ಮದುರೈನಲ್ಲಿ ಟೆಕ್ಕಿ ಕೊಲೆ, ವಲಸೆ ಕಾರ್ಮಿಕನ ಮೇಲೆ ಗುಮಾನಿ
ಮದುರೈ, ಡಿ. 21: ಮೂಲ, ವಲಸಿಗರು ಎಂಬ ಚರ್ಚೆ ಮತ್ತೊಮ್ಮೆ ತಮಿಳುನಾಡಿನಲ್ಲಿ ಮುನ್ನೆಲೆಗೆ ಬಂದಿದೆ. ಮದುರೈನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ರೊಬ್ಬರನ್ನು ಮನೆಯಲ್ಲೆ ಕೊಚ್ಚಿ ಕೊಲೆ ಮಾಡಲಾಗಿದೆ.
ಮದುರೈನ ಉಥಾಂಗಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಸಾಫ್ಟ್ ವೇರ್ ಇಂಜಿನಿಯರ್ ರನ್ನು ಎ ಕುಮಾರನ್ ದಾಸ್ (43) ಎಂದು ಗುರುತಿಸಲಾಗಿದೆ. ಕೆ ಪೂದೂರಿನ ಲೌರ್ದು ನಗರದ ಮೂಲದವರಾಗಿದ್ದಾರೆ. ಪತ್ನಿ ಕೆ ಜೋಸಫೈನ್ ಹಾಗೀ ಇಬ್ಬರು ಮಕ್ಕಳು ತಿರುಚ್ಚಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಉಥಾಂಗಡಿಯಲ್ಲಿ ಕೆಲ ತಿಂಗಳುಗಳ ಹಿಂದೆ ಬಾಡಿಗೆಗೆ ಮನೆ ಪಡೆದುಕೊಂಡಿದ್ದರು. ಇತ್ತೀಚೆಗೆ ನವೀನ್ ಎಂಬ ವಲಸೆ ಕಾರ್ಮಿಕರೊಬ್ಬನನ್ನು ಮನೆ ಕೆಲಸಕ್ಕಾಗಿ ನೇಮಿಸಿಕೊಂಡಿದ್ದರು.
ಭಾನುವಾರದಂದು ಕುಮಾರನ್ ದಾಸ್ ಮನೆ ಓನರ್ ನಟರಾಜನ್ ಅವರು ಕುಮಾರನ್ ಅವರಿಗೆ ಫೋನ್ ಕರೆ ಮಾಡಿದ್ದಾರೆ. ಆದರೆ, ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮನೆ ಬಳಿ ಬಂದು ಪರಿಶೀಲಿಸಿದಾಗ, ಮನೆ ಬಾಗಿಲು ತೆರೆದಿತ್ತು, ರಕ್ತದ ಮಡುವಿನಲ್ಲಿ ಕುಮಾರನ್ ಶವ ಪತ್ತೆಯಾಗಿದೆ. ಮನೆಕೆಲಸದಾಳು ನವೀನ್ ನಾಪತ್ತೆಯಾಗಿರುವುದು ಪತ್ತೆಯಾಗಿದೆ.
ತಕ್ಷಣವೆ ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಾರೆ. ಕೆ ಪುದೂರು ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ತಿಲಗವತಿ ಅವರು ಪಂಚನಾಮೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಆರ್ ಶಿವ ಪ್ರಸಾದ್ ಹೇಳಿದ್ದಾರೆ.
''ತಮಿಳುನಾಡಿನ ಜನರು ವಲಸೆ ಕಾರ್ಮಿಕರು, ಪರವೂರಿನ ಮಂದಿಯನ್ನು ಮನೆ ಕೆಲಸಕ್ಕೆ ಇಟ್ಟುಕೊಳ್ಳಬಾರದು. ಉತ್ತರಪ್ರದೇಶ, ಬಿಹಾರ ಮೂಲದ ವಲಸೆ ಕಾರ್ಮಿಕರು ಕ್ರಿಮಿನಲ್ ಮನಸ್ಥಿತಿ ಉಳ್ಳವರು, ಇವರ ಬಗ್ಗೆ ತಮಿಳುನಾಡು ಜನರು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ'' ಎಂದು ಮನೆ ಓನರ್ ನಟರಾಜನ್ ಹೇಳಿದ್ದಾರೆ.