ಕರುಣಾನಿಧಿ ಅಂತ್ಯ ಸಂಸ್ಕಾರ ವಿವಾದ: ಬೆಳಿಗ್ಗೆ 8ಕ್ಕೆ ವಿಚಾರಣೆ ಮುಂದೂಡಿಕೆ
ಚೆನ್ನೈ, ಆಗಸ್ಟ್ 8: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ನಿಧನದ ಬೆನ್ನಲ್ಲೇ, ಅವರ ಅಂತ್ಯಸಂಸ್ಕಾರದ ವಿಚಾರ ವಿವಾದ ಸೃಷ್ಟಿಸಿದೆ.
ಮರೀನಾ ಬೀಚ್ನಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲು ಆದೇಶ ಹೊರಡಿಸುವಂತೆ ಡಿಎಂಕೆ ಮುಖಂಡರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು.
ನ್ಯಾಯಮೂರ್ತಿಗಳಾದ ಎಚ್ಜಿ ರಮೇಶ್ ಮತ್ತು ಎಸ್ಎಸ್ ಸುಂದರ್ ನೇತೃತ್ವದ ಪೀಠವು ಡಿಎಂಕೆ ಅರ್ಜಿಯ ವಿಚಾರಣೆಯನ್ನು ಬೆಳಿಗ್ಗೆ ಎಂಟು ಗಂಟೆಗೆ ಮುಂದೂಡಿದೆ.
ಮಂಗಳವಾರ ರಾತ್ರಿ ಅರ್ಜಿಯ ವಿಚಾರಣೆ ಆರಂಭಿಸಿದ ನ್ಯಾಯಮೂರ್ತಿಗಳು ಸರ್ಕಾರ ಹಾಗೂ ಡಿಎಂಕೆಯ ವಾದವನ್ನು ಆಲಿಸಿದ ಬಳಿಕ ವಿಚಾರಣೆಯನ್ನು ಮುಂದೂಡಿದರು.
ಕವಿ ಹೃದಯ, ಬಂಡಾಯದ ಮನಸ್ಸಿನ 'ಕಲೈನಾರ್' ಕರುಣಾನಿಧಿ
ಅಣ್ಣಾ ಸ್ಮಾರಕದಲ್ಲಿಯೇ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶ ಕಲ್ಪಿಸಬೇಕು. ಕೂಡಲೇ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಕೋರಿತ್ತು. ಡಿಎಂಕೆ ಪರ ಹಿರಿಯ ವಕೀಲರಾದ ಶರವಣನ್ ಮತ್ತು ವಿಲ್ಸನ್ ಅವರನ್ನು ನೇಮಿಸಲಾಗಿದೆ.
ಅತ್ಯಂತ ಸೂಕ್ಷ್ಮ ವಿಚಾರವಾದ್ದರಿಂದ ತಕ್ಷಣ ವಿಚಾರಣೆಗೆ ತೆಗೆದುಕೊಂಡು ಆದೇಶ ಹೊರಡಿಸುವಂತೆ ಡಿಎಂಕೆ ವಕೀಲರು ಕೋರಿತ್ತು. ಈ ಮನವಿ ಪುರಸ್ಕರಿಸಿರುವ ಹೈಕೋರ್ಟ್ 10.30ಕ್ಕೆ ವಿಚಾರಣೆ ನಿಗದಿಪಡಿಸಿತ್ತು.
ಹಂಗಾಮಿ ಮುಖ್ಯನ್ಯಾಯಮೂರ್ತಿ ಎಚ್ಜಿ ರಮೇಶ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಮರೀನಾ ಬೀಚ್ನಲ್ಲಿ ಅಂತ್ಯಸಂಸ್ಕಾರಗಳಿಗೆ ಅವಕಾಶ ನೀಡಬಾರದು ಎಂದು ಈ ಹಿಂದೆ ಅರ್ಜಿ ಸಲ್ಲಿಸಿದ್ದ ಟ್ರಾಫಿಕ್ ರಾಮಸ್ವಾಮಿ ಅವರ ಪರ ವಕೀಲರು ಸಹ ಮುಖ್ಯನ್ಯಾಯಮೂರ್ತಿಗಳ ನಿವಾಸಕ್ಕೆ ತೆರಳಿದ್ದರು.
ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ
ಚೆನ್ನೈನ ಮರೀನಾ ಬೀಚ್ನಲ್ಲಿರುವ ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಅವರ ಸಮಾಧಿಯ ಪಕ್ಕದಲ್ಲಿಯೇ ಕರುಣಾನಿಧಿ ಅವರ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವಂತೆ ಅವರ ಕುಟುಂಬದವರು ಎಐಎಡಿಎಂಕೆ ಸರ್ಕಾರಕ್ಕೆ ಮನವಿ ಮಾಡಿದ್ದರು.
ಆದರೆ, ಕಾನೂನಿನ ತೊಡಕಿನ ನೆಪವೊಡ್ಡಿ ಸರ್ಕಾರ ಅದನ್ನು ನಿರಾಕರಿಸಿದ್ದು, ಗಾಂಧಿ ಮಂಟಪದ ಸಮೀಪ ಎರಡು ಎಕರೆ ಜಾಗ ಮಂಜೂರು ಮಾಡಿದೆ.
ಮರೀನಾ ಬೀಚ್ನಲ್ಲಿ ಕರುಣಾನಿಧಿ ಅವರ ಅಂತ್ಯಸಂಸ್ಕಾರಕ್ಕೆ ಅವಕಾಶ ನಿರಾಕರಿಸಿರುವುದು ಬಿಜೆಪಿ-ಆರೆಸ್ಸೆಸ್ ಸಂಚು ಎಂದು ಡಿಎಂಕೆ ವಕ್ತಾರ ಶರವಣನ್ ಆರೋಪಿಸಿದ್ದಾರೆ.
46 ವರ್ಷಗಳ ನಂತರ ಕಪ್ಪು ಕನ್ನಡಕ್ಕೆ ಗುಡ್ ಬೈ ಹೇಳಿದ್ದ ಕರುಣಾ
ಸ್ವತಃ ಮುಖ್ಯಮಂತ್ರಿ ಪಳನಿಸ್ವಾಮಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಾಗಲೇ ಇಲ್ಲಿ ಅಂತ್ಯಸಂಸ್ಕಾರ ನಡೆಸುವ ಎರಡು ಅರ್ಜಿಗಳು ಕೋರ್ಟ್ನಲ್ಲಿ ವಿಚಾರಣೆಯಲ್ಲಿವೆ ಎನ್ನಲಾಗಿದೆ.
ಡಿಎಂಕೆ ಒತ್ತಾಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದೆ. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಮರೀನಾ ಬೀಚ್ನಲ್ಲಿಯೇ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮರೀನಾ ಬೀಚ್ನಲ್ಲಿ ಸ್ಮಾರಕ ನಿರ್ಮಿಸುವುದರ ವಿರುದ್ಧ ಹೈಕೋರ್ಟ್ನಲ್ಲಿ ಐದು ಅರ್ಜಿಗಳು ದಾಖಲಾಗಿದ್ದವು. ಇದರಲ್ಲಿ ನಾಲ್ಕು ಅರ್ಜಿಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು. ಕರಾವಳಿ ವಲಯ ನಿಯಮಾವಳಿಗಳ ಪ್ರಕಾರ ಜಲಪ್ರದೇಶದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ ಎಂದು ವಕೀಲ ದೊರೆಸ್ವಾಮಿ ಅರ್ಜಿ ಸಲ್ಲಿಸಿದ್ದರು. ಅದನ್ನು ಸಹ ಹಿಂಪಡೆಯಲಾಗಿದೆ.
ಜಯಲಲಿತಾ ಅವರು ಅಕ್ರಮ ಆಸ್ತಿ ಸಂಪಾದನೆಯ ಪ್ರಕರಣ ಎದುರಿಸುತ್ತಿದ್ದರಿಂದ ಅವರ ಸ್ಮಾರಕ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ದೊರೆಸ್ವಾಮಿ ಅರ್ಜಿ ಸಲ್ಲಿಸಿದ್ದರು.
ಅಲ್ಲಿ ಯಾವುದೇ ಸ್ಮಾರಕಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂಬ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಟ್ರಾಫಿಕ್ ರಾಜಸ್ವಾಮಿ ಪಟ್ಟುಹಿಡಿದಿದ್ದಾರೆ.