ಸ್ಥಳೀಯ ಸಂಸ್ಥೆಗಳ ಚುನಾವಣೆ: ಕ್ಷಿಪ್ರಪಡೆಗೆ ಸಿಕ್ಕಿದ್ದು ಹಣವಲ್ಲ ಈರುಳ್ಳಿ!
ಚೆನ್ನೈ, ಡಿಸೆಂಬರ್.22: ತಮಿಳುನಾಡಿನಲ್ಲಿ ಈಗ ಸ್ಥಳೀಯ ಚುನಾವಣೆಗಳದ್ದೇ ಹವಾ. ಲೋಕಲ್ ಎಲೆಕ್ಷನ್ ಆದರೂ ಕೂಡಾ ಇಲ್ಲಿ ಅಭ್ಯರ್ಥಿಗಳು ಗೆಲುವಿಗಾಗಿ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ತಮಿಳುನಾಡಿನಲ್ಲಿ ನಡೆಯುತ್ತಿರುವ ಸ್ಥಳೀಯ ಚುನಾವಣೆಗಳಲ್ಲಿ ಮತದಾರರಿಗೆ ಹಂಚಲು ಕೋಟಿ ಕೋಟಿ ರೂಪಾಯಿಗಳನ್ನು ಲಾರಿಗಳಲ್ಲಿ ಸಾಗಿಸಲಾಗುತ್ತಿದೆ ಎಂಬ ಬಗ್ಗೆ ದೂರುಗಳ ಬಂದಿದ್ದವು. ಈ ಹಿನ್ನೆಲೆಯಲ್ಲಿ ಹಣದ ಹರಿವಿಗೆ ಕಡಿವಾಣ ಹಾಕಲು ಚುನಾವಣಾ ಕ್ಷಿಪ್ರಪಡೆ ಕಾರ್ಯಾಚರಣೆಗೆ ಇಳಿದಿತ್ತು.
ಈರುಳ್ಳಿ ಆಯ್ತು, ಈಗ ಅಡುಗೆ ಎಣ್ಣೆ ಬೆಲೆ ಹೆಚ್ಚಳದ ಸರದಿ
ಹಣ ಹಂಚಿಕೆಗೆ ಕಡಿವಾಣ ಹಾಕಲು ಫೀಲ್ಡ್ ಗೆ ಇಳಿದ ಚುನಾವಣಾ ಅಧಿಕಾರಿಗಳ ತಂಡಕ್ಕೆ ಸಿಕ್ಕಿದ್ದು ಹಣವಲ್ಲ. ಬದಲಿಗೆ ಬಂಗಾರದ ಬೆಲೆ ಹೊಂದಿರುವ ಈರುಳ್ಳಿ. ಅಚ್ಚರಿ ಎನಿಸಿದರೂ ಇದು ತಮಿಳುನಾಡಿನಲ್ಲಿ ನಡೆದ ಸತ್ಯ ಘಟನೆಯಾಗಿದೆ.

21 ಟನ್ ಈರುಳ್ಳಿ ವಶಕ್ಕೆ ಪಡೆದ ಚುನಾವಣಾ ಕ್ಷಿಪ್ರಪಡೆ:
ತಮಿಳುನಾಡಿನ ಸಿರ್ಖಾಜಿ ಬಳಿ ಲಾರಿಯಲ್ಲಿ ಸಾಗಿಸುತ್ತಿದ್ದ 21 ಟನ್ ಈರುಳ್ಳಿಯನ್ನು ಚುನಾವಣಾ ಕ್ಷಿಪ್ರಪಡೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಾರಿಯಲ್ಲಿ ಹಣವನ್ನು ಸಾಗಿಸಲಾಗುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಎಲ್ಲ ಲಾರಿಗಳನ್ನು ಪರಿಶೀಲನೆ ಮಾಡಲಾಗುತ್ತಿತ್ತು. ಈ ವೇಳೆ ಲಾರಿಯಲ್ಲಿ ಈರುಳ್ಳಿ ತುಂಬಿಕೊಂಡು ಸಾಗಾಟ ಮಾಡಲಾಗುತ್ತಿದ್ದು, ಲಾರಿ ಚಾಲಕನ ಬಳಿ ಈ ಬಗ್ಗೆ ಯಾವುದೇ ದಾಖಲೆಗಳು ಇರಲಿಲ್ಲ.
ಯಾವುದೇ ದಾಖಲೆಗಳಿಲ್ಲದೇ ಈರುಳ್ಳಿಯನ್ನು ಮಹಾರಾಷ್ಟ್ರದಿಂದ ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇನ್ನು ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ 21 ಟನ್ ಈರುಳ್ಳಿ ಜೊತೆಗೆ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.












Click it and Unblock the Notifications