ಬ್ಲ್ಯಾಕ್ ಮೇಲ್ ಬ್ರೇಕ್ ಫೇಲ್: ಗೆದ್ದು ಸೋತ ಜಯಾ
ಚೆನ್ನೈ, ಮೇ 17: 'ಪಾಂಡಿಚೆರಿದೂ ಸೇರಿಕೊಂಡು ನಲವತ್ತೂ ಸ್ಥಾನ ನನಗೆ ಕೊಡಿ. ಆಮೇಲೆ ನಾನು ಕೇಂದ್ರದಲ್ಲಿ ಹೇಗೆ ಆಟ ಆಡುತ್ತೇನೆ ನೋಡಿ' ಎಂದೇ ವ್ಯವಸ್ಥಿತವಾಗಿ ಆರೇಳು ತಿಂಗಳಿಂದ ಮತದಾರರ ಮನದಲ್ಲಿ ಬೀಜ ಬಿತ್ತುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರನ್ನು ನಂಬಿದ ಮತದಾರ ಕೈಬಿಟ್ಟಿಲ್ಲ.
ಅಮ್ಮಾ ಜಯಲಲಿತಾಗೆ ದೊಡ್ಡ ಮಣೆಯನ್ನೇ ಹಾಕಿದ್ದಾರೆ. ಜಯಲಲಿತಾ ಜಯರಾಮ್ ಅಧಿಪತ್ಯದ ಎಐಡಿಎಂಕೆಗೆ 37ರಲ್ಲಿ ಜಯ ಕರುಣಿಸಿದ್ದಾರೆ. ಹಾಗಾದರೆ ಭಾರಿ ಸಂಖ್ಯಾಬಲದ ಜಯಲಲಿತಾ ಕೇಂದ್ರವನ್ನು ತಮ್ಮ ಬೆರಳತುದಿಯಲ್ಲಿ ಆಟವಾಡಿಸುತ್ತಾರೆ? ಕರ್ನಾಟಕವನ್ನು ಹುರಿದು ಮುಕ್ಕುತ್ತಾರಾ?
ಬ್ಲ್ಯಾಕ್ ಮೇಲ್ ರಾಜಕಾರಣಕ್ಕೆ ಬ್ರೇಕ್: (ಜಯಲಲಿತಾ ಮುಂದೆ ಅದೇನು ಶಿಸ್ತು, ಅದೇನು ಗೌರವ!)

ನೋ ಛಾನ್ಸ್! ಜಯಾರ ಇಂಥ ಯಾವುದೇ ಆಟಾಟೋಪ ನಡೆಯದು. ಅಷ್ಟರಮಟ್ಟಿಗೆ ಕರ್ನಾಟಕವೂ ಸೇಫ್. ಮುಖ್ಯವಾಗಿ ಕಾವೇರಿ ನದಿ ಕಾಡದು. ಅಲ್ಲಿಗೂ ಜಯಲಲಿತಾ ಕ್ಯಾತೆ ತೆಗೆದರೆ ಸರಿಯಾಗಿ ವಿಚಾರಿಸಿಕೊಳ್ಳಲು ಕರ್ನಾಟಕದ ಸಂಸದರು ಇದ್ದೇ ಇರುತ್ತಾರೆ. ಈ ಹಿಂದೆಯೂ ನಮ್ಮ ಸಂಸದರು ಇದ್ದರು ಅಂತಲ್ಲ. ಆದರೆ ಜಯಾ (ಅಥವಾ ಡಿಎಂಕೆ) ಬಲದ ಮುಂದೆ ಮಂಕಾಗುತ್ತಿದ್ದರು. ಸುಪ್ರೀಂಕೋರ್ಟ್ ಅಂಗಳದಲ್ಲೇ ಗಡದ್ದಾಗಿ ನಿದ್ದೆ ಮಾಡಿಬಿಡುತ್ತಿದ್ದರು.
ಕರ್ನಾಟಕದ ಹಿತಾಸಕ್ತಿ ಕಾಯಬಲ್ಲ ಸಂಸದರು ಗೆದ್ದಿದ್ದಾರೆ:
ಆದರೆ ಪರಿಸ್ಥಿತಿ ಇನ್ನೈದು ವರ್ಷ ಹಾಗಿಲ್ಲ. ಈಗ ಗೆದ್ದಿರುವ ಸಂಸದರು ಅದರಲ್ಲೂ ಬಿಜೆಪಿ ಸಂಸದರನ್ನು ನೋಡಿದರೆ ಕರ್ನಾಟಕದ ಜನ ಹೆಚ್ಚು ಆಶಾಭಾವ ತಾಳಬಹುದು. ಕಾವೇರಿ/ ತಮಿಳುನಾಡು ಅಂತಲೇ ಅಲ್ಲ. ಯಾವುದೇ ವಿಷಯದಲ್ಲೂ ಕರ್ನಾಟಕಕ್ಕೆ ಹೆಚ್ಚು ಪ್ರಯೋಜನ ತಂದುಕೊಡಬಲ್ಲವರಾಗಿದ್ದಾರೆ.
ಮತ್ತೆ ಜಯಾ ವಿಷಯಕೇ ಬಂದರೆ ಜಯಾಜೀ ಈ ಬಾರಿ 37 ಸಂಸದರನ್ನು ಹೋಂದಿದ್ದರು. ಪ್ರಧಾನಿ ಮೋದಿ ಮುಲಾಜಿಲ್ಲದೆ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ಕಳುಹಿಸಿಬಹುದು. ಅವರ ತರಲೆಗಳನ್ನು ಸಹಿಸಿಕೊಳ್ಳುವ ಜರೂರತ್ತು ಪ್ರಧಾನಿ ಮೋದಿಗೆ ಬರುವುದಿಲ್ಲ. ತಮಿಳುನಾಡು ಎಲ್ಲೆ ಮೀರದಿರುವುದೇ ನಿಮಗೆ ಕ್ಷೇಮ ಎಂದು ಮೋದಿ ಖಡಾಕ್ಕಾಗಿ ಹೇಳಬಹುದು. ಅಷ್ಟರಮಟ್ಟಿಗೆ ಕರ್ನಾಟಕ ನೆರೆಯ ಹೊರೆಯನ್ನು ಇಳಿಸುಬಹುದು.












Click it and Unblock the Notifications