ಶಿವನ ದೇಗುಲ ನವೀಕರಣದ ವೇಳೆ ಪುರಾತನ ಕಾಲದ ಚಿನ್ನ ಪತ್ತೆ
ಚೆನ್ನೈ, ಡಿಸೆಂಬರ್ 14: ಐನೂರು ವರ್ಷಗಳ ಹಿಂದಿನ ಪುರಾತನ ದೇವಸ್ಥಾನವನ್ನು ನವೀಕರಿಸುವ ಸಂದರ್ಭ ಪುರಾತನ ಕಾಲದ ಚಿನ್ನ ಪತ್ತೆಯಾಗಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ಸಮೀಪ ನಡೆದಿದೆ.
ಉತಿರಾಮೆರೂರಿನ ಸಮೀಪದ ಕುಳಂಬೇಶ್ವರ ದೇಗುಲ ನವೀಕರಣ ಕಾರ್ಯವನ್ನು ಸ್ಥಳೀಯರೇ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಪುರಾತನ ಕಾಲದ ಚಿನ್ನ ದೊರೆತಿರುವುದಾಗಿ ತಿಳಿದುಬಂದಿದೆ. ಗರ್ಭಗುಡಿ ಸಂಪರ್ಕಿಸುವ ಮೆಟ್ಟಿಲಿನ ಕೆಳಗೆ 561 ಗ್ರಾಂ ಚಿನ್ನ ಪತ್ತೆಯಾಗಿದೆ.
ಸಿಬಿಐ ವಶದಲ್ಲಿದ್ದ 45 ಕೋಟಿ ಮೌಲ್ಯದ 103 ಕೆ.ಜಿ. ತೂಕದ ಚಿನ್ನ ನಾಪತ್ತೆ!
ಕಾಂಚೀಪುರಂನಿಂದ ಸುಮಾರು 40 ಕಿ.ಮೀ ದೂರದಲ್ಲಿ, ಚೆನ್ನೈನಿಂದ 90 ಕಿ.ಮೀ. ಅಂತರದಲ್ಲಿರುವ ಉತಿರಾಮೆರೂರು ದೇಗುಲಗಳ ನಗರಿ ಎಂದೇ ಕರೆಸಿಕೊಂಡಿದೆ.
ಚುನಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ಶಾಸನಗಳು ಇಲ್ಲಿ ದೊರೆತಿದ್ದು, ಸಹಸ್ರಾರು ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ವ್ಯವಸ್ಥೆ ಇದ್ದ ಸಾಕ್ಷ್ಯಗಳು ಇಲ್ಲಿ ದೊರೆತಿವೆ. ಇದೀಗ ಚಿನ್ನ ದೊರೆತಿರುವುದು ಕುತೂಹಲವನ್ನು ಹುಟ್ಟಿಹಾಕಿದೆ. ಚಿನ್ನ ದೊರೆತ ವಿಷಯ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಧಾವಿಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.
ಸರ್ಕಾರಕ್ಕೆ ಚಿನ್ನ ಒಪ್ಪಿಸಲು ನಿರಾಕರಿಸಿರುವ ಸ್ಥಳೀಯರು ಹಾಗೂ ಭಕ್ತರು, ದೇಗುಲ ನವೀಕರಣದ ನಂತರ ಚಿನ್ನ ಸಿಕ್ಕಿದ ಜಾಗದಲ್ಲಿ ಮತ್ತೆ ಚಿನ್ನವನ್ನು ಇಡುವುದಾಗಿ ತಿಳಿಸಿದ್ದಾರೆ. ಆದರೆ ಇದಕ್ಕೆ ಅಧಿಕಾರಿಗಳು ಒಪ್ಪದೇ ವಿರೋಧ ಉಂಟಾಗಿದೆ. ಮಾತುಕತೆ ವಿಫಲವಾದ ನಂತರ ಜನರು ಪ್ರತಿಭಟನೆ ಮುಂದುವರೆಸಿದ್ದು, ಭದ್ರತೆಗಾಗಿ ದೇವಸ್ಥಾನದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಆದರೆ ಜನರು ಪ್ರತಿಭಟನೆ ನಡೆಸುತ್ತಿರುವುದರಿಂದ ಇನ್ನೂ ಸಂಪೂರ್ಣ ಮಾಹಿತಿ ಕಲೆ ಹಾಕಲು ಸಾಧ್ಯವಾಗಿಲ್ಲ. ಸಂಬಂಧಪಟ್ಟ ಇಲಾಖೆಗೆ ಪ್ರಕರಣ ವರ್ಗಾಯಿಸಿ, ನಂತರ ವಶಪಡಿಸಿಕೊಂಡಿರುವ ಚಿನ್ನದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಈ ದೇಗುಲ 16ನೇ ಶತಮಾನದ್ದಾಗಿದ್ದು, ಚೋಳರು ಆಳಿದ್ದ ಕಾಲದಲ್ಲಿ ನಿರ್ಮಾಣವಾಗಿತ್ತು ಎನ್ನಲಾಗಿದೆ.