ಚೆನ್ನೈನಲ್ಲಿ ಹವಾಮಾನ ವೈಪರೀತ್ಯದಿಂದ 8 ವಿಮಾನಗಳ ಸಂಚಾರ ರದ್ದು
ಚೆನ್ನೈ, ನವೆಂಬರ್ 10: ತಮಿಳುನಾಡಿನಲ್ಲಿ ಮಳೆರಾಯದ ರೌದ್ರನರ್ತನ ಮುಂದುವರಿದಿದೆ. ರಾಜಧಾನಿ ಚೆನ್ನೈನಲ್ಲಿ ಬುಧವಾರ ಹವಾಮಾನ ವೈಪರಿತ್ಯದಿಂದಾಗಿ ಎಂಟು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸುವ 4 ಹಾಗೂ ಚೆನ್ನೈನಿಂದ ನಿರ್ಗಮಿಸುವ ನಾಲ್ಕು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಬುಧವಾರ ಸಂಜೆ ವೇಳೆಗೆ ಹವಾಮಾನದಲ್ಲಿ ವೈಪರೀತ್ಯ ಮತ್ತು ವ್ಯತ್ಯಾಸವನ್ನು ಗಮನದಲ್ಲಿ ಇಟ್ಟುಕೊಂಡು ಈ ಕ್ರಮ ತೆಗದುಕೊಳ್ಳಲಾಗಿದೆ. ಚೆನ್ನೈ ವಿಮಾನ ನಿಲ್ದಾಣದಿಂದ ಬುಧವಾರ ಸಂಜೆ 4.10ರ ಮಧುರೈ, ರಾತ್ರಿ 7.55ರ ಮುಂಬೈ, ರಾತ್ರಿ 7.55ರ ತಿರುಚಿನಾಪಲ್ಲಿ ಹಾಗೂ ರಾತ್ರಿ 9.35ರ ಶಾರ್ಜಾಹ್ ಗೆ ಪ್ರಯಾಣಿಸಬೇಕಾದ ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಇದರ ಜೊತೆಗೆ ಬುಧವಾರ ಚೆನ್ನೈಗೆ ಆಗಮಿಸಬೇಕಾದ ನಾಲ್ಕು ಇಂಡಿಗೋ ವಿಮಾನಗಳನ್ನು ಸಹ ರದ್ದುಗೊಳಿಸಲಾಗಿದೆ. ರಾತ್ರಿ 7.30ಕ್ಕೆ ಆಗಮಿಸಬೇಕಿದ್ದ ಮಧುರೈ ವಿಮಾನ, ರಾತ್ರಿ 10.30ರ ತಿರುಚಿನಾಪಲ್ಲಿ, ನವೆಂಬರ್ 11ರ ಮಧ್ಯರಾತ್ರಿ 1 ಗಂಟೆಗೆ ಮುಂಬೈನಿಂದ ಚೆನ್ನೈಗೆ ಆಗಮಿಸಬೇಕಿದ್ದ ಇಂಡಿಗೋ ವಿಮಾನ ಹಾಗೂ ಶಾರ್ಜಾಹ್ ನಿಂದ ಆಗಮಿಸಬೇಕಾಗಿದ್ದ ಏರ್ ಅರೇಬಿಯಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ರಾತ್ರಿ ವೇಳೆ ಬಿರುಗಾಳಿ ಬೀಸುವ ಮುನ್ಸೂಚನೆ:
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ. ವರುಣನ ಅಬ್ಬರದ ನಡುವೆ ಬುಧವಾರ ರಾತ್ರಿ ವೇಳೆಯಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಇರುವ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಣ್ಣ ವಿಮಾನಗಳನ್ನು ಬಳಸಿ ನಡೆಸಲಾಗುತ್ತಿರುವ ದೇಶೀಯ ವಿಮಾನಗಳ ಸಂಚಾರವನ್ನು ಸಹಿತ ರದ್ದುಗೊಳಿಸಲಾಗಿದೆ.
ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಯು ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ವೇಗವಾಗಿ ಬೀರುವ ಗಾಳಿಯ ನಡುವೆ ಸಣ್ಣ ವಿಮಾನಗಳನ್ನು ಲ್ಯಾಂಡ್ ಮಾಡುವುದು ದೊಡ್ಡ ಸವಾಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವ ಬಗ್ಗೆ ಎಎನ್ಐ ವರದಿ ಮಾಡಿದೆ.
3.1 ಕಿಮೀ ಎತ್ತರದವರೆಗೆ ಬೀಸುವ ಗಾಳಿ:
ಉತ್ತರ ತಮಿಳುನಾಡು ಮತ್ತು ಪಕ್ಕದ ಕರಾವಳಿ ಪ್ರದೇಶಗಳಲ್ಲಿ 3.1 ಕಿಮೀ ಎತ್ತರದವರೆಗೆ ಬೀಸುವ ಗಾಳಿಯು ಮಳೆಯ ಚಟುವಟಿಕೆಯನ್ನು ಪ್ರಚೋದಿಸುತ್ತಿದೆ. ಹೀಗಾಗಿ ಮುಂದಿನ ಎರಡು ದಿನಗಳ ಕಾಲ ತಮಿಳುನಾಡಿನಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ತಮಿಳುನಾಡಿನ ನಿರ್ದಿಷ್ಟ ಪ್ರದೇಶಗಳು ಮತ್ತು ನೆರೆಯ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಮತ್ತು ಕಾರೈಕಲ್ಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು ತಮಿಳುನಾಡಿನಲ್ಲಿ 20:30 ಗಂಟೆಗಳ ಅವಧಿಯಲ್ಲಿ 20 cm ಮಳೆಯಾಗಿದ್ದು ನಾಗಪಟ್ಟಣಂನಲ್ಲಿ 15 ಸೆಂ.ಮೀ ಗಿಂತ ಹೆಚ್ಚು ಮಳೆಯಾಗಿದೆ ಎಂದು IMD ವರದಿ ಮಾಡಿದೆ.
ಎರಡು ದಿನ ಧಾರಾಕಾರ ಮಳೆ:
ಚೆನ್ನೈನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದಲ್ಲದೇ ತಮಿಳುನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಚೆನ್ನೈ ಮತ್ತು ಇತರ ಎಂಟು ಜಿಲ್ಲೆಗಳಲ್ಲಿ ನವೆಂಬರ್ 10 ಮತ್ತು 11ರಂದು ಸರ್ಕಾರ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಲಾಗಿದೆ. ಈವರೆಗೆ ಮಳೆ ಸಂಬಂಧಿತ ಘಟನೆಗಳಿಂದ ಐದು ಮಂದಿ ಪ್ರಾಣ ಬಿಟ್ಟಿದ್ದು, 270ಕ್ಕೂ ಹೆಚ್ಚು ಗುಡಿಸಲು ಮತ್ತು 70ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಯಾವ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ:
ಹವಾಮಾನ ಇಲಾಖೆಯ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನವೆಂಬರ್ 10 ಮತ್ತು 11 ರಂದು ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್ಪೇಟ್, ಕಡಲೂರು, ನಾಗಪಟ್ಟಣಂ, ತಂಜಾವೂರು, ತಿರುವರೂರು ಮತ್ತು ಮೈಲಾದುತುರೈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ












Click it and Unblock the Notifications