'ಅಮ್ಮ' ಸಿಎಂ ಗಾದಿ ಕಳೆದುಕೊಂಡಿದ್ದು ಇದೇ ಮೊದಲಲ್ಲ
ಬೆಂಗಳೂರು, ಸೆ. 27 : ಜಯಲಲಿತಾ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ತಮ್ಮದೇ ಪಕ್ಷಕ್ಕೆ ಬಹುಮತವಿದ್ದರೂ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಾಗದ ಸ್ಥಿತಿ ಜಯಲಲಿತಾಗೆ ಹಿಂದೊಮ್ಮೆ ಎದುರಾಗಿತ್ತು.
ತಮಿಳುನಾಡಿನ ಕೆಳ ನ್ಯಾಯಾಲಯವೊಂದರಿಂದ ಶಿಕ್ಷೆಗೆ ಒಳಗಾಗಿದ್ದ ಜಯಲಲಿತಾ ಚುನಾವಣೆಗೆ ಸ್ಪರ್ಧಿಸುವ ಅವಕಾಶ ತಪ್ಪಿಸಿಕೊಂಡು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದರು. ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದರೂ 'ಅಮ್ಮ' ಸುಮ್ಮನೇ ಕೂರಬೇಕಾಗಿ ಬಂದಿತ್ತು.(ಜಯಾ ಪ್ರಕರಣದ ನ್ಯಾಯಾಧೀಶರ ಬಗ್ಗೆ ಗೊತ್ತಾ?)
ತಮಿಳುನಾಡಿನ ಸರ್ಕಾರಿ ಸ್ವಾಮ್ಯದ "ತಾಂಸಿ' ಎಂಬ ಸಂಸ್ಥೆಗೆ ಸೇರಿದ್ದ ಆಸ್ತಿಯನ್ನು ತಮ್ಮ ಪರ ಮಾಡಿಕೊಂಡಿದ್ದಾರೆ ಎಂಬ ಪ್ರಕರಣದಲ್ಲಿ ಜಯಾ ಅವರನ್ನು ಅಪರಾಧಿ ಎಂದು ತಮಿಳುನಾಡು ಕೆಳ ನ್ಯಾಯಾಲಯ ಘೊಷಿಸಿದ್ದರಿಂದ 2001ರ ಚುನಾವಣೆಗೆ ಜಯಾ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ.

ಆದರೆ ಡಿಎಂಕೆಯನ್ನು ಬಗ್ಗುಬಡಿದ ಎಐಎಡಿಎಂಕೆ ಅಧಿಕಾರದ ಗದ್ದುಗೆ ಹಿಡಿಯಿತು. ಚುನಾವಣೆಯಲ್ಲಿ ಸ್ಫರ್ಧಿಸದಿದ್ದರೂ ಜಯಾ ಅವರನ್ನೇ ಮುಖ್ಯಮಂತ್ರಿ ಮಾಡಲು ಪಕ್ಷ ನಿರ್ಧರಿಸಿತು. ಆದರೆ ಈ ನೇಮಕವನ್ನು ಅನೂರ್ಜಿತಗೊಳಿಸಿದ ಸುಪ್ರೀಂ ಕೋರ್ಟ್ ಜಯಾ ಶಿಕ್ಷೆ ಎದುರಿಸುತ್ತಿದ್ದು ಅವರು ಸಿಎಂ ಆಗಲು ಸಾಧ್ಯವಿಲ್ಲ ಎಂದು 2001ರ ಸೆಪ್ಟಂಬರ್ನಲ್ಲಿ ತೀರ್ಮಾನ ನೀಡಿತು. ಅನಿವಾರ್ಯವಾಗಿ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಯಿತು.
ಇದೆಲ್ಲದರ ನಡುವೆ ಕೆಳ ನ್ಯಾಯಾಲಯದ ತೀರ್ಪನ್ನು ಜಯಾ ಚೆನೈ ಹೈಕೋರ್ಟ್ ನಲ್ಲಿ ಪ್ರಶ್ನಿಸಿದರು. ಹೈಕೋರ್ಟ್ ಜಯಾ ಅವರನ್ನು ನಿರಪರಾಧಿ ಎಂದು ಘೋಷಿಸಿತು. ಇಲ್ಲಿ ಜಯಲಲಿತಾಗೆ ಸಿಕ್ಕ ಜಯ ಮತ್ತೆ ರಾಜಕಾರಣದ ಭವಿಷ್ಯಕ್ಕೆ ನೆರವಾಯಿತು. ಜಯಾ ಅವರನ್ನು ಸಿಎಂ ಮಾಡಲೇಂದೇ ಆಂಡಿಪಟ್ಟಿ ಕ್ಷೇತ್ರದ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಉಪಚುನಾವಣೆಯಲ್ಲಿ ಗೆದ್ದ ಜಯಲಲಿತಾ ಮತ್ತೆ ಸಿಎಂ ಗದ್ದುಗೆ ಮೇಲೆ ವಿರಾಜಮಾನರಾಗಿದ್ದು ಈಗ ಇತಿಹಾಸ.












Click it and Unblock the Notifications