ಮೋದಿ ಸಂಪುಟದಲ್ಲಿ ತಮಿಳುನಾಡು ಡಿಸಿಎಂ ಪುತ್ರನಿಗೆ ಸಚಿವ ಸ್ಥಾನ
ಚೆನ್ನೈ, ಮೇ 30: ಎಐಎಡಿಎಂಕೆ ಅಧಿನಾಯಕಿ ದಿವಂಗತ ಜಯಲಲಿತಾ ಅವರಿಲ್ಲದೆ ಈ ಬಾರಿ ಚುನಾವಣೆಯಲ್ಲಿ ಪಕ್ಷ ಕಳಪೆ ಪ್ರದರ್ಶನ ನೀಡಿದೆ. ಆದರೆ, ಮಿತ್ರಪಕ್ಷಗಳಿಗೂ ಸಮಪಾಲು ಘೋಷಿಸಿರುವ ಮೋದಿ ಅವರು ಎಐಎಡಿಎಂಕೆಯ ಏಕೈಕ ಸಂಸದ, ತಮಿಳುನಾಡಿನ ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರ ಪುತ್ರ ಓಪಿ ರವೀಂದ್ರನಾಥ್ ಕುಮಾರ್ ಅವರಿಗೆ ಅವಕಾಶ ನೀಡುತ್ತಿದ್ದಾರೆ.
ಈ ಮೂಲಕ 20 ವರ್ಷಗಳ ಬಳಿಕ ಕೇಂದ್ರ ಕ್ಯಾಬಿನೆಟ್ ದರ್ಜೆ ಸ್ಥಾನವನ್ನು ಎಐಎಡಿಎಂಕೆ ಪಡೆದುಕೊಳ್ಳುತ್ತಿದೆ. ರವೀಂದ್ರನಾಥ್ ಅವರು ಥೇಣಿ ಲೋಕಸಭಾ ಕ್ಷೇತ್ರದಲ್ಲಿ 5,04,813 ಮತ(43.02%) ಗಳಿಸಿ ಜಯಗಳಿಸಿದರೆ, ಕಾಂಗ್ರೆಸ್ಸಿನ ಇಳಂಗೋವನ್ 4,28,120(36.48%) ಮತ ಗಳಿಸಿ ಸೋಲು ಕಂಡರು.
2011-16ರಲ್ಲಿ ತಂಜಾವೂರ್ ಕ್ಷೇತ್ರದಿಂದ ಆಯ್ಕೆಯಾಗಿ ವಸತಿ, ಕೃಷಿ ಸಚಿವರಾಗಿದ್ದ ವೈಥಿಲಿಂಗಂ ಅವರು 2016ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ರಾಜ್ಯಸಭೆಯಲ್ಲಿ ವೈಥಿಲಿಂಗಂ ಸೇರಿದಂತೆ 13 ಸದಸ್ಯರನ್ನು ಎಐಎಡಿಎಂಕೆ ಹೊಂದಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ, 38 ಸ್ಥಾನಗಳ ಪೈಕಿ 37 ಸ್ಥಾನಗಳನ್ನು ಗೆದ್ದು ಭರ್ಜರಿ ಪ್ರದರ್ಶನ ನೀಡಿದೆ.
ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿ 8 ಸಾವಿರಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಮಂದಿ ಸಂಸದರಿಗೆ ಸಂಜೆ ವೇಳೆ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಿರುವಂತೆ ಬಿಜೆಪಿ ಹೈಕಮಾಂಡಿನಿಂದ ಕರೆ ಬಂದಿದೆ.
'ನವ ಭಾರತ' ನಿರ್ಮಾಣಕ್ಕೆ ಸಿದ್ಧವಾಗಿರುವ ಮೋದಿ ಅವರು ತಮ್ಮ ಹೊಸ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ಸುಳಿವು ನೀಡಿದ್ದಾರೆ. ಜೊತೆಗೆ ನಿತೀಶ್ ಕುಮಾರ್ ಅವರ ಜೆಡಿಯು, ತಮಿಳುನಾಡಿನ ಎಐಎಡಿಎಂಕೆ ಸದಸ್ಯರಿಗೆ ಸಚಿವ ಸ್ಥಾನ ಮೀಸಲಾಗಿರುತ್ತದೆ.












Click it and Unblock the Notifications