ಚೆನ್ನೈ: ಬಂಡೆದ್ದ ಎಐಎಡಿಎಂಕೆ 19 ಶಾಸಕರ ವಜಾಕ್ಕೆ ವ್ಹಿಪ್ ಜಾರಿ
ಎಐಎಡಿಎಂಕೆಯ ದಿನಕರನ್ ಬೆಂಬಲಿಗ ಶಾಸಕರ ಶಾಸಕತ್ವ ಅನರ್ಹಗೊಳಿಸಲು ತಮಿಳುನಾಡು ರಾಜ್ಯ ಸರ್ಕಾರದಿಂದ ವ್ಹಿಪ್ ಜಾರಿ. ತಮಿಳುನಾಡು ವಿಧಾನಸಭೆಯ ಸ್ಪೀಕರ್ ಗೆ ವ್ಹಿಪ್ ಮೂಲಕ ಆಗ್ರಹಿಸಿರುವ ರಾಜ್ಯ ಸರ್ಕಾರ.
ಚೆನ್ನೈ, ಆಗಸ್ಟ್ 24: ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ದಂಗೆಯೆದ್ದು, ಅವರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ಬೆದರಿಕೆ ಹಾಕಿರುವ ಆಡಳಿತಾರೂಢ ಪಕ್ಷದವರೇ ಆದ 19 ಶಾಸಕರನ್ನು ಅವರ ಶಾಸಕತ್ವದಿಂದ ಅನರ್ಹಗೊಳಿಸುವಂತೆ ಆಗ್ರಹಿಸಿ, ತಮಿಳುನಾಡು ರಾಜ್ಯ ಸರ್ಕಾರ ವಿಧಾನಸಭಾಧ್ಯಕ್ಷರಿಗೆ ವ್ಹಿಪ್ ಜಾರಿಗೊಳಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಯಾದ ಎಸ್. ರಾಜೇಂದ್ರನ್ ಅವರು ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಫೆಬ್ರವರಿ 14ರಂದು ನಡೆದಿದ್ದ ಪಳನಿಸ್ವಾಮಿ ಸರ್ಕಾರದ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ, ಎಲ್ಲಾ ಎಐಎಡಿಎಂಕೆ ಶಾಸಕರು ಪಳನಿ ಸರ್ಕಾರಕ್ಕೆ ತಮ್ಮ ಬೆಂಬಲವಿರುವುದಾಗಿ ಘೋಷಿಸಿದ್ದಾರೆ. ಅವರ ಸರ್ಕಾರದ ಪರವಾಗಿ ಮತವನ್ನೂ ಚಲಾಯಿಸಿದ್ದಾರೆ. ಈಗ ಅವರು, ವರಸೆ ಬದಲಿಸಿರುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದರು.
ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ಪಳನಿಸ್ವಾಮಿ ವಿರುದ್ಧ ಬಂಡಾಯವೆದ್ದಿರುವ ಎಲ್ಲಾ 19 ಶಾಸಕರ ಶಾಸಕತ್ವದಿಂದ ಅನರ್ಹಗೊಳಿಸಬೇಕೆಂದು ವ್ಹಿಪ್ ಜಾರಿಗೊಳಿಸಿರುವುದಾಗಿ ಅವರು ತಿಳಿಸಿದರು.
ಕೆಲವು ತಿಂಗಳಿಂದ ಎರಡು ಗುಂಪುಗಳಾಗಿ ಎಐಎಡಿಎಂಕೆ ಪಕ್ಷವು ಒಡೆದುಹೋಗಿತ್ತು. ಪಳನಿಸ್ವಾಮಿ ಬಣ ಹಾಗೂ ಪನ್ನೀರ್ ಸೆಲ್ವಂ ಬಣಗಳು ಪರಸ್ಪರ ಕೆಸರೆರೆಚಾಟದಲ್ಲಿ ನಿರತರಾಗಿದ್ದವು. ಆದರೆ, ಇತ್ತೀಚೆಗೆ, ಈ ಎರಡೂ ಬಣಗಳು ಪರಸ್ಪರ ಒಗ್ಗೂಡಿದವು.
ಇದು, ಪಕ್ಷದ ಅಧಿನಾಯಕಿ ಶಶಿಕಲಾ ಅವರ ಸಂಬಂಧಿ ದಿನಕರನ್ ಅವರಿಗೆ ಹಿಡಿಸಿರಲಿಲ್ಲ. ಪಕ್ಷದ ಉಪ ಮಹಾ ಕಾರ್ಯದರ್ಶಿಯಾಗಿರುವ ಅವರು, ತಮ್ಮನ್ನು ಪಳನಿ-ಪನ್ನೀರ್ ಇಬ್ಬರೂ ಮೂಲೆಗುಂಪಾಗಿಸುತ್ತಾರೆಂಬ ಭೀತಿಯಲ್ಲಿ (ಅದು ನಿಜವೂ ಹೌದು) ತಮ್ಮನ್ನು ಬೆಂಬಲಿಸುವ ಶಾಸಕರನ್ನು ಸರ್ಕಾರದ ವಿರುದ್ಧ (ಪಳನಿಸ್ವಾಮಿ ವಿರುದ್ಧ) ತಿರುಗಿಬೀಳುವಂತೆ ಮಾಡಿದ್ದಾರೆ.