ರಾಮೇಶ್ವರಂನಲ್ಲಿ ಇಂದು ಅಬ್ದುಲ್ ಕಲಾಂ ಸ್ಮಾರಕ ಲೋಕಾರ್ಪಣೆ
ಚೆನ್ನೈ, ಜುಲೈ 27 : ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ 2ನೇ ಪುಣ್ಯ ಸ್ಮರಣೆ ದಿನದ ಅಂಗವಾಗಿ ಇಂದು (ಗುರುವಾರ) ತಮಿಳುನಾಡಿನ ರಾಮೇಶ್ವರದ ಪೈಕರಂಬುವಿನಲ್ಲಿ ನಿರ್ಮಿಸಿರುವ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ.
ರಾಮೇಶ್ವರಂ :ಅಬ್ದುಲ್ ಕಲಾಂ ಪುಣ್ಯ ಸ್ಮರಣೆ, ಪ್ರತಿಮೆ ಅನಾವರಣ
15 ಕೋಟಿ ವೆಚ್ಚದಲ್ಲಿ 4 ಟನ್ ಭಾರ ಮತ್ತು 45 ಅಡಿ ಎತ್ತರದ ಅಗ್ನಿ-2 ಕ್ಷಿಪಣಿಯ ಮಾದರಿ ಮತ್ತು ಕಲಾಂ ಅವರ ಏಳು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ನಿರ್ಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸ್ಮಾರಕವನ್ನು ಉದ್ಘಾಟಿಸುವರು.
ಇದೇ ವೇಳೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನ ಸಿದ್ಧಪಡಿಸಿರುವ ಡಿಜಿಟಲ್ ಸಂಚಾರಿ ವಸ್ತುಸಂಗ್ರಹಾಲಯಕ್ಕೆ ಮೋದಿ ಚಾಲನೆ ನೀಡಲಿದ್ದಾರೆ.
ಕಲಾಂ ಅವರ ಸಾಧನೆ, ಅಗ್ನಿ ಕ್ಷಿಪಣಿ, ಪೋಖ್ರಾನ್-2 ಪರಮಾಣು ಪರೀಕ್ಷೆ ಕುರಿತ ಅಪರೂಪದ ಛಾಯಾಚಿತ್ರಗಳು ಸಂಚಾರಿ ವಸ್ತುಸಂಗ್ರಹಾಲಯ ವಾಹನದಲ್ಲಿ ಪ್ರದರ್ಶನಗೊಳ್ಳಲಿವೆ.
'ದೇಶದಾದ್ಯಂತ ಸಂಚಾರ ನಡೆಸಿದ ಬಳಿಕ ವಾಹನವು ಕಲಾಂ ಜನ್ಮದಿನವಾದ ಅಕ್ಟೋಬರ್ 15ರಂದು ದೆಹಲಿಯ ರಾಷ್ಟ್ರಪತಿ ಭವನಕ್ಕೆ ತಲುಪಲಿದೆ' ಎಂದು ಪ್ರತಿಷ್ಠಾನ ಹೇಳಿದೆ.
ಭಾರತರತ್ನ, ವಿಜ್ಞಾನಿ, ಮಾಜಿ ರಾಷ್ಟ್ರಪತಿ ದಿವಂಗತ ಡಾ. ಅಬ್ದುಲ್ ಕಲಾಂ ಅವರ ಪ್ರಥಮ ಪುಣ್ಯ ಸ್ಮರಣೆ ದಿನದಂದು ಇದೇ ರಾಮೇಶ್ವರಂನಲ್ಲಿ ಆಳೆತ್ತರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು.