮಯದಲ್ಲಿ ರಾಜ್ಯ ಸರಕಾರ ಮದ್ಯದಂಗಡಿಗಳನ್ನು ತೆರೆದರೆ, ಮತ್ತೆ ಎಐಡಿಎಂಕೆ ಮುಂದಿನ ಬಾರಿ ಅಧಿಕಾರಕ್ಕೆ ಬರುವ ಕನಸನ್ನು ಮರೆತುಬಿಡಬೇಕು. ಈ ರೀತಿಯ ಕಠಿಣ ಪರಿಸ್ಥಿತಿಯಲ್ಲಿ ಮದ್ಯದಂಗಡಿಯನ್ನು ಓಪನ್ ಮಾಡುವುದರ ಬದಲು ಸರಕಾರದ ಬೊಕ್ಕಸ ತುಂಬಿಸಲು ಬೇರೆ ಉತ್ತಮ ಮಾರ್ಗಗಳನ್ನು ದಯವಿಟ್ಟು ಹುಡುಕಿ" ಎಂದು ರಜನಿ ಟ್ವೀಟ್ ಮಾಡಿದ್ದರು.
ಸುಪ್ರೀಂಕೋರ್ಟ್ ಮೊರೆ
ಆದರೆ, ರಜನಿಕಾಂತ್ ಟ್ವೀಟ್ ಮಾಡಿದ ಒಂದು ದಿನದ ಮೊದಲೇ ತಮಿಳುನಾಡು ಸರಕಾರ, ಮದರಾಸು ಕೋರ್ಟ್ ಆರ್ಡರ್ ಗೆ ತಡೆ ನೀಡಬೇಕೆಂದು ಸುಪ್ರೀಂಕೋರ್ಟ್ ಮೊರೆಹೋಗಿತ್ತು. ಈ ವಿಚಾರಣೆಯನ್ನು ಸೋಮವಾರ ಅಥವಾ ಮಂಗಳವಾರ, ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ತಮಿಳುನಾಡು ಸರಕಾರ
ರಜನಿಕಾಂತ್ ಟ್ವೀಟ್ ಮಾಡಿದ ನಂತರ, ಸುಪ್ರೀಂಕೋರ್ಟ್ ನಲ್ಲಿರುವ ತನ್ನ ಅರ್ಜಿಯನ್ನು ತಮಿಳುನಾಡು ಸರಕಾರ ಹಿಂದಕ್ಕೆ ಪಡೆಯುತ್ತದೋ ಎಂದು ಕಾದು ನೋಡಬೇಕಿದೆ. ದೇಶದ ಎಲ್ಲಾ ಸರಕಾರಕ್ಕೆ ಅಬಕಾರಿ, ಪ್ರಮುಖ ಆದಾಯದ ಮೂಲವಾಗಿರುವುದರಿಂದ, ತಮಿಳುನಾಡು ಸರಕಾರ, ರಜನೀಕಾಂತ್ ಸಿಟ್ಟಿಗೆ ಸೊಪ್ಪು ಹಾಕುವ ಸಾಧ್ಯತೆ ಕಮ್ಮಿ.
ಫಿಲಂ ಸ್ಟೈಲಿನಲ್ಲಿ ಟ್ವೀಟ್ ಮೂಲಕ ಡೈಲಾಗ್ ಹೊಡೆದರೇ
ಜೊತೆಗೆ, ತಮಿಳುನಾಡು ಸರಕಾರ, ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ ಒಂದು ದಿನದ ನಂತರ, ರಜನಿಕಾಂತ್ ಹಿಡಿಶಾಪ ಹಾಕಿದರೆ ಪ್ರಯೋಜನವೇನು? ಮುಖ್ಯಮಂತ್ರಿಗಳಿಗೆ ಅರ್ಜಿ ಹಿಂದಕ್ಕೆ ಪಡೆಯುವಂತೆ ರಜನಿಕಾಂತ್ ಮನವಿ ಮಾಡಿದರೇ, ಅಥವಾ ತನ್ನ ಎಂದಿನ ಫಿಲಂ ಸ್ಟೈಲಿನಲ್ಲಿ ಟ್ವೀಟ್ ಮೂಲಕ ಡೈಲಾಗ್ ಹೊಡೆದರೇ ಎನ್ನುವ ಪ್ರಶ್ನೆ ಕಾಡುವುದು ಸಹಜ.