ಶಾಸಕನ ಅಂತಾರ್ಜಾತಿ ಮದುವೆ: ಗಂಡನ ಜತೆಗಿರುವುದು ಯುವತಿಯ ಹಕ್ಕು ಎಂದ ಹೈಕೋರ್ಟ್
ಚೆನ್ನೈ, ಅಕ್ಟೋಬರ್ 9: ಕಲ್ಲಕುರಿಚಿ ಎಐಎಡಿಂಕೆಯ 35 ವರ್ಷದ ದಲಿತ ಶಾಸಕ ಮತ್ತು 19 ವರ್ಷದ ಬ್ರಾಹ್ಮಣ ಯುವತಿಯ ಮದುವೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. ಶಾಸಕ ಎ. ಪ್ರಭು ಅವರು ತಮ್ಮ ಮಗಳನ್ನು ಅಪಹರಿಸಿ ಮದುವೆಯಾಗಿದ್ದಾರೆ ಎಂದು ವೃತ್ತಿಯಿಂದ ಅರ್ಚಕರಾಗಿರುವ ಆಕೆಯ ತಂದೆ ಆರೋಪಿಸಿದ್ದರು. ಆದರೆ ತಂದೆಯ ವಾದವನ್ನು ತಳ್ಳಿಹಾಕಿರುವ ಮದ್ರಾಸ್ ಹೈಕೋರ್ಟ್, ಯುವತಿಗೆ ತನ್ನ ಪತಿಯೊಂದಿಗೆ ಜೀವಿಸುವ ಎಲ್ಲ ಹಕ್ಕು ಇದೆ ಎಂದು ಹೇಳಿದೆ.
ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಅರ್ಚಕ ಸ್ವಾಮಿನಾಥನ್ ಅವರು ಮದ್ರಾಸ್ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಹೈಕೋರ್ಟ್, ತಮ್ಮ ಪತ್ನಿಯನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಶಾಸಕ ಎ. ಪ್ರಭು ಅವರಿಗೆ ಸೂಚಿಸಿತ್ತು.
ತಮಿಳುನಾಡಿನ ಕಲ್ಲುಕುರಿಚಿ ಜಿಲ್ಲೆಯಲ್ಲಿ ಸೋಮವಾರ ಈ ಮದುವೆ ನಡೆದಿತ್ತು. ಪ್ರಭು ಅವರು ದಲಿತ ಜಾತಿಗೆ ಸೇರಿರುವುದರಿಂದಲೇ ಯುವತಿಯ ತಂದೆ ಮದುವೆಯನ್ನು ವಿರೋಧಿಸಿದ್ದಾರೆ ಎನ್ನಲಾಗಿದೆ. ಮುಂದೆ ಓದಿ.

ಆಕೆಗೆ ಹಕ್ಕು ಇದೆ
ನ್ಯಾಯಮೂರ್ತಿಗಳಾದ ಎಂಎಂ ಸುಂದರೇಶ್ ಮತ್ತು ಡಿ. ಕೃಷ್ಣ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠದ ಮುಂದೆ ಪತ್ನಿ ಸೌಂದರ್ಯ ಅವರನ್ನು ಪ್ರಭು ಹಾಜರುಪಡಿಸಿದ್ದರು. ತಮ್ಮ ಇಷ್ಟದಂತೆಯೇ ಪ್ರಭು ಅವರನ್ನು ಮದುವೆಯಾಗಿದ್ದು, ಅವರ ಪತ್ನಿಯಾಗಿ ಅವರೊಂದಿಗೆ ಬಾಳಲು ಬಯಸಿದ್ದೇನೆ ಎಂದು ಸೌಂದರ್ಯ ಹೇಳಿದ್ದರು. ಇದರಿಂದ ನ್ಯಾಯಾಲಯ 19 ವರ್ಷದ ಯುವತಿಯನ್ನು ಆಕೆಯ ಪತಿಯೊಂದಿಗೆ ವಾಸಿಸಲು ಅನುಮತಿ ನೀಡಿತು.

ವಯಸ್ಸಿನ ಅಂತರಕ್ಕಾಗಿ ಆಕ್ಷೇಪ
ತಮ್ಮ ಆಕ್ಷೇಪ ಇರುವುದು ಅಂತರ್ಜಾತಿ ವಿವಾಹಕ್ಕೆ ಅಲ್ಲ. ಆದರೆ ಆ ಗಂಡ ಹೆಂಡತಿ ನಡುವಿನ ವಯಸ್ಸಿನ ಅಂತರದ ಕಾರಣಕ್ಕೆ ಎಂದು ಸ್ವಾಮಿನಾಥನ್ ಅವರು ಸುದ್ದಿಗಾರರಿಗೆ ತಿಳಿಸಿದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಎ. ಪ್ರಭು, ತಾವು ಸೌಂದರ್ಯ ಅವರನ್ನು ಅಪಹರಣ ಮಾಡಿಲ್ಲ ಎಂದು ತಿಳಿಸಿದ್ದರು.

ಕಿಡ್ನ್ಯಾಪ್ ಆರೋಪ
ತಿರುಚಂಗೋಡಿನ ಆರ್ಟ್ಸ್ ಕಾಲೇಜಿನಲ್ಲಿ 2ನೇ ಪಿಯುಸಿ ಓದುತ್ತಿರುವ ನನ್ನ ಮಗಳು ಸೌಂದರ್ಯಳನ್ನು ಪ್ರೇಮಿಸುವ ನಾಟಕವಾಡಿ ಶಾಸಕ ಪ್ರಭು ಕಿಡ್ನಾಪ್ ಮಾಡಿದ್ದಾನೆ ಎಂದು ಅಕ್ಟೋಬರ್ 1 ರಂದು ಸ್ವಾಮಿನಾಥನ್ ಆರೋಪಿಸಿದ್ದರು. ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಷಯವನ್ನು ಪೊಲೀಸರ ಮುಂದೆ ಹೇಳಲು ಸಾಧ್ಯವಿಲ್ಲ. ಪೊಲೀಸ್ ಠಾಣೆಗೆ ಹೋಗದಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದಿದ್ದರು.

ಆತ್ಮಹತ್ಯೆಗೆ ಯತ್ನ
ಸೋಮವಾರ ಬೆಳಗ್ಗೆ ಮದುವೆ ನಡೆಯುತ್ತಿರುವ ವಿಷಯ ತಿಳಿದ ಸ್ವಾಮಿನಾಥನ್ ಮಂಟಪದ ಮುಂದೆ ನಿಂತು, ತಮ್ಮ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದರು. ಅಲ್ಲಿದ್ದ ಪೊಲೀಸ್ ಸಿಬ್ಬಂದಿ ತಕ್ಷಣವೇ ತಡೆದು ಬುದ್ಧಿ ಹೇಳಿದ್ದರು. ಸ್ವಾಮಿನಾಥನ್ ವಿರುದ್ಧ ಐಪಿಸಿ ಸೆಕ್ಷನ್ 309ರಂತೆ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲು ಸ್ಥಳೀಯ ಠಾಣೆಗೆ ಸೂಚಿಸಿದ್ದರು.

ಸ್ವಾಮಿನಾಥನ್ ಮನೆಯಲ್ಲಿಯೇ ಬೆಳೆದವರು
ಚಿಕ್ಕ ವಯಸ್ಸಿನಿಂದಲೂ ಪ್ರಭು ಸ್ವಾಮಿನಾಥನ್ ಮನೆಯಲ್ಲೇ ಮನೆ ಮಗನಂತೆ ಬೆಳೆದಿದ್ದರಿಂದ ಅವರ ಕುಟುಂಬಕ್ಕೆ ಚಿರಪರಿಚಿತ. ಆದರೆ, ತಮ್ಮ ಮಗಳ ಜೊತೆ ಪ್ರಭು ಯಾವಾಗ ಪ್ರೀತಿ ಮಾಡಲು ಶುರು ಮಾಡಿದ ಎಂಬುದು ತಿಳಿದಿಲ್ಲ. ಆದರೆ ನಾಲ್ಕು ವರ್ಷದ ಹಿಂದೆ ಒಂದು ದಿನ ಪ್ರಭು, ಸೌಂದರ್ಯಳನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದರು. ಆಗ ಕೋಪ ಬಂದಿದ್ದರೂ, ಆಕೆ ಮೈನರ್ ಆಗಿರುವುದರಿಂದ ಮದುವೆ ಬೇಡ ಎಂದು ತಿಳಿ ಹೇಳಿದ್ದರು ಎನ್ನಲಾಗಿದೆ.












Click it and Unblock the Notifications