ಶಶಿಕಲಾ ಬತ್ತಳಿಕೆಯಲ್ಲಿ ಇನ್ನೂ ಏನೇನು ಬಾಣಗಳಿವೆ?
ಚೆನ್ನೈ, ಫೆಬ್ರವರಿ 13 : ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಅವರ ಸಾವಿನ ಘೋಷಣೆ 'ಅಧಿಕೃತವಾಗಿ' ಘೋಷಣೆಯಾಗುವ ಮುನ್ನವೇ ತಮಿಳುನಾಡಿನ ಅಧಿಕಾರದ ವಾಸನೆಯನ್ನು ಶಶಿಕಲಾ ನಟರಾಜನ್ ಗ್ರಹಸಿದ್ದರು. ಸಾಮಾನ್ಯ ಕಾರ್ಯಕರ್ತೆಯೂ ಆಗಿರದಿದ್ದ ಶಶಿಕಲಾ ಆಗಲೇ ಸಾಕಷ್ಟು ಲೆಕ್ಕಾಚಾರದಲ್ಲಿ ತೊಡಗಿದ್ದರು.
ಮೊದಲಿಗೆ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಅನುಕಂಪ ಗಿಟ್ಟಿಸುವುದು, ನಂತರ ಸಮಯ ಸಾಧಿಸಿ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೇರುವುದು, ನಂತರ ನಯವಾಗಿ ಪನ್ನೀರ್ ಸೆಲ್ವಂ ಅವರನ್ನು ಪಕ್ಕಕ್ಕೆ ತಳ್ಳಿ ಮುಖ್ಯಮಂತ್ರಿ ಗದ್ದುಗೆಯ ಮೇಲೆ ವಿರಾಜಮಾನವಾಗುವುದು.[ಶಶಿಕಲಾಗೆ ಚಾನ್ಸ್! ಅಕಸ್ಮಾತ್ ಅಪರಾಧಿಯಾದರೂ ಅನರ್ಹರಾಗುವುದಿಲ್ಲ]
ಈ ಪ್ಲಾನ್ ಸ್ವಲ್ಪ ಮಟ್ಟಿಗೆ ಶಶಿಕಲಾ ನಟರಾಜನ್ ಅವರಿಗೆ ಸರಿಯಾಗಿಯೇ ವರ್ಕೌಟ್ ಆಗಿದೆ. ಹೆಸರಿಗೆ ಮಾತ್ರ ಪನ್ನೀರ್ ಸೆಲ್ವಂ ಅವರು ಮುಖ್ಯಮಂತ್ರಿಯಾಗಿದ್ದರೂ ಕ್ಯಾಬಿನೆಟ್ ಮೀಟಿಂಗ್ ಕರೆಯುತ್ತಿದ್ದುದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದುದು ಶಶಿಕಲಾ ಅವರೇ.
ಆದರೆ, ಯಾವಾಗ ಓ ಪನ್ನೀರ್ ಸೆಲ್ವಂ ಅವರು ಕಣ್ಣು ಮುಚ್ಚಿ ಮುಕ್ಕಾಲು ಗಂಟೆ ಜಯಲಲಿತಾ ಅವರ ಸಮಾಧಿಯೆದಿರು ಕುಳಿತು, ಕಣ್ಣೀರು ಒರೆಸಿಕೊಂಡು ಎದ್ದುಬಂದರೋ ತಮಿಳುನಾಡಿನ ಇಡೀ ರಾಜಕೀಯ ಚಿತ್ರಣವೇ ಬದಲಾಗಿ ಹೋಗಿದೆ. ಸೈಡ್ ಆ್ಯಕ್ಟರ್ ರೀತಿಯಿದ್ದ ಪನ್ನೀರ್ ಇದ್ದಕ್ಕಿದ್ದಂತೆ ಹೀರೋ ವೇಶ ತೊಟ್ಟುಬಿಟ್ಟಿದ್ದಾರೆ.[ಶಶಿ ಮುಖ್ಯಮಂತ್ರಿಯಾಗದಂತೆ ತಡೆದಿದ್ದಕ್ಕೆ ನಿಜವಾದ ಕಾರಣ]
ಶಶಿಕಲಾ ಸುಮ್ಮನೆ ಕುಳಿತುಕೊಳ್ಳುವ ಆಸಾಮಿಯೇ ಅಲ್ಲ. ಮೊದಲ ಪ್ಲಾನ್ ಫ್ಲಾಪ್ ಆಗುತ್ತಿದ್ದಂತೆ ಪ್ಲಾನ್ ಬಿಯನ್ನು ಜಾರಿ ಮಾಡಲು ಆರಂಭಿಸಿದ್ದಾರೆ. ಆದರೆ, ಎಲ್ಲವೂ ಸೋಮವಾರ ಅಥವಾ ಮಂಗಳವಾರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಬರಲಿರುವ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿರುತ್ತದೆ.
ಹಾಗಿದ್ರೆ ಪ್ಲಾನ್ ಬಿನಲ್ಲಿ ಏನೇನಿದೆ? ಮೊದಲಿಗೆ ಫ್ಲಾಪ್ ಆದ ಪ್ಲಾನ್ ಗಳಾವುವು? ಜಯಲಲಿತಾಗಿಂತಲೂ ಕಠೋರವಾದ ಹಠಕ್ಕೆ ಬಿದ್ದಿರುವ, ಈ ಸಂಗತಿಯನ್ನು ಪ್ರತಿಷ್ಠೆಯ ಪ್ರಶ್ನೆ ಮಾಡಿಕೊಂಡಿರುವ ಶಶಿಕಲಾ ಅವರ ಬತ್ತಳಿಕೆಯಲ್ಲಿ ಇನ್ನೂ ಏನೇನು ಬಾಣಗಳಿವೆ?
ಹುಷಾರಾಗಿಬಿಟ್ಟ ವಿದ್ಯಾಸಾಗರ್ ರಾವ್
ಶಾಸಕರನ್ನೆಲ್ಲಾ ಒಟ್ಟಿಗೆ ಸೇರಿಸಿ, ರೆಸಾರ್ಟಲ್ಲಿ ಕೂಡಿಹಾಕಿ ತಮ್ಮ ಬಳಿ ಬಹುಮತಕ್ಕೆ ಅಗತ್ಯವಾದ ಸಂಖ್ಯೆಯಿದೆ ಎಂದು ತೋರಲು ರಾಜ್ಯಪಾಲರಾದ ವಿದ್ಯಾಸಾಗರ್ ಅವರ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು. ಯಾವಾಗ ಶಾಸಕರ ಸಹಿ ಮೇಲೆ ರಾಜ್ಯಪಾಲರಿಗೆ ಅನುಮಾನ ಮೂಡಿತೋ ವಿದ್ಯಾಸಾಗರ್ ಅವರು ಹುಷಾರಾಗಿಬಿಟ್ಟರು.
ವಿಭಿನ್ನ ಹೋರಾಟದ ಧಮ್ಕಿ ಹಾಕಿದ ಶಶಿ
ರಾಜ್ಯಪಾಲರು ಶಶಿಕಲಾ ಅವರ ಒತ್ತಡಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲವೋ ಆಗಲೇ ಶಶಿಕಲಾ ಅವರ ಸಹನೆಯ ಕಟ್ಟೆ ಒಡೆದಿತ್ತು. ರಾಜಭವನದ ಮುಂದೆ ಧರಣಿ ಕೂಡವುದಾಗಿ ಬೆದರಿಕೆ ಒಡ್ಡಿದರು. ಮಣಿಯದಿದ್ದರೆ ವಿಭಿನ್ನವಾದ 'ಹೋರಾಟ' ಮಾಡುವುದಾಗಿ ಧಮ್ಕಿ ಹಾಕಿದರು. ಪೊಲೀಸರ ಪಡೆಯ ಮುಂದೆ ಶಶಿ ಆಟ ನಡೆಯಲಿಲ್ಲ.
ಮಹಿಳೆ ಮುಖ್ಯಮಂತ್ರಿಯಾಗುವುದು ಬಲು ಕಷ್ಟ
ನಂತರ, ತಾನು ಮಹಿಳೆಯಾಗಿದ್ದ ಕಾರಣಕ್ಕೆ ತನ್ನನ್ನು ಸರಕಾರ ರಚಿಸಲು ಆಹ್ವಾನ ನೀಡಲಿಲ್ಲ. ಇಂಥ ರಾಜ್ಯದಲ್ಲಿ ಮಹಿಳೆ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸುವುದು ಬಲು ಕಷ್ಟ ಅಂತ ಕಣ್ಣೀರು ಸುರಿಸಿದರು. ಇದನ್ನು ಪನ್ನೀರ್ ಸೆಲ್ವಂ 'ಮೊಸಳೆ ಕಣ್ಣೀರು' ಎಂದು ವ್ಯಾಖ್ಯಾನಿಸಿದರು. ಅಲ್ಲಿಗೆ, ಈ ಯೋಜನೆಯೂ ಕೈಕೊಟ್ಟಿತು.
ಶಾಸಕಾಂಗದ ಪಕ್ಷದ ಅಧ್ಯಕ್ಷನಾಗಿ ಬೇರೆಯವರು
ಯಾವಾಗ ಹಲವಾರು ಸಂಸದರು, ಹಿರಿಯ ನಾಯಕರು, ಶಾಸಕರು ಪಂಚೆ ಒದರಿಕೊಂಡು ಪನ್ನೀರ್ ಅವರಿಗೆ ಜೈ ಅಂದರೋ, ತಾನು ಮುಖ್ಯಮಂತ್ರಿಯಾಗುವುದು ಸದ್ಯಕ್ಕೆ ಕನಸಿನ ಮಾತು ಎಂದರಿತ ಅವರು, ಸೆಂಗೊಟೈಯನ್ ಅಥವಾ ಇಕೆ ಪಳನಿಸಾಮಿ ಅವರನ್ನು ಶಾಸಕಾಂಗ ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಪ್ಲಾನಿಗೆ ಕೈಹಾಕಿದ್ದಾರೆ.
ಅಪರಾಧ ಸಾಬೀತಾದರೆ ಪ್ಲಾನ್ ಬಿ ಜಾರಿ
ಆದರೆ, ಈ ಪ್ಲಾನ್ ಬಿ ಯಶಸ್ವಿಯಾಗಬೇಕಾದರೆ ಅವರು ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕಾಯಲೇಬೇಕು. ಒಂದು ವೇಳೆ ಶಶಿಕಲಾ ಅಪರಾಧಿ ಎಂದು ಸಾಬೀತಾದರೆ ಪರಪ್ಪನ ಅಗ್ರಹಾರ ಜೈಲಿನಿಂದಲೇ ಪ್ಲಾನ್ ಬಿಯನ್ನು ಜಾರಿಗೆ ತರಬೇಕಾಗುತ್ತದೆ. ಆದರೆ, ಅಂಥ ಪ್ಲಾನ್ ಬಿ ಯಾವುದೂ ಇಲ್ಲ ಎಂದು ಕೆಲ ನಾಯಕರು ಕೈಝಾಡಿಸುತ್ತಿದ್ದಾರೆ.