'ಸ್ಟಾಲಿನ್ ಸಾವಿನ ಭವಿಷ್ಯ ಹೇಳಿದ್ದಕ್ಕೆ ಅಳಗಿರಿ ಔಟ್'
ಚೆನ್ನೈ, ಜ.28: ಡಿಎಂಕೆ ಪಕ್ಷ ಮತ್ತು ಎಂ ಕರುಣಾನಿಧಿ ಕುಟುಂಬ ರಾಜಕೀಯದ ಕಥೆ ಮುಂದುವರೆದಿದೆ. ತಮ್ಮ ಕಿರಿ ಮಗನನ್ನು ಉಳಿಸಲು ಹಿರಿ ಮಗ ಎಂಕೆ ಅಳಗಿರಿಯನ್ನು ಪಕ್ಷದಿಂದ ಉಚ್ಚಾಟಿಸಿ ನಾಲ್ಕು ದಿನಗಳ ನಂತರ ಡಿಎಂಕೆ ಮುಖಂಡ ಎಂ ಕರುಣಾನಿಧಿ ಅವರು ಈ ಬಗ್ಗೆ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.
ಒಂದೇ ಸಮನೆ ಡಿಎಂಕೆ ಮತ್ತು ಅಪ್ಪ ಕರುಣಾನಿಧಿಯ ವಿರುದ್ಧ ಕೆಂಪು ಬಾವುಟ ಬೀಸುತ್ತಲೇ ಇದ್ದ ಹಿರಿಯ ಪುತ್ರ ಎಂಕೆ ಅಳಗಿರಿಯನ್ನು ಪಕ್ಷದಿಂದ ಶುಕ್ರವಾರ(ಜ.24) ಉಚ್ಛಾಟಿಸಲಾಗಿತ್ತು. [ವರದಿ ಇಲ್ಲಿ ಓದಿ]
ಈಗ ಕರುಣಾನಿಧಿ -ಅಳಗಿರಿ ಹಾಗೂ ಸ್ಟಾಲಿನ್ ನಡುವಿನ ಭಿನ್ನಮತದ ಬಗ್ಗೆ ಇನ್ನಷ್ಟು ಮಾಹಿತಿ ಹೊರ ಬಿದ್ದಿದೆ. ಪಕ್ಷ ವಿರೋಧಿ ಚಟುವಟಿಕೆಯ ಆರೋಪಗಳ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ತಮ್ಮ ಪುತ್ರ ಎಂ.ಕೆ.ಅಳಗಿರಿಯನ್ನು ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ ಎಂದೇ ಎಲ್ಲೆಡೆ ಬಿಂಬಿತವಾಗಿತ್ತು. ಆದರೆ, ಪಕ್ಷದ ಉನ್ನತ ಮೂಲಗಳ ಪ್ರಕಾರ, ಅಳಗಿರಿ ಮತ್ತು ಅವರ ಬೆಂಬಲಿಗರು ಸ್ಟಾಲಿನ್ ಮೇಲೆ ಕಣ್ಣಿಟ್ಟಿದ್ದರು. ಸ್ಟಾಲಿನ್ ಇನ್ನು ಮೂರು ತಿಂಗಳಲ್ಲಿ ಸಾಯುತ್ತಾನೆ ಎಂದು ಅಳಗಿರಿ ಭವಿಷ್ಯ ನುಡಿದಿದ್ದರು. ಇದೇ ಕಾರಣಕ್ಕೆ ಕರುಣಾನಿಧಿ ಅವರು ಕಠೋರ ಕ್ರಮ ಜರುಗಿಸಿದರು ಎನ್ನಲಾಗಿದೆ.

ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷದಲ್ಲಿ ಎಂಕೆ ಸ್ಟಾಲಿನ್ ಅವರು ಸದ್ಯಕ್ಕೆ ಖಜಾಂಚಿಯಾಗಿದ್ದಾರೆ. ನನ್ನ ಮಗ ಮೂರು ತಿಂಗಳಿನಲ್ಲಿ ಸಾಯುತ್ತಾನೆ ಯಾರಾದರೂ ಹೇಳಿದರೆ ನಾನು ಹೇಗೆ ಸಹಿಸಲಿ. ಯಾವ ತಂದೆಯೂ ಇಂಥ ಮಾತನ್ನು ಕೇಳಿ ಸುಮ್ಮನಿರಲು ಸಾಧ್ಯವಿಲ್ಲ. ಇದು ಪದೇ ಪದೇ ಪುನರಾವರ್ತನೆ ಆಗಿದ್ದರಿಂದ ಪಕ್ಷದ ಮುಖ್ಯಸ್ಥನಾಗಿ ನಾನು ಕ್ರಮ ಜರುಗಿಸಿದೆ ಎಂದು ಕರುಣಾನಿಧಿ ಸುದ್ದಿಗಾರರೊಂದಿಗೆ ತಮ್ಮ ದುಃಖ ತೋಡಿಕೊಂಡಿದ್ದಾರೆ.
89 ವರ್ಷದ ಹಿರಿಯ ರಾಜಕಾರಣಿ ಕರುಣಾನಿಧಿ ಅವರು ಪುತ್ರ ವ್ಯಾಮೋಹ ಹಾಗೂ ಕುಟುಂಬ ರಾಜಕೀಯಕ್ಕೆ ಹೆಸರುವಾಸಿ ಎಂಬುದನ್ನು ಇಲ್ಲಿ ಮರೆಯುವಂತಿಲ್ಲ. ಜ.24ರಂದು ಅಳಗಿರಿ ನನ್ನ ನಿವಾಸಕ್ಕೆ ಬಂದು ಸ್ಟಾಲಿನ್ ವಿರುದ್ಧ ಹರಿಹಾಯ್ದು ಇಲ್ಲಸಲ್ಲದ ದೂರು ನೀಡಿದ ಎಂದು ಕರುಣಾನಿಧಿ ಹೇಳಿಕೊಂಡಿದ್ದಾರೆ.












Click it and Unblock the Notifications