ಕೊರೊನಾ ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಕ್ರಿಯೆಗೂ ಅಡ್ಡಿ
ಚೆನ್ನೈ, ಏಪ್ರಿಲ್ 21: ತನ್ನ ಜೀವವನ್ನೇ ಲೆಕ್ಕಿಸದೆ ಸಾವಿರಾರು ಮಂದಿಯ ಕೊರೊನಾ ಸೋಂಕು ಗುಣಪಡಿಸಿ ಕೊನೆಗೆ ಮೃತಪಟ್ಟ ವೈದ್ಯರ ಅಂತ್ಯಕ್ರಿಯೆಗೂ ಜನರು ತಡೆಯೊಡ್ಡಿದ್ದಾರೆ.
ಓರ್ವ ಸರ್ಜನ್ ತನ್ನ ಸಹೋದ್ಯೋಗಿಯ ಅಂತ್ಯಕ್ರಿಯೆಯನ್ನು ನೆರವೇರಿಸಲು ಆಂಬ್ಯುಲೆನ್ಸ್ ಮೂಲಕ ಇಬ್ಬರು ವಾರ್ಡ್ಬಾಯ್ಸ್ ಗಳನ್ನು ಕಡೆದುಕೊಂಡು ಹೋಗುತ್ತಿರುವಾಗ ಆಂಬ್ಯುಲೆನ್ಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿದ್ದಾರೆ.
ಡಾ. ಸೈಮನ್ ಹರ್ಕ್ಯೂಲೆಸ್ ಭಾನುವಾರ ಕೊರೊನಾ ವೈರಸ್ನಿಂದ ಮೃತಪಟ್ಟಿದ್ದಾರೆ. ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಜನರು ಬಿಟ್ಟಿಲ್ಲ. ಶವದಿಂದ ಬೇರೆಯವರಿಗೆ ಸೋಂಕು ತಗುಲುತ್ತದೆ ಎಂದು ಅಡ್ಡಿಪಪಡಿಸಿದರು.

ಚೆನ್ನೈ ನಲ್ಲಿ ಈ ಘಟನೆ ನಡೆದಿದೆ. 55 ವರ್ಷದ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದರು. ಅಂತ್ಯಕ್ರಿಯೆ ನಡೆಸುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಆರೋಗ್ಯ ಅಧಿಕಾರಿಗಳಿದ್ದ ಆಂಬ್ಯುಲೆನ್ಸ್ ಮೇಲೆ ದಾಳಿಯನ್ನೂ ನಡೆಸಿದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಪ್ರತಿಭಟನಾ ನಿರತ 20 ಜನರನ್ನು ಬಂಧಿಸಿದ ನಂತರ ಅಂತ್ಯಕ್ರಿಯೆ ನಡೆದಿದೆ. ನಗರದಲ್ಲಿ ಈ ರೀತಿ ನಡೆದಿರುವ 2 ನೇ ಘಟನೆ ಇದಾಗಿದೆ.
ಕೆಲವು ದಿನಗಳ ಹಿಂದೆ ನೆಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಕೊವಿಡ್-19 ರಿಂದ ಮೃತಪಟ್ಟಿದ್ದರು. ಅಂತ್ಯಕ್ರಿಯೆ ನಡೆಸಲು ಸ್ಥಳೀಯರು ವಿರೋಧಿಸಿದ್ದರು. ಈಗ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಮೃತಪಟ್ಟಿದ್ದು ಅವರ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತವಾಗಿರುವುದು ವೈದ್ಯಕೀಯ ಸಮುದಾಯಕ್ಕೆ ಆಘಾತ ಉಂಟುಮಾಡಿದೆ.












Click it and Unblock the Notifications