ಬಾಂಬ್ ಸ್ಫೋಟ : ಚೆನ್ನೈ ರೈಲು ನಿಲ್ದಾಣದ ಚಿತ್ರಗಳು
ಚೆನ್ನೈ, ಮೇ.1 : ಲೋಕಸಭೆ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆ ಚೆನ್ನೈನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಚೆನ್ನೈನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಅವಳಿ ಸ್ಫೋಟದಲ್ಲಿ ಓರ್ವ ಯುವತಿ ಸಾವನ್ನಪ್ಪಿದ್ದು, ಏಳು ಜನರು ಗಾಯಗೊಂಡಿದ್ದಾರೆ.
ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಗುರುವಾರ ಬೆಳಗ್ಗೆ 7.15ಕ್ಕೆ ಬೆಂಗಳೂರು-ಗುವಾಹಟಿ ಎಕ್ಸ್ಪ್ರೆಸ್ ರೈಲು ಆಗಮಿಸಿದ ತಕ್ಷಣ ಸ್ಫೋಟ ಸಂಭವಿಸಿದೆ. 12509 ಸಂಖ್ಯೆಯ ರೈಲಿನ ಎಸ್ 4 ಮತ್ತು ಎಸ್ 5 ಬೋಗಿಯ ಸೀಟ್ ನಂಬರ್ 70ರ ಅಡಿ ಇಡಲಾಗಿದ್ದ ಬಾಂಬ್ ಗಳು ಸ್ಫೋಟಗೊಂಡಿವೆ. [ಚೆನ್ನೈನಲ್ಲಿ ಬಾಂಬ್ ಸ್ಫೋಟ]
ಸ್ಫೋಟದ ತೀವ್ರತೆಯಿಂದಾಗಿ ಆಂಧ್ರ ಪ್ರದೇಶದ ಗುಂಟೂರು ನಿವಾಸಿ ಸ್ವಾತಿ (22) ಮೃತಪಟ್ಟಿದ್ದು, ಸುಮಾರು 7 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ರೈಲಿನಲ್ಲಿಯೇ ಪ್ರಯಾಣಿಸುತ್ತಿದ್ದ ಶ್ರೀಲಂಕಾ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. [ಚೆನ್ನೈ: ಬೆಂಗಳೂರಿನ ಪ್ರಯಾಣಿಕ ಹರ್ಷ ಪ್ರತಿಕ್ರಿಯೆ]
ಚೆನ್ನೈ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ
ಗುರುವಾರ ಮುಂಜಾನೆ ಚೆನ್ನೈನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಏಳು ಜನರು ಗಾಯಗೊಂಡಿದ್ದಾರೆ.
ರೈಲಿನಲ್ಲಿತ್ತು ಬಾಂಬ್
ಬೆಂಗಳೂರು-ಗುವಾಹಟಿ ಎಕ್ಸ್ಪ್ರೆಸ್ ರೈಲು ಸೆಂಟ್ರಲ್ ನಿಲ್ದಾಣದ ಫ್ಲಾರ್ಮ್ ನಂ 9ಕ್ಕೆ ರೈಲು ಆಗಮಿಸಿದ ತಕ್ಷಣ ಬಾಂಬ್ ಸ್ಫೋಟಗೊಂಡಿದೆ. 12509 ಸಂಖ್ಯೆಯ ರೈಲಿನ ಎಸ್ 4 ಮತ್ತು ಎಸ್ 5 ಬೋಗಿಯ ಸೀಟ್ ನಂಬರ್ 70ರ ಅಡಿ ಬಾಂಬ್ ಗಳನ್ನು ಇಡಲಾಗಿತ್ತು.
ಆಂಧ್ರಪ್ರದೇಶ ಮೂಲದ ಯುವತಿ ಸಾವು
ಬಾಂಬ್ ಸ್ಫೋಟದ ತೀವ್ರತೆಯಿಂದಾಗಿ ಆಂಧ್ರ ಪ್ರದೇಶದ ಗುಂಟೂರು ನಿವಾಸಿ ಸ್ವಾತಿ (22) ಮೃತಪಟ್ಟಿದ್ದು, ಸುಮಾರು 7 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಹಾಯವಾಣಿ ಆರಂಭ
ಬಾಂಬ್ ಸ್ಫೋಟ ಸಂಭವಿಸಿದ ತಕ್ಷಣ ಪ್ರಯಾಣಿಕರ ಬಗ್ಗೆ ಮಾಹಿತಿ ನೀಡಲು ಸಹಾಯವಾಣಿಯನ್ನು ಆರಂಭಿಸಲಾಗಿದೆ. ಚೆನ್ನೈ - 044-25357398, ಬೆಂಗಳೂರು : 08022356409, 08022156553 ನಂಬರ್ ಅನ್ನು ಸಂಪರ್ಕಿಸಬಹುದಾಗಿದೆ.
ಪರಿಹಾರ ಘೋಷಣೆ
ಚೆನ್ನೈ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಯುವತಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ತೀವ್ರವಾಗಿ ಗಾಯಗೊಂಡವರಿಗೆ 25,000 ಮತ್ತು ಸಣ್ಣ ಪುಟ್ಟ ಗಾಯಗಳಾಗಿರುವವರಿಗೆ ರು.5,000 ರೂ ಪರಿಹಾರ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.
ಪ್ರತಿಕಾರ ಕಾರಣವೇ?
ಬೆಂಗಳೂರಿನ ವಿಧಾನಸೌಧ ಮತ್ತು ದೇಶದ ಇತರ ನಗರಗಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಐಎಸ್ಐ ಉಗ್ರ ಜಾಹೀರ್ ಹುಸೇನ್ ನನ್ನು ಚೆನ್ನೈ ಪೊಲೀಸರು ಬುಧವಾರ ಬಂಧಿಸಿದ್ದರು. ಶ್ರೀಲಂಕಾ ಮೂಲದವನಾದ ಈತ ಹಲವಾರು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ. ಈ ಬಂಧನಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಬಾಂಸ್ ಸ್ಫೋಟ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ರೈಲ್ಲಿನಲ್ಲಿದ್ದ ಶಂಕಿತ ವ್ಯಕ್ತಿ
ಚೆನ್ನೈ ರೈಲು ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ರೈಲಿನಲ್ಲಿಯೇ ಪ್ರಯಾಣಿಸುತ್ತಿದ್ದ ಶ್ರೀಲಂಕಾ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.