ಫೇಸ್ ಬುಕ್ ಫೋಟೋ ಜಗಳ: ಯುವ ಟೆಕ್ಕಿ ನೇಣಿಗೆ ಶರಣು
29 ಸಾಫ್ಟ್ವೇರ್ ಇಂಜಿನಿಯರ್, ಜಾರ್ಖಂಡ್ ಮೂಲದ ಚಂದನ್ ಕುಮಾರ್ ಸಿಂಗ್ ಅಳ್ವಾರ್ ಪೇಟೆಯಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದರು. ಚಂದನ್ ಕುಮಾರ್ 3 ತಿಂಗಳ ಹಿಂದೆ ತನ್ನ ಮನೆಯವರನ್ನು ಧಿಕ್ಕರಿಸಿ, ಸಹೋದ್ಯೋಗಿ ಟೆಕ್ಕಿ ಸಂಧ್ಯಾರನ್ನು ಮದುವೆಯಾಗಿದ್ದರು.
ಸಂಧ್ಯಾ ಬೇರೆ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಟೆಕ್ಕಿ ಚಂದನ್ ಮನೆಯವರು ತಮ್ಮ ಪುತ್ರನ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಮಗನ ಮದುವೆಯನ್ನು ಗುಟ್ಟಾಗಿಟ್ಟ ಚಂದನ್ ಮನೆಯವರು ಮಗ ಆಸ್ಟ್ರೇಲಿಯಾದಲ್ಲಿ ಸೆಟ್ಲ್ ಆಗಿರುವುದಾಗಿ ತಮ್ಮ ಸಂಬಂಧಿಕರಿಗೆ ತಿಳಿಸಿದ್ದರು.
ಈ ಮಧ್ಯೆ, ಚಂದನ್ ಜತೆಗಿನ ತಮ್ಮ ಮದುವೆಯ ಫೋಟೋಗಳನ್ನು ಸಂಧ್ಯಾ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಗ ಚಂದನ್ ಸಂಬಂಧಿಕರಿಗೆ ವಿಷಯ ತಿಳಿದುಬಂದಿದೆ. ಇದನ್ನು ಗಮನಿಸಿ ಚಂದನ್ ಹೆತ್ತವರು ತಕ್ಷಣ ಫೋಟೋಗಳನ್ನು ಫೇಸ್ ಬುಕ್ ನಿಂದ ತೆಗೆದುಹಾಕುವಂತೆ ಮಗನಿಗೆ ಸೂಚಿಸಿದ್ದಾರೆ,
ಅದನ್ನೇ ಚಂದನ್, ಪತ್ನಿ ಸಂಧ್ಯಾಗೂ ತಿಳಿಸಿದ್ದಾರೆ. ಆ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿಯೂ ನಡೆದಿದೆ. ಪತ್ನಿ ಸಂಧ್ಯಾ ಗಂಡನ ಮಾತನ್ನು ಕೇಳಿಲ್ಲ. ಇದರಿಂದ ಅನ್ಯ ಮಾರ್ಗ ಕಾಣದೇ ಹೋದ ಚಂದನ್ ಶನಿವಾರ ರಾತ್ರಿ ನೇಣಿಗೆ ಶರಣಾಗಿದ್ದಾನೆ. ಭಾನುವಾರ ಬೆಳಗ್ಗೆ 10 ಗಂಟೆಗೆ ಎದ್ದು ನೋಡಿದ ಸಂಧ್ಯಾಗೆ ಗಂಡ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.
ಲ್ಯಾಪ್ ಟಾಪ್ ನಲ್ಲಿ ಮರಣ ಪತ್ರ ಬರೆದಿಟ್ಟಿರುವ ಚಂದನ್, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿಕೊಂಡಿದ್ದಾರೆ.