ಕ್ಯಾನ್ಸರ್ ಪೀಡಿತರಿಗಾಗಿ ವಿದ್ಯಾರ್ಥಿಗಳು ಸಹಾಯ ಮಾಡಿದ್ದು ಹೇಗೆ?
ಚೆನ್ನೈ, ಮಾರ್ಚ್ 06 : ಅವರು ಕಾಲೇಜಿನ ವಿದ್ಯಾರ್ಥಿಗಳು. ಕ್ಯಾನ್ಸರ್ ಪೀಡಿತರನ್ನು ಕಂಡರೆ ಕನಿಕರ. ರೋಗಿಗಳಿಗೆ ಕೈಲಾದ ಸಹಾಯ ಮಾಡಬೇಕು ಎಂಬ ಆಸೆ. ತಾವು ಮಾಡುವ ಚಿಕ್ಕ ಕೆಲಸದಿಂದ ರೋಗಿಗಳ ಮುಖದಲ್ಲಿ ಮಂದಹಾಸ ಮೂಡಿದರೆ ಸಾಕು ಎಂಬುವ ಪುಟ್ಟ ನಿರೀಕ್ಷೆ.
ತಮಿಳುನಾಡಿನ ಕೊಯಮತ್ತೂರಿನ 80 ವಿದ್ಯಾರ್ಥಿನಿಯರು ಕ್ಯಾನ್ಸರ್ ಪೀಡಿತರಿಗೆ ನೆರವಾಗಲು ಪಣತೊಟ್ಟರು. ಪಾಕೆಟ್ ಮನಿ ಪಡೆದು ಕಾಲೇಜಿಗೆ ಬರುವ ಅವರು ರೋಗಿಗಳಿಗೆ ಹೇಗೆ ಸಹಾಯ ಮಾಡಬಹುದು ಎಂದು ಆಲೋಚಿಸಿದರು.
ಮೂಳೆ ಕ್ಯಾನ್ಸರ್ ಇದ್ದ 9ರ ಬಾಲಕಿಗೆ ಮೈಸೂರಿನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
ಎಲ್ಲರೂ ಸೇರಿ ತಲೆ ಖರ್ಚು ಮಾಡಿ ಆಲೋಚಿಸಿದಾಗ ಹೊಳೆದದ್ದು ತಲೆಯಲ್ಲಿನ ಕೂದಲು ದಾನ ಮಾಡುವ ಚಿಂತನೆ. ಈ ಚಿಂತನೆ ಈಗ 200 ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಿದೆ. ವಿದ್ಯಾರ್ಥಿನಿಯರ ಕಾಳಜಿಗೆ ಕ್ಯಾನ್ಸರ್ ಪೀಡಿತರು ಧನ್ಯವಾದ ಸಲ್ಲಿಸಿದ್ದಾರೆ.
ಲಾಂಬೋರ್ಗಿನಿ ಕನಸು ಕಂಡ ಬಾಲಕನ ಕ್ಯಾನ್ಸರ್ ಚಿಕಿತ್ಸೆಗೆ ನೆರವು ಬೇಕಿದೆ
ಹೌದು, ಕೊಯಮತ್ತೂರಿನ 80 ಕಾಲೇಜು ವಿದ್ಯಾರ್ಥಿನಿಯರು ತಲೆಯ 8 ಇಂಚು ಕೂದಲನ್ನು ದಾನ ಮಾಡಿದ್ದಾರೆ. ಈ ಕೂದಲನ್ನು ಬಳಸಿಕೊಂಡು ವಿಗ್ ತಯಾರು ಮಾಡಲಿದ್ದು, ಅದನ್ನು ತಲೆ ಕೂದಲು ಉದುರಿ ಹೋಗಿರುವ ಕ್ಯಾನ್ಸರ್ ಪೀಡಿತರಿಗೆ ನೀಡಲಾಗುತ್ತದೆ.
ಕ್ಯಾನ್ಸರ್ ಪೀಡಿತನ ಬದುಕಿಗೆ ಭರವಸೆ ಬೆಳಕಾದ ಜಗನ್ ಮೋಹನ್ ರೆಡ್ಡಿ
8 ಇಂಚಿಗಿಂತ ಹೆಚ್ಚಿನ ಕೂದಲನ್ನು ಕೊಡಲು ವಿದ್ಯಾರ್ಥಿನಿಯರು ಸಿದ್ಧವಿದ್ದಾರೆ. ಆದರೆ, ಅಗತ್ಯವಿದ್ದಷ್ಟು ಕೂದಲನ್ನು ಮಾತ್ರ ದಾನವಾಗಿ ಪಡೆಯಲಾಗಿದೆ. ವಿದ್ಯಾರ್ಥಿನಿಯರ ಆಲೋಚನೆ ಇನ್ನೂ 200 ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದರೆ ತಲೆಗೂದಲು ಉದುರಿ ಹೋಗುತ್ತದೆ. ದಾನವಾಗಿ ನೀಡಿದ ಕೂದಲಿನಿಂದ ವಿಗ್ ತಯಾರಿಸಿ ರೋಗಿಗಳಿಗೆ ನೀಡಲಾಗುತ್ತದೆ. ವಿದ್ಯಾರ್ಥಿನಿಯರ ಕಾರ್ಯಕ್ಕೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ರೋಗಿಗಳಿಗೆ ಸಹಾಯ ಮಾಡುವಷ್ಟು ನಾವು ಆರ್ಥಿಕವಾಗಿ ಸಬಲರಾಗಿಲ್ಲ. ಆದ್ದರಿಂದ, ನಮ್ಮ ಕೈಲಾದ ಸಹಾಯ ಮಾಡಿದ್ದೇವೆ. ಇದರಿಂದ ರೋಗಿಗಳು ಸಂತೋಷಗೊಂಡರೆ ಸಾಕು" ಎಂದು ಕೂದಲು ದಾನ ಮಾಡಿದ ವಿದ್ಯಾರ್ಥಿನಿ ವಿನೋಥಿನಿ ಹೇಳಿದ್ದಾರೆ.