ಶಶಿಕಲಾಗೆ ಮತ್ತೆ ಸಂಕಷ್ಟ: 1,500 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಸ್ವಾಧೀನ

ಚೆನ್ನೈ, ನವೆಂಬರ್ 5: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾಗೆ ಆದಾಯ ತೆರಿಗೆ ಇಲಾಖೆ ಮತ್ತೊಂದು ಆಘಾತ ನೀಡಿದೆ. ಶಶಿಕಲಾ ಅವರಿಗೆ ಸೇರಿದ ಸುಮಾರು 1,500 ಕೋಟಿ ರೂ. ಮೌಲ್ಯದ ಒಂಬತ್ತು ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆಯು ಬೇನಾಮಿ ವ್ಯವಹಾರಗಳ (ತಡೆ) ಕಾಯ್ದೆ ಅಡಿ ಸ್ವಾಧೀನ ಪಡಿಸಿಕೊಂಡಿದೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆಯಾಗಿದ್ದ ಶಶಿಕಲಾ, 2016ರ ನವೆಂಬರ್ 8ರಂದು ಕೇಂದ್ರ ಸರ್ಕಾರವು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಬಳಿಕ ಚೆನ್ನೈ, ಪುದುಚೆರಿ ಮತ್ತು ಕೊಯಮತ್ತೂರುಗಳಲ್ಲಿ ಈ ಆಸ್ತಿಗಳನ್ನು ಖರೀದಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ಈ ಎಲ್ಲ ಆಸ್ತಿಗಳನ್ನು ಅಪನಗದೀಕರಣದ ದಿನದಿಂದ 2016ರ ಡಿಸೆಂಬರ್ 31ರ ಅಲ್ಪಾವಧಿಯಲ್ಲಿಯೇ ಖರೀದಿಸಲಾಗಿತ್ತು.

ಗಮನಾರ್ಹ ಸಂಗತಿಯೆಂದರೆ ಇದೇ ಅವಧಿಯಲ್ಲಿ (ಸೆ. 22 ರಿಂದ ಡಿ. 5) ಶಶಿಕಲಾ ಅವರಿಗೆ ಆಪ್ತರಾಗಿದ್ದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿ. 5ರಂದು ಅವರು ನಿಧನರಾಗಿದ್ದರು. ಅದರ ಬಳಿಕವೂ ಶಶಿಕಲಾ ಆಸ್ತಿ ಖರೀದಿ ವ್ಯವಹಾರ ಮುಂದುವರಿಸಿದ್ದರು ಎನ್ನಲಾಗಿದೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ 2017ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಅವರಿಗೆ ಈ ಬಗ್ಗೆ ತಿಳಿಸಲು ವಿಶೇಷ ಜೈಲಿನ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.

ತಾತ್ಕಾಲಿಕ ಸ್ವಾಧೀನ

ತಾತ್ಕಾಲಿಕ ಸ್ವಾಧೀನ

ಚೆನ್ನೈನಲ್ಲಿರುವ ಆದಾಯ ತೆರಿಗೆ ಇಲಾಖೆ ಅಡಿಯಲ್ಲಿನ ಬೇನಾಮಿ ತಡೆ ಘಟಕ (ಬಿಪಿಯು) ತನಿಖಾಧಿಕಾರಿಯು ಕಾಯ್ದೆಯ 24 (3) ಸೆಕ್ಷನ್ ಅಡಿ ಸ್ವಾಧೀನ ಆದೇಶವನ್ನು ಹೊರಡಿಸಿದ್ದು, ಅದನ್ನು ಕಂಪೆನಿಗಳ ನೊಂದಣಾಧಿಕಾರಿ ಮತ್ತು ಉಪ ನೊಂದಣಾಧಿಕಾರಿಗೆ ಕಳುಹಿಸಿದ್ದಾರೆ. ಇದು ತಾತ್ಕಾಲಿಕ ಸ್ವಾಧೀನವಾಗಿದ್ದು, 90 ದಿನಗಳವರೆಗೆ ಜಾರಿಯಲ್ಲಿರುತ್ತದೆ.

ರದ್ದುಗೊಂಡ ನೋಟುಗಳ ವಿನಿಮಯ

ರದ್ದುಗೊಂಡ ನೋಟುಗಳ ವಿನಿಮಯ

ಮೂಲಗಳ ಪ್ರಕಾರ ಶಶಿಕಲಾ, ಅಪನಗದೀಕರಣದ ಘೋಷಣೆಯಾದ ಬಳಿಕ ನಕಲಿ ಹೆಸರುಗಳಲ್ಲಿ ರದ್ದುಗೊಂಡ ನೋಟುಗಳನ್ನು ವಿನಿಮಯ ಮಾಡಲು ಸುಮಾರು 1500 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ. 2017ರ ನವೆಂಬರ್‌ನಲ್ಲಿ ನಡೆದ ವ್ಯಾಪಕ ದಾಳಿಗಳಿಂದ ಈ ಆಸ್ತಿ ಖರೀದಿ ವ್ಯವಹಾರದ ವಿವರ ಬಹಿರಂಗವಾಗಿತ್ತು.

ಆಪರೇಷನ್ ಕ್ಲೀನ್ ಮನಿ

ಆಪರೇಷನ್ ಕ್ಲೀನ್ ಮನಿ

ಎಐಎಡಿಎಂಕೆಯಿಂದ ಪದಚ್ಯುತಗೊಂಡ ನಾಯಕಿ ವಿ.ಕೆ. ಶಶಿಕಲಾ ಅವರ ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಚೆನ್ನೈ, ಕೊಯಮತ್ತೂರು ಮತ್ತು ಪುದುಚೆರಿಯ 37 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು 2017ರಲ್ಲಿ 'ಆಪರೇಷನ್ ಕ್ಲೀನ್ ಮನಿ' ಕಾರ್ಯಾಚರಣೆ ನಡೆಸಿದ್ದರು. ಸುಮಾರು 150 ಇತರೆ ಸ್ಥಳಗಳಿಂದ ಕೂಡ ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಐಟಿ ಇಲಾಖೆ ತಿಳಿಸಿತ್ತು.

ಮನೆಗೆಲಸದವರು, ಚಾಲಕರ ಹೆಸರಲ್ಲಿ ಆಸ್ತಿ

ಮನೆಗೆಲಸದವರು, ಚಾಲಕರ ಹೆಸರಲ್ಲಿ ಆಸ್ತಿ

ವಶಪಡಿಸಿಕೊಂಡ ದಾಖಲೆಗಳು ಬೇನಾಮಿ ಆಸ್ತಿಗಳಿಗೆ ಸಂಬಂಧಿಸಿದ್ದಾಗಿವೆ. ಮನೆಗೆಲಸದವರು, ಕಾರ್ ಚಾಲಕರು, ಸಹಾಯಕರು ಮುಂತಾದವರ ಹೆಸರುಗಳಲ್ಲಿ ಆಸ್ತಿ ಖರೀದಿ ಮಾಡಿರುವುದು ಪತ್ತೆಯಾಗಿದೆ ಎಂದು ಐಟಿ ಮಾಹಿತಿ ನೀಡಿತ್ತು. ಬೃಹತ್ ಕಾರ್ಯಾಚರಣೆಯಲ್ಲಿ ಸುಮಾರು 1,800 ಅಧಿಕಾರಿಗಳು ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಪೋಯೆಸ್ ಗಾರ್ಡನ್ ನಿವಾಸ ಸೇರಿದಂತೆ ಹಲವೆಡೆ ದಾಳಿಗಳು ನಡೆದಿದ್ದವು.

ಸ್ವಾಧೀನಪಡಿಸಿಕೊಂಡ ಆಸ್ತಿಗಳಲ್ಲಿ ಚೆನ್ನೈನ ಪೆರಂಬೂರ್‌ನಲ್ಲಿನ ಗಂಗಾ ಪ್ರತಿಷ್ಠಾನದ ಸ್ಪೆಕ್ಟ್ರಮ್ ಮಾಲ್, ಪುದುಚೆರಿ ಶ್ರೀ ಲಕ್ಷ್ಮೀ ಜ್ಯುವೆಲರಿ ಹೆಸರಿನಲ್ಲಿರುವ ರೆಸಾರ್ಟ್ ಮತ್ತು ಕೊಯಮತ್ತೂರಿನಲ್ಲಿನ ಸೆಂಥಿಲ್ ಪೇಪರ್ ಆಂಡ್ ಬೋರ್ಡ್ಸ್ ಒಳಗೊಂಡಿವೆ ಎಂದು ಮೂಲಗಳು ಹೇಳಿವೆ.

ಶಶಿಕಲಾ ಹೆಸರಿನಲ್ಲಿ ಇಲ್ಲ

ಶಶಿಕಲಾ ಹೆಸರಿನಲ್ಲಿ ಇಲ್ಲ

ಶಶಿಕಲಾ ಅವರು ಖರೀದಿಸಿದ ಕಂಪೆನಿಗಳನ್ನು ತಮ್ಮ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿರಲಿಲ್ಲ ಮತ್ತು ಆ ಕಂಪೆನಿಗಳು ಅವುಗಳ ಮೂಲ ಮಾಲೀಕರ ಹೆಸರಿನಲ್ಲಿಯೇ ಇರುವಂತೆ ನೋಡಿಕೊಂಡಿದ್ದರು. ಆದರೆ ಶಶಿಕಲಾ ಕುಟುಂಬದವರು ಮಾಲೀಕತ್ವದ ಸ್ಥಳಗಳು ಹಾಗೂ ಜಯಲಲಿತಾ ನಿವಾಸದಲ್ಲಿ ಶಶಿಕಲಾ ವಾಸವಿದ್ದ ಜಾಗದಲ್ಲಿ ನಡೆಸಿದ ತಪಾಸಣೆಗಳಿಂದ ಈ ಆಸ್ತಿಗಳ ಖರೀದಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+