ತುಕ್ಡೆ ತುಕ್ಡೆ ಗ್ಯಾಂಗ್ ಜತೆ ನಿಂತ ದೀಪಿಕಾ ಪಡುಕೋಣೆ: ಸ್ಮೃತಿ ಇರಾನಿ ಕಿಡಿ
ಚೆನ್ನೈ, ಜನವರಿ 10: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದ ನಟಿ ದೀಪಿಕಾ ಪಡುಕೋಣೆ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮೃತಿ ಇರಾನಿ, 'ದೀಪಿಕಾ ಪಡುಕೋಣೆ 2011ರಲ್ಲಿಯೇ ತಮ್ಮ ರಾಜಕೀಯ ನಂಟನ್ನು ಪ್ರದರ್ಶಿಸಿದ್ದರು. ಅವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ' ಎಂದು ಹೇಳಿದರು. ದೀಪಿಕಾ ಪಡುಕೋಣೆ ಅವರ 2011ರ ಸಂದರ್ಶನದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಅವರು ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದರು.
'ಸುದ್ದಿಗಳನ್ನು ಓದುವವರಿಗೆ ತಾವು ಯಾರ ಪರವಾಗಿ ನಿಲ್ಲುತ್ತಿದ್ದೇವೆ ಎಂಬುದರ ಅರಿವಿರುತ್ತದೆ. ಪ್ರತಿಬಾರಿ ಒಬ್ಬ ಸಿಆರ್ಪಿಎಫ್ ಯೋಧ ಸತ್ತಾಗ ಸಂಭ್ರಮಿಸುವ ಜನರ ಜತೆಯಲ್ಲಿ ನೀವು ನಿಂತಿದ್ದೀರಿ' ಎಂದು ದೀಪಿಕಾ ಪಡುಕೋಣೆ ವಿರುದ್ಧ ಸ್ಮೃತಿ ಹರಿಹಾಯ್ದರು.

ಅವರ ಸ್ವಾತಂತ್ರ್ಯ ನಿರಾಕರಿಸುವುದಿಲ್ಲ
'ದೀಪಿಕಾ ಪಡುಕೋಣೆ ಅವರ ರಾಜಕೀಯ ನಂಟು ಏನೆಂಬುದು ಈ ಹಿಂದೆಯೇ ನನಗೆ ತಿಳಿದಿದೆ. ಸೈದ್ಧಾಂತಿಕವಾಗಿ ಕಣ್ಣಿಗೆ ಕಣ್ಣಿಟ್ಟು ನೋಡದೆ ಇತರೆ ಯುವತಿಯರ ಮೇಲೆ ಹಲ್ಲೆ ನಡೆಸುವ ಜನರ ಜತೆ ನಿಂತಿರುವ ಅವರ ಹಕ್ಕನ್ನು ನಾನು ನಿರಾಕರಿಸುವುದಿಲ್ಲ. ಅದು ಅವರ ಸ್ವಾತಂತ್ರ್ಯ' ಎಂದು ವ್ಯಂಗ್ಯವಾಡಿದರು.

ತುಂಡು ಮಾಡುವವರ ಜತೆ ನಿಲ್ಲುವುದು ಅವರ ಹಕ್ಕು
'ಅವರು ತಮ್ಮ ರಾಜಕೀಯ ಒಲವನ್ನು 2011ರಲ್ಲಿಯೇ ತೋರಿಸಿದ್ದರು. ಆಗ ಅವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಭಾರತವನ್ನು ತುಂಡು ತುಂಡು ಮಾಡುತ್ತೇವೆ ಎಂದಿದ್ದ ಜನರೊಂದಿಗೆ ನಿಲ್ಲುವುದು ಅವರ ಹಕ್ಕು. ಇದರಿಂದ ಜನರು ಅಚ್ಚರಿಯಾಗಿದ್ದರೆ ಅವರಿಗೆ ಅದು ತಿಳಿದಿಲ್ಲ ಎಂದೇ ಅರ್ಥ. ಅವರನ್ನು ಮೆಚ್ಚಿಕೊಂಡಿದ್ದ ಅನೇಕರು ಈಗ ಆಕೆಯ ನೈಜ ನಿಲುವನ್ನು ತಿಳಿದುಕೊಂಡಿದ್ದಾರೆ' ಎಂದರು.
|
ತನಿಖೆ ನಡೆಯುತ್ತಿದೆ, ಪೊಲೀಸರೇ ತಿಳಿಸುತ್ತಾರೆ
'ಜೆಎನ್ಯು ಹಿಂಸಾಚಾರದ ಕುರಿತು ತನಿಖೆ ನಡೆಯುತ್ತಿದೆ. ಪೊಲೀಸರು ಸತ್ಯವನ್ನು ಹೊರಗೆ ತೆಗೆದು ನ್ಯಾಯಾಲಯದ ಮುಂದೆ ಇರಿಸುವವರೆಗೂ ಅಥವಾ ಈ ವಾಸ್ತವಗಳು ಸಾರ್ವಜನಿಕವಾಗಿ ಬಹಿರಂಗಪಡಿಸಲು ಪೊಲೀಸರು ಬಯಸುವವರೆಗೂ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ನಾನು ಅದರ ಕುರಿತು ಹೇಳಿಕೆ ನೀಡಲು ಸಾಧ್ಯವಿಲ್ಲ' ಎಂದು ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಲಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಅವಮಾನಿಸುವ ಹಕ್ಕನ್ನು ಸಂಭ್ರಮಿಸುತ್ತಾರೆ
'ಈ ಪ್ರಕರಣದ ವಿವರಗಳ ಕುರಿತು ಮಾತನಾಡುವುದು ನನಗೆ ಸೂಕ್ತ ಎನಿಸುವುದಿಲ್ಲ. ಕೆಲವು ಜನರಿಗೆ ಸಾಕಷ್ಟು ಮಾಹಿತಿ ಸಿಕ್ಕಿರುತ್ತದೆ. ಅವರು ಅಲ್ಲಿಗೆ ಹೋಗುವ ತಮ್ಮ ಆಯ್ಕೆಯನ್ನು ಆಯ್ದುಕೊಳ್ಳುತ್ತಾರೆ ಮತ್ತು ಉಗ್ರನನ್ನು ಬೆಂಬಲಿಸಿದವರ ಜತೆ ನಿಲ್ಲುತ್ತಾರೆ. ಏಕೆಂದರೆ ನಮ್ಮ ಪ್ರಜಾಪ್ರಭುತ್ವವು ಸಂವಿಧಾನ, ರಾಷ್ಟ್ರ ಧ್ವಜ ಮತ್ತು ಸಮವಸ್ತ್ರದಲ್ಲಿನ ಅಧಿಕಾರಿಗಳನ್ನು ಅವಮಾನಿಸುವ ಹಕ್ಕನ್ನು ಸಂಭ್ರಮಿಸಬಹುದು ಎಂದು ಹೇಳುತ್ತದೆ' ಎಂದರು.












Click it and Unblock the Notifications