ಬಿಜೆಪಿ ಸೇರಲಿರುವ ಸಿನಿ ದಿಗ್ಗಜ ಶಿವಾಜಿ ಗಣೇಶನ್ ಪುತ್ರ ರಾಮ್
ಚೆನ್ನೈ, ಫೆಬ್ರವರಿ 10: ತಮಿಳುನಾಡು ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸೆಲೆಬ್ರಿಟಿಗಳನ್ನು ಭಾರತೀಯ ಜನತಾ ಪಕ್ಷ ಸೆಳೆಯುತ್ತಿದೆ. ತಮಿಳು ಚಿತ್ರರಂಗದ ದಿಗ್ಗಜ ಶಿವಾಜಿ ಗಣೇಶನ್ ಅವರ ಪುತ್ರ ರಾಮ್ ಕುಮಾರ್ ಅವರು ಬಿಜೆಪಿ ಸೇರಲಿದ್ದಾರೆ. ಗುರುವಾರದಂದು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದೆ.
ಶಿವಾಜಿ ಗಣೇಶನ್ ಅವರು ದ್ರಾವಿಡ್ ಮುನ್ನೇತ್ರ ಕಳಗಂ(ಡಿಎಂಕೆ) ಬೆಂಬಲಿಗರಾಗಿದ್ದರು. ಎಂ ಕರುಣಾನಿಧಿ ಅವರು ಕೂಡಾ ಚಿತ್ರರಂಗದಿಂದ ರಾಜಕೀಯರಂಗಕ್ಕೆ ಬಂದವರು ಎಂಬುದನ್ನು ಮರೆಯುವಂತಿಲ್ಲ. ನಂತರ ಗಣೇಶನ್ ಅವರು ಕಾಂಗ್ರೆಸ್ ಪರ ನಿಂತಿದ್ದರು. ಇಂದಿರಾ ಗಾಂಧಿ ಆಡಳಿತ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಸ್ಥಳೀಯ ಪಕ್ಷವನ್ನು ಸ್ಥಾಪಿಸಿದ್ದರು ಕೂಡಾ.
ಶಿವಾಜಿ ಅವರ ಪುತ್ರ ಅರುವದೈ ನಾಳ್, ಮೈ ಡಿಯರ್ ಮರ್ಥಾಂಡನ್, ಇಂದ್ರಕುಮಾರ್, ಐ, ಎಲ್ ಕೆಜಿ , ಬೂಮರಾಂಗ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ಅಸಲ್, ಚಂದ್ರಮುಕಿ ಹಾಗೂ ಕಲೈಂಗನ್ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಬಿಜೆಪಿ ಸೇರಿದ್ದಾರೆ. ನಟಿ ಖುಷ್ಬು ಸುಂದರ್ ಅವರು ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮಾಜಿ ಕ್ರಿಕೆಟರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಪಕ್ಷ ಸೇರ್ಪಡೆಗೊಂಡಿದ್ದಾರೆ.
ಡಿಎಂಕೆಯಿಂದ ಉಚ್ಚಾಟನೆ ಮಾಡಲ್ಪಟ್ಟಿರುವ ಎಂಕೆ ಅಳಗಿರಿ (ದಿವಂಗತ ಮಾಜಿ ಸಿಎಂ ಎಂ ಕರುಣಾನಿಧಿ ಪುತ್ರ) ಅವರನ್ನು ಬಿಜೆಪಿ ಸೇರಿಸಿಕೊಳ್ಳುವ ಸಾಧ್ಯತೆ ಬಗ್ಗೆ ಅಧಿಕೃತವಾಗಿ ಇನ್ನೂ ಮಾತುಕತೆಯಾಗಿಲ್ಲ. ಒಂದು ವೇಳೆ ಅಳಗಿರಿ ಬಿಜೆಪಿ ಸೇರಲು ಬಯಸಿದರೆ ಮುಕ್ತವಾಗಿ ಸ್ವಾಗತಿಸಲಾಗುವುದು ಎಂದು ಬಿಜೆಪಿ ಮುಖ್ಯಸ್ಥ ಎಲ್ ಮುರುಗನ್ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ, ಸಣ್ಣ ಪುಟ್ಟ ಪಕ್ಷಗಳದ್ದೇ ಕಾರುಬಾರು. ಆಡಳಿತಾರೂಢ ಎಐಎಡಿಎಂಕೆ ಹಾಗೂ ಡಿಎಂಕೆ ನಡುವೆ ನೇರ ಹಣಾಹಣಿಯಿದೆ. ಕಾಂಗ್ರೆಸ್, ಬಿಜೆಪಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ.












Click it and Unblock the Notifications