ಚೆನ್ನೈ ಅಂಬ್ಯುಲೆನ್ಸ್ ಚಾಲಕರಿಗೆ ಸೆಲ್ಯೂಟ್ ಎಂದ ಮಿಜೋರಾಂ ಸರ್ಕಾರ!
ಚೆನ್ನೈ, ಏಪ್ರಿಲ್ 29 : ಲಾಕ್ ಡೌನ್ ಸಂದರ್ಭದಲ್ಲಿ ಯಾರಾದರೂ ಮೃತಪಟ್ಟರೆ ಎಷ್ಟು ಕಷ್ಟವಾಗಲಿದೆ? ಎಂಬುದು ಹಲವರಿಗೆ ತಿಳಿದಿದೆ. 84 ಗಂಟೆಗಳ ಕಾಲ ಅಂಬ್ಯುಲೆನ್ಸ್ ಓಡಿಸಿ ಶವವನ್ನು ಕುಟುಂಬದವರಿಗೆ ತಲುಪಿಸಿದ ಚಾಲಕರಿಗೆ ಇಡೀ ಸರ್ಕಾರವೇ ಸೆಲ್ಯೂಟ್ ಹೊಡೆದಿದೆ.
ಮಿಜೋರಾಂ ಮುಖ್ಯಮಂತ್ರಿ ಜೋರಾಮ್ಥಾಂಗಾನಿ ಮಾಡಿರುವ ಟ್ವೀಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಚೆನ್ನೈನಲ್ಲಿ ಮೃತಪಟ್ಟಿದ್ದ ಮಿಜೋರಾಂ ನಿವಾಸಿಯ ಶವವನ್ನು ರಾಜ್ಯಕ್ಕೆ ತಲುಪಿಸಿದ ಅಂಬ್ಯುಲೆನ್ಸ್ ಚಾಲಕರಿಗೆ ಸರ್ಕಾರ ಸನ್ಮಾನ ಮಾಡಿದೆ.
ಅಂಬ್ಯುಲೆನ್ಸ್ ವೆಚ್ಚ ಹೊರತುಪಡಿಸಿ ಮೂವರು ಚಾಲಕರಿಗೆ ತಲಾ 2 ಸಾವಿರ ರೂ. ನಗದು ಬಹುಮಾನ ನೀಡಿರುವ ಸರ್ಕಾರ, ಮಿಜೋರಾಂನ ಸಾಂಪ್ರದಾಯಿಕ ಉಡುಗೆ ನೀಡಿ ಗೌರವಿಸಿದೆ. ಅಂಬ್ಯುಲೆನ್ಸ್ ಬರುತ್ತಿದ್ದಂತೆ ಜನರು ಚಪ್ಪಾಳೆ ತಟ್ಟಿ ಚಾಲಕರನ್ನು ಸ್ವಾಗತಿಸಿದ್ದಾರೆ, ಈ ಮೂಲಕ ಗೌರವ ಸಲ್ಲಿಸಿದ್ದಾರೆ.
28 ವರ್ಷದ ಮಿಜೋರಾಂ ನಿವಾಸಿ ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅನಾರೋಗ್ಯಕ್ಕೆ ತುತ್ತಾದ ಆತ ಏಪ್ರಿಲ್ 23ರಂದು ಮೃತಪಟ್ಟಿದ್ದ. ಚೆನ್ನೈನಲ್ಲಿ ಅಂತ್ಯ ಸಂಸ್ಕಾರ ಮಾಡಲು ಯಾರೂ ಇರಲಿಲ್ಲ. ಲಾಕ್ ಡೌನ್ ಸಮಯವಾದ್ದರಿಂದ ಶವವನ್ನು ಮಿಜೋರಾಂಗೆ ತೆಗೆದುಕೊಂಡು ಹೋಗುವುದು ಸುಲಭವಾಗಿರಲಿಲ್ಲ...

ಶವವನ್ನು ಹೊತ್ತು ಹೊರಟರು
ಚೆನ್ನೈನ ಮೂವರು ಅಂಬ್ಯುಲೆನ್ಸ್ ಚಾಲಕರು ಶವವಿದ್ದ ಪೆಟ್ಟಿಗೆಯನ್ನು ಇಟ್ಟುಕೊಂಡು ಚೆನ್ನೈನಿಂದ ಮಿಜೋರಾಂಗೆ ಪ್ರಯಾಣ ಆರಂಭಿಸಿದರು. ಸುಮಾರು 84 ಗಂಟೆಗಳಲ್ಲಿ 3 ಸಾವಿರ ಕಿ. ಮೀ. ಸಂಚಾರ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಹಾಯ
ಶವದ ಪೆಟ್ಟಿಗೆ ಇದ್ದ ಆಂಬ್ಯಲೆನ್ಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಡೆಸುವಾಗ ಕೋಲ್ಕತ್ತಾ, ಸಿಲಿಗುರಿ, ಗೌಹಾತ ಮುಂತಾದ ಕಡೆಗಳಲ್ಲಿ ಮಿಜೋರಾಂನ ನಿವಾಸಿಗಳು ಚಾಲಕರಿಗೆ ಊಟ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದರು. ಇದರಿಂದಾಗ ಯುವಕನ ಶವ ಯಾವುದೇ ಸಮಸ್ಯೆ ಇಲ್ಲದೇ ಕುಟುಂಬದ ಕೈ ಸೇರಿತು.
|
ಮುಖ್ಯಮಂತ್ರಿಗಳ ಮೆಚ್ಚುಗೆ
ಅಂಬ್ಯುಲೆನ್ಸ್ ಮಿಜೋರಾಂಗೆ ಬರುತ್ತಿದ್ದಂತೆ ಜನರು ಚಪ್ಪಾಳೆ ತಟ್ಟಿ ಚಾಲಕರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಮುಖ್ಯಮಂತ್ರಿ ಜೋರಾಮ್ಥಾಂಗಾನಿ ಹಲವಾರು ಟ್ವೀಟ್ಗಳನ್ನು ಮಾಡಿ ಚಾಲಕರ ಕಾರ್ಯಕ್ಕೆ ಸೆಲ್ಯೂಟ್ ಹೇಳಿದ್ದಾರೆ.

ಸರ್ಕಾರದಿಂದ ಸನ್ಮಾನ
ಲಾಕ್ ಡೌನ್ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮೀಜೋರಾಂ ಸರ್ಕಾರ ಅಂಬ್ಯುಲೆನ್ಸ್ ಚಾಲಕರ ಕಾರ್ಯಕ್ಕೆ ಮೆಚ್ಚಿ ಅವರನ್ನು ಸನ್ಮಾನಿಸಿದೆ. ರಾಜ್ಯದ ಸಾಂಪ್ರದಾಯಿಕ ಉಡುಗೆ ಮತ್ತು ನಗದು ಬಹುಮಾನವನ್ನು ನೀಡಿದೆ.












Click it and Unblock the Notifications