ಹುಟ್ಟುಹಬ್ಬದಂದು ಸರ್ಪ್ರೈಸ್ ನೀಡುತ್ತಾರಂತೆ ಕಮಲ್!
ಚೆನ್ನೈ, ಅಕ್ಟೋಬರ್ 26 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿರುವ ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು, ನವೆಂಬರ್ 7ರ ತಮ್ಮ ಹುಟ್ಟುಹಬ್ಬದಂದು ಸರ್ಪ್ರೈಸ್ ಕೊಡುವುದಾಗಿ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.
'ನೀವು ಸಿದ್ಧವಾಗಿರಿ' ಎಂದು ತಮ್ಮ ಅಭಿಮಾನಿಗಳಿಗೆ ಕರೆ ನೀಡಿರುವ 62 ವರ್ಷದ ಸಕಲಕಲಾವಲ್ಲಭ ಕಮಲ್ ಹಾಸನ್ ಅವರು, ಅಭಿಮಾನಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಹೊಸ ಪಕ್ಷವೊಂದನ್ನು ಸ್ಥಾಪಿಸುವ ಅತ್ಯಂತ ಖಚಿತವಾದ ಸೂಚನೆಯನ್ನು ಅವರು ನೀಡಿದ್ದಾರೆ.
ಖಂಡಿತಾ ನನ್ನ ಬಣ್ಣ ಕೇಸರಿಯಲ್ಲ: ಕಮಲ್ ಹಾಸನ್
'ನಿಮ್ಮ ತಮಿಳುನಾಡಿಗೆ ಸೇವೆ ಸಲ್ಲಿಸುವುದು ತಮ್ಮ ಜವಾಬ್ದಾರಿ ಎಂದು ತಿಳಿದಿದ್ದಾರೋ ಅವರಿಗೆ ನಾನು ಕೈಜೋಡಿಸಿ ಆಹ್ವಾನ ನೀಡುತ್ತೇನೆ' ಎಂದು ತಮಿಳು ಮ್ಯಾಗಜಿನ್ ವೊಂದಕ್ಕೆ ಬರೆದಿರುವ ಅಂಕಣದಲ್ಲಿ ಕಮಲ್ ಅಭಿಮಾನಿಗಳಿಗೆ ಭವ್ಯ ಸ್ವಾಗತ ಕೋರಿದ್ದಾರೆ.
ತಮ್ಮ ಪಕ್ಷಕ್ಕೆ ತಾಜಾ ಮತ್ತು ಯುವ ಮುಖಗಳನ್ನೇ ತೆಗೆದುಕೊಳ್ಳುವುದಾಗಿ ಅವರು ಹೇಳುತ್ತಲೇ ಬಂದಿದ್ದು, ಜನರಿಂದಲೇ ಹಣವನ್ನು ಕ್ರೋಢೀಕರಿಸಿ, ಪಕ್ಷದ ಎಲ್ಲ ವ್ಯವಹಾರಗಳು ಅತ್ಯಂತ ಪಾರದರ್ಶಕವಾಗಿರುವಂತೆ ನೀತಿ ರೂಪಿಸುವುದಾಗಿಯೂ ಅವರು ಹೇಳಿದ್ದಾರೆ.
ಕೇಸರಿ ನನ್ನ ಬಣ್ಣವಲ್ಲ : ಕಮಲ್
'ಕೇಸರಿ' ನನ್ನ ಬಣ್ಣ ಅಲ್ಲವೇ ಅಲ್ಲ ಎಂದು ಸ್ಪಷ್ಟವಾದ ನುಡಿಗಳಲ್ಲಿ ಹೇಳಿರುವ ಕಮಲ್ ಅವರು, ಭಾರತೀಯ ಜನತಾ ಪಕ್ಷದಿಂದ ದೂರವೇ ಇರುವುದಾಗಿ ತಿಳಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರಾದರೂ ಅವರ ಆಮ್ ಆದ್ಮಿ ಪಕ್ಷದೊಡನೆ ಕೈಜೋಡಿಸುವ ಕುರಿತೂ ಯಾವುದೇ ಸುಳಿವು ನೀಡಿಲ್ಲ.
ಅಪನಗದೀಕರಣಕ್ಕೆ ಮೋದಿ ಕ್ಷಮೆ ಕೇಳಲಿ
ಬದಲಿಗೆ, ಪ್ರಧಾನಿ ನರೇಂದ್ರ ಮೋದಿ ಅವರನ್ನೇ ತಮ್ಮ ಟೀಕೆಗೆ ಗುರಿಯಾಗಿಸಿದ್ದ ಕಮಲ್ ಹಾಸನ್ ಅವರು, ಕಳೆದ ನವೆಂಬರ್ ನಲ್ಲಿ ಅಪನಗದೀಕರಣ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಕ್ಕೆ ಪ್ರಧಾನಿ ಮೋದಿಯವರೇ ದೇಶದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
ರಜನಿ ಅವರ ರಾಜಕೀಯ ಪಕ್ಷ ಎಲ್ಲಿಗೆ ಬಂತು?
ಈ ನಡುವೆ, ದಕ್ಷಿಣ ಭಾರತದ ಮತ್ತೊಬ್ಬ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಕನಸಿನ ಅರಮನೆ ಎಷ್ಟರ ಮಟ್ಟಿಗೆ ನಿರ್ಮಾಣವಾಗಿದೆ ಇನ್ನೂ ಸ್ಪಷ್ಟವಾಗಿಲ್ಲ. ಅವರು ಕಮಲ್ ಹಾಸನ್ ಅವರಿಗಿಂತ ಮೊದಲೇ ಹೊಸ ಪಕ್ಷ ಆರಂಭಿಸುವ ಯೋಜನೆಗೆ ಚಾಲನೆ ನೀಡಿದ್ದರು. ಮೋದಿಯವರ ಪರ ರಜನಿ ಕಾಳಜಿ ಹೊಂದಿರುವುದು ಕೂಡ ಎಲ್ಲರಿಗೂ ಗೊತ್ತಿರುವ ಸಂಗತಿ.
ಕಮಲ್ ಮುಂದೆ ರಜನಿ ಮಂಕು
ಆದರೆ, ಕಮಲ್ ಹಾಸನ್ ಅವರೇ ಮುಂದಡಿ ಇಟ್ಟಿರುವುದರಿಂದ ರಜನಿಕಾಂತ್ ಅವರು ಸ್ವಲ್ಪ ಮಂಕಾದಂತೆ ಕಂಡುಬರುತ್ತಿದ್ದಾರೆ. ಅವರು ಕೂಡ ರಾಜಕೀಯ ಪಕ್ಷ ಆರಂಭಿಸಿ ಅಧಿಕೃತವಾಗಿ ತಮಿಳು ರಾಜಕೀಯಕ್ಕೆ ಧುಮುಕುತ್ತಾರೋ ಅಥವಾ ಬೇರೆ ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಾರೋ ತಿಳಿದುಬಂದಿಲ್ಲ.
'ರಜನಿ, ಕಮಲ್ ಮುಖಕ್ಕೆ ಶೇ 10ರಷ್ಟು ವೋಟ್ ಸಿಗಲ್ಲ'
ದಿಗ್ಗಜರಿಗೆ ತಮಿಳುನಾಡಲ್ಲಿ ವೇದಿಕೆ ಸಿದ್ಧ
ಆದರೆ, ತಮಿಳುನಾಡಿನಲ್ಲಿ ಮಾತ್ರ ಈ ಇಬ್ಬರೂ ದಿಗ್ಗಜರಿಗೆ ರಾಜಕೀಯ ವೇದಿಕೆ ಸಿದ್ಧವಾಗಿದೆ. ಜಯಲಲಿತಾ ಸಾವಿನ ನಂತರ ಅಲ್ಲಾಡುತ್ತಿರುವ ಎಐಎಡಿಎಂಕೆ ಎದ್ದುನಿಲ್ಲುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಡಿಎಂಕೆ ಪಕ್ಷ ಕೂಡ ಎಐಎಡಿಎಂಕೆಗೆ ಪರ್ಯಾಯವಾಗಿ ಬೆಳೆಯುವ ಸೂಚನೆಯನ್ನೂ ತೋರುತ್ತಿಲ್ಲ.
ಪ್ರಜಾಕೀಯದ ಮೂಲಕ ಉಪ್ಪಿಯ ಅಭಿಯಾನ
ಕಮಲ್ ಅವರ ಇದೇ ಮಾದರಿಯನ್ನು ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರು ಕೂಡ ಅಳವಡಿಸಿಕೊಂಡಿದ್ದಾರೆ. ತಮ್ಮ ಪ್ರಜಾಕೀಯ ಪಕ್ಷದ ಮೂಲಕ ಸಾರ್ವಜನಿಕರ ಹಣದಿಂದಲೇ ಭ್ರಷ್ಟಾಚಾರವನ್ನು ತೊಲಗಿಸುವುದಾಗಿ ಅವರು ಪಣ ತೊಟ್ಟಿದ್ದು, ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಧುಮುಕುತ್ತಾರಾ, ಕಾದು ನೋಡಬೇಕು.