ಭಾರಿ ಮಳೆ ಸುರಿಸಲಿದೆ 'ನಿವಾರ್' ಚಂಡಮಾರುತ
ನವದೆಹಲಿ, ನವೆಂಬರ್ 23: ದಕ್ಷಿಣ ಭಾರತದ ರಾಜ್ಯಗಳ ಮೇಲೆ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸುರಿಯುವ ಸನ್ನಿವೇಶ ಮುಂದುವರಿಯಲಿದೆ. ಮುಂಗಾರು ಅವಧಿ ಮುಗಿದ ಬಳಿಕವೂ ಸತತ ವಾಯುಭಾರ ಕುಸಿತದಿಂದ ಚಂಡಮಾರುತದ ವಾತಾವರಣ ನಿರ್ಮಾಣವಾಗಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮುಂತಾದೆಡೆ ನಿರಂತರ ಮಳೆಯಾಗುತ್ತಿದೆ. ಈಗ ನಿವಾರ್ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಅನೇಕ ಕಡೆ ಭಾರಿ ಮಳೆ ಸುರಿಸುವ ಸಾಧ್ಯತೆ ಇದೆ.
ನವೆಂಬರ್ 25ರಂದು ಕರೈಕಲ್, ಪುದುಚೆರಿಯಲ್ಲಿ, ನ. 25 ಮತ್ತು 26ರಂದು ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಮತ್ತು ರಾಯಲಸೀಮೆ ಜಿಲ್ಲೆಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆ ಸುರಿಸುವ ಸಂಭವವಿದೆ. ವಿಶಾಖಪಟ್ಟಣಂ ಮತ್ತು ಪೂರ್ವ ಗೋದಾವರಿ ಜಿಲ್ಲೆಯಲ್ಲಿಯೂ ಮಳೆ ಅಬ್ಬರಿಸಲಿದೆ. ಇದರ ಪರಿಣಾಮ ಬೆಂಗಳೂರಿನ ಮೇಲೆಯೂ ಉಂಟಾಗಬಹುದು.
ನ.25ರಿಂದ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ನಿವಾರ್ ಚಂಡಮಾರುತವು ಶ್ರೀಲಂಕಾದ ಉತ್ತರ ಭಾಗ ಮತ್ತು ದಕ್ಷಿಣ ತಮಿಳುನಾಡು ಕರಾವಳಿಯತ್ತ ಪಶ್ಚಿಮದಿಂದ ಚಲಿಸುತ್ತಿದೆ. ಹೀಗಾಗಿ ಈ ಭಾಗಗಳಲ್ಲಿ ನವೆಂಬರ್ 23-26ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ. ನವೆಂಬರ್ 22 ರಿಂದ 25ರವರೆಗೆ ಹಿಂದೂ ಮಹಾಸಾಗರ, ದಕ್ಷಿಣ ಬಂಗಾಳ ಕೊಲ್ಲಿಯ ಕೇಂದ್ರ ಭಾಗಗಳ ಪ್ರದೇಶಗಳಲ್ಲಿ ಮತ್ತು ಬಂಗಾಳ ಕೊಲ್ಲಿಯ ಪಶ್ಚಿಮ ಕೇಂದ್ರ, ಮನ್ನಾರ್ ಕೊಲ್ಲಿ, ತಮಿಳುನಾಡಿನ ಕರಾವಳಿ, ಪುದುಚೆರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಮೀನುಗಾರಿಕೆಯ ಸಾಹಸಕ್ಕೆ ಇಳಿಯದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ. ಮುಂದೆ ಓದಿ.
ನಿವಾರ್ ಚಂಡಮಾರುತ
ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತವು ತಮಿಳುನಾಡಿನ ಚೆನ್ನೈ ಸೇರಿದಂತೆ ಅನೇಕ ಭಾಗಗಳಲ್ಲಿ ವ್ಯಾಪಕ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ತಮಿಳುನಾಡು ಕರಾವಳಿಯತ್ತ ಸಾಗುತ್ತಿರುವ ಈ ಚಂಡಮಾರುತಕ್ಕೆ ನಿವಾರ್ ಎಂದು ಹೆಸರು ನೀಡಲಾಗಿದೆ. ಕರೈಕಲ್ ಮತ್ತು ಮಹಾಬಲಿಪುರಂ ನಡುವೆ ನವೆಂಬರ್ 25ರಂದು ಚಂಡಮಾರುತ ಹಾದುಹೋಗಲಿದ್ದು, ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸುರಿಯುವ ಸಂಭವವಿದೆ.
ಎಲ್ಲೆಲ್ಲಿ ಮಳೆಯಾಗಲಿದೆ?
ನವೆಂಬರ್ 23: ತಂಜಾವೂರ್, ತಿರುವರೂರ್, ನಾಗಪಟ್ಟಿಣಂ, ಕಾರೈಕಲ್ ಗಳಲ್ಲಿ ಸೋಮವಾರ ಮಳೆಯಾಗುವ ಸಾಧ್ಯತೆ ಇದೆ.
ನವೆಂಬರ್ 24: ಮಂಗಳವಾರದಂದು ಪಡುಕ್ಕೊಟ್ಟೈ, ತಂಜಾವೂರ್, ತಿರುವರೂರ್, ಕಾರೈಕಲ್, ನಾಗಪಟ್ಟಿಣಂ, ಕುಡ್ಡಲೋರ್, ಅರಿಯಲುರ್ ಮತ್ತು ಪೆರಂಬುಲು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ರಾಮನಾಥಪುರಂ, ಶಿವಗಂಗೈ, ತಿರುಚಿರಾಪಳ್ಳಿ, ಕಲ್ಲಾಕುರಿಚಿ, ವಿಲ್ಲಾಪುರಂ, ಪುದುಚೆರಿ, ಚೆನ್ನೈ, ಕಾಂಚೀಪುರಂ, ತಿರುವಲ್ಲೂರ್, ರಾನಿಪೇಟ್, ತಿರುವಣ್ಣಮಲೈ, ತಿರುಪಟ್ಟೂರ್ ಮತ್ತು ವೆಳ್ಳೂರು ಜಿಲ್ಲೆಗಳಲ್ಲಿ ಭಾರಿಯಿಂದ ತೀವ್ರ ಮಳೆಯಾಗುವ ಸಂಭವವಿದೆ.
ಕರ್ನಾಟಕ ಸೇರಿ 6 ರಾಜ್ಯಗಳಿಗೆ 4381 ಕೋಟಿ ಹೆಚ್ಚುವರಿ ನೆರವು ಘೋಷಿಸಿದ ಕೇಂದ್ರ
ಭಾರಿ ಮಳೆ ಸಂಭವ
ನವೆಂಬರ್ 25: ಡೆಲ್ಟಾ ಜಿಲ್ಲೆಗಳು, ಕುಡ್ಡಲೋರ್, ಕಲ್ಲಕುರುಚಿ, ಪುದುಚೆರಿ, ವಿಲ್ಲುಪುರಂ, ತಿರುವಣ್ಣಮಲೈ, ಚೆಂಗಲ್ಪಟ್ಟು, ಅರಿಯಲುರ್, ಪೆರಂಬಲೂರ್ ಮತ್ತು ಕಾರೈಕಲ್ನಲ್ಲಿ ಬುಧವಾರ ಜೋರಾಗಿ ಮಳೆಯಾಗಲಿದೆ. ತಿರುಚಿ, ನಮಕ್ಕಲ್, ಈರೋಡ್, ಕರೂರ್, ಧರ್ಮಾಪುರಿ, ಸೇಲಮ್, ಕೃಷ್ಣಗಿರಿ, ಶಿವಗಂಗೈ, ತಿರುಪತ್ತೂರ್, ರಾಣಿಪೇಟ್, ವೆಲ್ಲೂರ್, ಕಾಂಚೀಪುರಂ, ತಿರುವಲ್ಲೂರ್, ಚೆನ್ನೈ ಮುಂತಾದಡೆ ಭಾರಿ ಮಳೆಯಾಗಲಿದೆ.
ನವೆಂಬರ್ 26: ಧರ್ಮಾಪುರಿ, ಕೃಷ್ಣಗಿರಿ, ತಿರುಪತ್ತೂರ್ ಮತ್ತು ವೆಲ್ಲೂರ್ಗಳಲ್ಲಿ ಗುರುವಾರ ಮಳೆ ಅಬ್ಬರಿಸಲಿದೆ.
ಮತ್ತೊಂದು ಚಂಡಮಾರುತ 'ಗಟಿ'
ಇನ್ನೊಂದೆಡೆ ಗಟಿ ಚಂಡಮಾರುತ ಕೂಡ ಅರಬ್ಬಿ ಸಮುದ್ರದಲ್ಲಿ ಎರಡನೆಯ ಬಾರಿ ರೂಪುಗೊಳ್ಳುತ್ತಿದೆ. ಆದರೆ ಇದರಿಂದ ಭಾರತದ ಮೇಲೆ ಅಷ್ಟಾಗಿ ಪರಿಣಾಮ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ. ಅದು ಸೊಮಾಲಿಯಾದತ್ತ ಸಾಗುತ್ತಿದೆ. ನಿವಾರ್ ಚಂಡಮಾರುತ ಕರ್ನಾಟಕದ ಮೇಲೆ ತಮಿಳುನಾಡಿನಷ್ಟು ಪರಿಣಾಮ ಬೀರುವ ಸಾಧ್ಯತೆ ಕಡಿಮೆ.
ರಾಜ್ಯದಲ್ಲಿ ಮಳೆ
ನವೆಂಬರ್ 25ರಂದು ಬೆಂಗಳೂರಿನಲ್ಲಿ ತೀವ್ರ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ. ರಾತ್ರಿ ಕೂಡ ಮಳೆ ಸುರಿಯಬಹುದು. ಇನ್ನು ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೂಡ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.
Recommended Video