ಜಯಲಲಿತಾ ಆರೋಗ್ಯದಲ್ಲಿ ಏರುಪೇರು: ಅಪೋಲೋ ಆಸ್ಪತ್ರೆಯತ್ತ ಜನಸಾಗರ
ಚೆನ್ನೈ, ಸೆಪ್ಟೆಂಬರ್ 23:ಎಐಎಡಿಎಂಕೆ ಅಧಿನಾಯಕಿ, 'ಅಮ್ಮ' ಜಯಲಲಿತಾ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಕೇಳಿ ಚೆನ್ನೈನ ಅಪೋಲೋ ಆಸ್ಪತ್ರೆಯತ್ತ ಜನಸಾಗರ ಹರಿದು ಬರುತ್ತಿದೆ. ಆಸ್ಪತ್ರೆಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಲಾರಿ, ಕಾರು, ಬಸ್ಸುಗಳಲ್ಲಿ ಆಸ್ಪತ್ರೆಯತ್ತ ಜನರು ಧಾವಿಸುತ್ತಿದ್ದು, ವಿವಿಧೆಡೆ ಸಂಚಾರ ದಟ್ಟಣೆ ಉಂಟಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚೆನ್ನೈ ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ್ವರ, ಅತಿಸಾರದಿಂದ ಬಳಲುತ್ತಿದ್ದ ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ. ಯಾವುದೇ ಚಿಂತೆ ಅಗತ್ಯವಿಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಶುಕ್ರವಾರ ಮುಂಜಾನೆಯೇ ಜಯಲಲಿತಾ ಅವರನ್ನು ಪೋಸ್ ಗಾರ್ಡನ್ ನಲ್ಲಿರುವ ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಈ ಬಗ್ಗೆ ಆಸ್ಪತ್ರೆ ಮೂಲಗಳು ತಿಳಿಸಿಲ್ಲ. 68 ವರ್ಷದ ಜಯಲಲಿತ್ ಅವರಿಗೆ ಮಧುಮೇಹ, ಹೈಪರ್ ಟೆನ್ಷನ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿವೆ.[Live: ಜಯಲಲಿತಾ ಶೀಘ್ರ ಗುಣಮುಖರಾಗಲಿ: ಸಿದ್ದರಾಮಯ್ಯ ಟ್ವೀಟ್]
2014ರಲ್ಲಿ ಕರ್ನಾಟಕ ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸುವ ವೇಳೆಯಲ್ಲಿ ಆಕೆಯೇ ವಕೀಲರೇ ಇವೆಲ್ಲ ಬಹಿರಂಗಪಡಿಸಿದ್ದರು. ಸದ್ಯದ ಮಾಹಿತಿ ಪ್ರಕಾರ ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಅಪೋಲೋ ಅಸ್ಪತ್ರೆಯ ವಿಶೇಷ ಚಿಕಿತ್ಸಾ ಘಟಕದಲ್ಲಿದ್ದಾರೆ ಜಯಲಲಿತಾ.
ಈ ಬಾರಿ ಸ್ವಲ್ಪ ಅಚ್ಚರಿಗೆ ಕಾರಣವಾಗುವ ಬೆಳವಣಿಗೆಯೂ ನಡೆದಿದೆ. ಈ ಹಿಂದೆ ಜಯಲಲಿತಾ ಅವರ ಅನಾರೋಗ್ಯದ ಬಗ್ಗೆ ವರದಿ ಮಾಡಿದ್ದ ಮಾಧ್ಯಮಗಳ ವಿರುದ್ಧ ಪ್ರಕರಣವನ್ನೇ ದಾಖಲಿಸಲಾಗಿತ್ತು. ಆದರೆ, ಈ ಸಲ ಮುಖ್ಯಮಂತ್ರಿ ಅನಾರೋಗ್ಯದ ಕಾರಣಕ್ಕೆ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಅದಕ್ಕೆ ಕಾರಣ ಇಂಥದ್ದು ಎಂದು ಪತ್ರಿಕಾ ಹೇಳಿಕೆಯನ್ನೇ ಬಿಡುಗಡೆ ಮಾಡಲಾಗಿದೆ.[ಸಿದ್ದರಾಮಯ್ಯ ಅವರಿಗೆ ನಾಲ್ಕು ಸಲಹೆ ನೀಡಿದ ಎಸ್ಸೆಂ ಕೃಷ್ಣ]
ಇಂಥ ವಿಚಾರಗಳಲ್ಲಿ ಜಯಲಲಿತಾ ಲೆಕ್ಕಾಚಾರಗಳು ಬೇರೆ. ಕರ್ನಾಟಕದಲ್ಲಿ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಅಧಿವೇಶನ ನಡೆಯುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂಬ ತೀರ್ಮಾನಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಅದ್ದರಿಂದ ತಮಿಳರ ಭಾವನೆಗಳನ್ನು ಅನುಕಂಪಕ್ಕೆ ತಿರುಗಿಸಿಕೊಳ್ಳಲು ಹೀಗೆ ಮಾಡಿರಬಹುದು ಎಂಬುದು ಕೂಡ ಸದ್ಯಕ್ಕೆ ಚರ್ಚೆಯಲ್ಲಿರುವ ವಿಷಯ.
ಕಾವೇರಿ ವಿಚಾರವನ್ನು ಜಯಲಲಿತಾ ಅವರು ತುಂಬ ಸಮಾಧಾನದಿಂದ ನಿರ್ವಹಿಸಿದ್ದಾರೆ ಎಂದು ಕೇಂದ್ರ ಸಚಿವ ಪೊಣ್ ರಾಧಾಕೃಷ್ಣನ್ ಇತ್ತೀಚೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ಗಲಭೆಯಾಗಿದ್ದರ್ ಹಿಂದೆ ಬಿಜೆಪಿ ಕೈವಾಡ ಇದೆ ಎಂಬ ಗುಮಾನಿ ಇದೆಯಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಅವರು "ಈ ಆರೋಪ ಆಧಾರರಹಿತ" ಎಂದಿದ್ದರು.