ಲೋಕಸಭೆ ಚುನಾವಣೆ: ತಮಿಳುನಾಡಿನಲ್ಲಿ ಬಿಜೆಪಿಗೆ ಐದು ಕ್ಷೇತ್ರ ಬಿಟ್ಟುಕೊಟ್ಟ ಎಐಎಡಿಎಂಕೆ
ಚೆನ್ನೈ, ಫೆಬ್ರವರಿ 19: ನಿರೀಕ್ಷೆಯಂತೆಯೇ ತಮಿಳುನಾಡಿನಲ್ಲಿ ಮುಂಬರುವ ಲೋಕಸಭೆ ಚುನಾವಣೆಗಾಗಿ ಎಐಎಡಿಎಂಕೆಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ.
ಆದರೆ, ತಮಿಳುನಾಡಿನ 39 ಮತ್ತು ಪುದುಚೆರಿಯ ಒಂದು ಕ್ಷೇತ್ರಗಳ ಪೈಕಿ ಬಿಜೆಪಿಗೆ ಕೇವಲ ಐದು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ದೊರೆತಿದೆ. ಉಳಿದ ಕ್ಷೇತ್ರಗಳಲ್ಲಿ ಅದು ಎಐಎಡಿಎಂಕೆ ಮತ್ತು ಇತರೆ ಮಿತ್ರಪಕ್ಷಗಳೊಂದಿಗೆ ಹಂಚಿಕೊಳ್ಳುವ ರಾಜಿಗೆ ಇಳಿಯುವುದು ಅನಿವಾರ್ಯವಾಗಿದೆ.
ಚೆನ್ನೈನಲ್ಲಿ ಮಂಗಳವಾರ ತಮಿಳುನಾಡು ಬಿಜೆಪಿ ಉಸ್ತುವಾರಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಎಐಎಡಿಎಂಕೆ ಮುಖಂಡ, ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಮೈತ್ರಿಯ ವಿಚಾರವನ್ನು ಪ್ರಕಟಿಸಿದರು.

ತಮಿಳುನಾಡಿನಲ್ಲಿ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಅವರ ನಾಯಕತ್ವದಲ್ಲಿ ಚುನಾವಣೆಗೆ ಸ್ಪರ್ಧಿಸಲು ನಾವು ಒಪ್ಪಿಕೊಂಡಿದ್ದೇವೆ. ಲೋಕಸಭೆ ಚುನಾವಣೆ ಮಾತ್ರವಲ್ಲದೆ, 21 ವಿಧಾನಸಭೆ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿಯೂ ಎಐಎಡಿಎಂಕೆಗೆ ಬೆಂಬಲ ನೀಡಲಿದ್ದೇವೆ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಮಂಗಳವಾರ ಬೆಳಿಗ್ಗೆಯಷ್ಟೇ ತಮಿಳುನಾಡಿನ ಮತ್ತೊಂದು ಪ್ರಾದೇಶಿಕ ಪಕ್ಷ ಪಿಎಂಕೆ ಜೊತೆ ಎಐಎಡಿಎಂಕೆ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿತ್ತು. ಏಳು ಲೋಕಸಭೆ ಹಾಗೂ ಒಂದು ರಾಜ್ಯಸಭೆ ಕ್ಷೇತ್ರಗಳಲ್ಲಿ ಬೆಂಬಲ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ.
ವಿರೋಧಪಕ್ಷಗಳು ಸೇರಿ ಮಹಾಘಟಬಂಧನ್ ರಚಿಸಿರುವುದರಿಂದ ಬಿಜೆಪಿ ಅದನ್ನು ಎದುರಿಸಲು ವಿವಿಧ ರಾಜ್ಯಗಳಲ್ಲಿ ತನ್ನ ಪರ ಮೃದು ಧೋರಣೆ ಹೊಂದಿರುವ ಪ್ರಮುಖ ಪ್ರಾದೇಶಿಕ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ಗುರಿ ಹೊಂದಿದೆ.
ರಾಜ್ಯದಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಯು ಪ್ರಬಲವಾಗುವ ಸೂಚನೆ ಕಂಡುಬಂದಿರುವುದರಿಂದ ಅದನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳಿಗೆ ಮೈತ್ರಿ ಅಗತ್ಯವಾಗಿದೆ.












Click it and Unblock the Notifications