'ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ನಂತರವಷ್ಟೇ ಮೈತ್ರಿ ತೀರ್ಮಾನ'
ಚೆನ್ನೈ, ಅಕ್ಟೋಬರ್ 8: ಚುನಾವಣೆ ಆಯೋಗದಿಂದ ದಿನಾಂಕ ಘೋಷಣೆ ಆದ ಮೇಲೆ ಮೈತ್ರಿ ಬಗ್ಗೆ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆಯಿಂದ ನಿರ್ಧಾರ ಮಾಡಲಾಗುವುದು ಎಂದು ಸೋಮವಾರ ಮುಖ್ಯಮಂತ್ರಿ ಎಡಪ್ಪಡಿ ಕೆ.ಪಳನಿಸ್ವಾಮಿ ನವದೆಹಲಿಯಲ್ಲಿ ಹೇಳಿದ್ದಾರೆ.
ಪ್ರಧಾನಿಗಳನ್ನು ಭೇಟಿಯಾದ ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಿಲ್ಲ. ಆ ನಂತರವಷ್ಟೇ ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ. ಅದು ಕೂಡ ಯಾರ ಜತೆಗೆ ಯಾರು ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬುದನ್ನು ನೋಡಿ, ಆ ಮೇಲೆ ತೀರ್ಮಾನ ಮಾಡಬೇಕಾಗುತ್ತದೆ ಎಂದಿದ್ದಾರೆ.
ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಕಳೆದ ವರ್ಷ ಜುಲೈನಲ್ಲಿ ಪನ್ನೀರ್ ಸೆಲ್ವಂ ಪ್ರಯತ್ನ ಮಾಡಿದ್ದರು ಎಂಬ ಬಗ್ಗೆ ಅವರಿಗೆ ಪ್ರಶ್ನೆ ಮಾಡಲಾಯಿತು. ಈ ಬಗ್ಗೆ ಈಚೆಗೆ ಟಿಟಿವಿ ದಿನಕರನ್ ಆರೋಪ ಮಾಡಿದ್ದರು. ಈತ ಜಯಲಲಿತಾ ಆಪ್ತೆ ಶಶಿಕಲಾರ ಸೋದರ. ಇನ್ನು ಪನ್ನೀರ್ ಸೆಲ್ವಂ ಸದ್ಯಕ್ಕೆ ತಮಿಳುನಾಡಿನ ಉಪ ಮುಖ್ಯಮಂತ್ರಿ.

"ಈ ಆರೋಪದ ಬಗ್ಗೆ ಪನ್ನೀರ್ ಸೆಲ್ವಂ ಈಗಾಗಲೇ ಉತ್ತರ ನೀಡಿದ್ದಾರೆ. ಹೇಳುವುದಕ್ಕೆ ಇನ್ನೇನೂ ಉಳಿದಿಲ್ಲ" ಎಂದು ಪಳನಿಸ್ವಾಮಿ ಹೇಳಿದ್ದಾರೆ. ಇನ್ನು ತಮಿಳುನಾಡಿನ ಸಚಿವರೊಬ್ಬರ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಹಾಗೂ ಅವರಿಂದ ರಾಜೀನಾಮೆ ಪಡೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೆ ಆರೋಪ ಬಂದ ತಕ್ಷಣ ರಾಜೀನಾಮೆ ಪಡೆಯುತ್ತಾ ಹೋದರೆ ದೇಶದಲ್ಲಿ ಯಾರೂ ಅಧಿಕಾರ ನಡೆಸಲು ಆಗುವುದಿಲ್ಲ ಎಂದಿದ್ದಾರೆ.
ಸರಕಾರಕ್ಕೆ ಅಗತ್ಯ ಇರುವ ಆರ್ಥಿಕ ಮೂಲಗಳನ್ನು ಹೊಂದಿಸಲು ಸಾಧ್ಯ ಆಗುವುದಾದರೆ ತೈಲ ಬೆಲೆ ಇಳಿಕೆ ಪ್ರಸ್ತಾವವನ್ನು ಪರಿಗಣಿಸಲಾಗುವುದು ಎಂದು ಅವರು ಹೇಳಿದರು.












Click it and Unblock the Notifications