ಸಿಖ್ ದಂಗೆ, ಭೋಪಾಲ್ ದುರಂತಕ್ಕೆ ಯಾರು ನ್ಯಾಯ ಕೊಡುತ್ತಾರೆ?: ಮೋದಿ ಪ್ರಶ್ನೆ
ಚೆನ್ನೈ, ಏಪ್ರಿಲ್ 13: ದೇಶದ ಕಡು ಬಡವರಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ನೆರವು ನೀಡುವ ಕಾಂಗ್ರೆಸ್ನ 'ನ್ಯಾಯ್' ಭರವಸೆಯನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದ 1984ರ ಸಿಖ್ ವಿರೋಧಿ ದಂಗೆ ಮತ್ತು ಭೋಪಾಲ್ ಅನಿಲ ದುರಂತದ ಬಲಿಪಶುಗಳಿಗೆ ಯಾರು 'ನ್ಯಾಯ್' (ನ್ಯಾಯ) ಒದಗಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡಿನ ಥೆನಿಯಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು 'ನ್ಯಾಯ್' ಯೋಜನೆಯಡಿ ದೇಶದ ಶೇ 20ರಷ್ಟು ಬಡವರಿಗೆ ವಾರ್ಷಿಕ 72,000 ಕೋಟಿ ರೂ ಹಣಕಾಸಿನ ನೆರವು ನೀಡುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಪ್ರಸ್ತಾಪಿಸಿದರು.
'1984ರ ದಂಗೆಯ ಸಂತ್ರಸ್ತರಿಗೆ ಯಾರು ನ್ಯಾಯ ಕೊಡುತ್ತಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ನಾನು ಕೇಳಲು ಬಯಸಿದ್ದೇನೆ. ಒಂದು ಕುಟುಂಬ ಆ ನಾಯಕರನ್ನು ಇಷ್ಟಪಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ನಿಂದ ವಜಾಗೊಂಡ ಎಂಜಿಆರ್ ಅವರಂತಹ ಮಹಾನ್ ವ್ಯಕ್ತಿಗಳ ಸರ್ಕಾರಕ್ಕೆ ಯಾರು ನ್ಯಾಯ ಕೊಡುತ್ತಾರೆ? ದೇಶದ ಮೊದಲ ಪರಿಸರೀಯ ದುರ್ಘಟನೆಯಾದ ಭೋಪಾಲ್ ಅನಿಲ್ ದುರಂತದ ಬಲಿಪಶುಗಳಿಗೆ ಯಾರು ನ್ಯಾಯ ಕೊಡುತ್ತಾರೆ? ಇದು ಕೂಡ ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇ ನಡೆದಿದ್ದು' ಎಂದು ಮೋದಿ ವಾಗ್ದಾಳಿ ನಡೆಸಿದರು.

'ಈಗ ನ್ಯಾಯ ಸಿಕ್ಕಿತು' ಎಂಬ ಕಾಂಗ್ರೆಸ್ ಚುನಾವಣಾ ಪ್ರಚಾರದ ಟ್ಯಾಗ್ಲೈನ್ಅನ್ನು ಪರಿಹಾಸ್ಯ ಮಾಡಿದ ಅವರು, ಕಳೆದ 60 ವರ್ಷಗಳಿಂದ ಕಾಂಗ್ರೆಸ್ ತಾನು ಅನ್ಯಾಯ ಎಸಗಿದ್ದನ್ನು ಈ ಮೂಲಕ ಒಪ್ಪಿಕೊಳ್ಳುತ್ತಿದೆ' ಎಂದರು.
'ಕಾಂಗ್ರೆಸ್ ಮತ್ತು ಅಪ್ರಾಮಾಣಿಕತೆ ಇಬ್ಬರೂ ಅತ್ಯುತ್ತಮ ಗೆಳೆಯರು. ಆದರೆ, ಕೆಲವೊಮ್ಮೆ ಅಪ್ಪಿತಪ್ಪಿ ಅವರು ಸತ್ಯ ಹೇಳಿಬಿಡುತ್ತಾರೆ. ಈಗ ಅವರು ಹೇಳುತ್ತಿದ್ದಾರೆ, 'ಈಗ ನ್ಯಾಯ ಸಿಕ್ಕಿತು' ಎಂದು. ಅವರಿಗೆ ಅದರ ಉದ್ದೇಶ ಇರದಿದ್ದರೂ ಇದುವರೆಗೂ ಅವರು ಅನ್ಯಾಯ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಇದರ ಅರ್ಥ ಅವರು 60ರಷ್ಟು ಸುದೀರ್ಘ ಸಮಯ ದೇಶಕ್ಕೆ ಅನ್ಯಾಸ ಎಸಗಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ' ಎಂದು ಟೀಕಿಸಿದರು.












Click it and Unblock the Notifications