ಮಧುರೈ ಮೀನಾಕ್ಷಿ ದೇಗುಲ ಗೋಪುರ ಜಖಂ
ಮಧುರೈ,ಡಿ.13: ತಮಿಳುನಾಡಿನ ಜಗತ್ಪ್ರಸಿದ್ದ 12ನೇ ಶತಮಾನದ ಮೀನಾಕ್ಷಿ ಅಮ್ಮ ದೇವಸ್ಥಾನದ ಪ್ರಮುಖ ರಾಜ ಗೋಪುರಕ್ಕೆ ನಿನ್ನೆ ರಾತ್ರಿ ಸಿಡಿಲು ಬಡಿದು ಜಖಂಗೊಂಡಿದೆ ಎಂದು ದೇವಾಲಯದ ಆಡಳಿತ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕ್ರಿ.ಶ.1216ನೇ ಇಸವಿಯಲ್ಲಿ ನಿರ್ಮಾಣವಾದ ಈ ದೇವಸ್ಥಾನದ ಪೂರ್ವಭಾಗದ ರಾಜಗೋಪುರಕ್ಕೆ ನಿನ್ನೆ ರಾತ್ರಿ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ಗೋಪುರದ ಮೇಲಿನ ಯಾಳಿಮುಖಂ (ಯಾಳಿ ಎಂಬುದು ಒಂದು ಪೌರಾಣಿಕ ಪ್ರಾಣಿ) ಜಖಂ ಆಗಿದೆ ಎಂದು ದೇವಾಲಯದ ಜಂಟಿ ಆಯುಕ್ತ ಜಯರಾಮನ್ ಹೇಳಿದ್ದಾರೆ. [ಶ್ರೀಶೈಲಂ ಶಿವಲಿಂಗ ಭಿನ್ನ, ಭಕ್ತರಲ್ಲಿ ಆತಂಕ]
ದೇವಸ್ಥಾನದ ಮೇಲಿರುವ ಇತಿಹಾಸ ಪ್ರಸಿದ್ಧ ನಾಲ್ಕು ಟವರ್(ಗೋಪುರ)ಗಳಿಗೂ ಸಿಡಿಲು ಪ್ರತಿರೋಧಕ ಕವಚಗಳನ್ನು ಅಳವಡಿಸಲಾಗಿದೆ. ಈ ಕವಚ ಅಳವಡಿಕೆ ಮಾಡಿ ಎರಡು ವರ್ಷಗಳಾಗಿದ್ದು, ಈ ಅವಧಿಯಲ್ಲಿಯೇ ನಾಲ್ಕು ಬಾರಿ ಸಿಡಿಲು ಬಡಿದಿದೆ. ಅಲ್ಲದೆ ಗೋಪುರಗಳು ಜಖಂಗೊಂಡಿವೆ ಎಂಬುದು ವಿಶೇಷ ಎಂದು ಅಧಿಕಾರಿ ಜಯರಾಮನ್ ತಿಳಿಸಿದ್ದಾರೆ.

ಸುಮಾರು 150 ಅಡಿಗಳಷ್ಟು ಎತ್ತರದ ಈ ಇತಿಹಾಸ ಪ್ರಸಿದ್ಧ ಗೋಪುರದ ಮೇಲೆ ನಾನಾ ಬಗೆಯ ಅಪರೂಪದ ಶಿಲ್ಪಗಳನ್ನು ಕೆತ್ತಲಾಗಿದೆ. ಯಾಳಿ(ಮೃಗ)ಯ ಕೊಂಬು ಮುರಿದುಬಿದ್ದಿದೆ. ಇದೇನೂ ದೊಡ್ಡ ಹಾನಿಯಲ್ಲ. ದುರಸ್ತಿಪಡಿಸಬಹುದು. ಆದರೆ ಈ ರೀತಿ ಜಖಂ ಆದರೆ ಭಕ್ತರಲ್ಲಿ ಆತಂಕಗಳು ಸೃಷ್ಟಿಯಾಗುತ್ತವೆ ಎಂದು ಜಯರಾಮನ್ ಹೇಳಿದ್ದಾರೆ. [ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?]
ಮಧುರೈ ನಗರದಲ್ಲಿ ಗುರುವಾರದಿಂದ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದ್ದು, ನಗರದ ವಿವಿಧೆಡೆ ರಸ್ತೆ, ವಿದ್ಯುತ್ ಸಂಪರ್ಕ ಕಡಿದು ಹೋಗಿವೆ. ಹಲವಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಅನೇಕ ಟ್ರಾನ್ಸ್ ಫಾರ್ಮರ್ ಗಳು ಸುಟ್ಟು ಹೋಗಿವೆ. ಈ ನಡುವೆ ಮೀನಾಕ್ಷಿ ದೇಗುಲದ ಗೋಪುರ ಜಖಂಗೊಂಡ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಸ್ಥಳೀಯರು ಅಕ್ಕ ಪಕ್ಕ ಊರಿನ ಜನತು ದೇಗುಲದತ್ತ ಧಾವಿಸಿ ಬಂದಿದ್ದಾರೆ. ಜನರು ಆತಂಕ ಪಡಬೇಕಾಗಿಲ್ಲ ಎಂದು ಆಡಳಿತ ಮಂಡಳಿ ಸಮಾಧಾನ ಪಡಿಸಿ ಕಳಿಸಿದ್ದಾರೆ. (ಪಿಟಿಐ)











Click it and Unblock the Notifications