ಕೆನಡಾ ಪಾತಕಿಯಿಂದ ಹತ್ಯೆ? ಸಿಧು ಮೂಸೆವಾಲ ಮನೆ ಬಳಿ ಬಿಗಿಭದ್ರತೆ
ಅಮೃತಸರ, ಮೇ 30: ಪಂಜಾಬ್ನ ಮಾನಸ ಜಿಲ್ಲೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾದ 28 ವರ್ಷದ ಖ್ಯಾತ ಗಾಯಕ ಹಾಗು ಕಾಂಗ್ರೆಸ್ ಮುಖಂಡ ಶುಭದೀಪ್ ಸಿಂಗ್ ಸಿಧು ಅವರ ನಿವಾಸದ ಹೊರಗೆ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿದೆ.
ಸಿಧು ಮೂಸೆವಾಲ ಎಂದೇ ಚಿರಪರಿಚಿತವಾಗಿರುವ ಶುಭದೀಪ್ ಸಿಂಗ್ ಸಿಧು ಅವರ ನಿವಾಸಕ್ಕೆ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಅಮರೀಂದರ್ ಸಿಂಗ್, ಮಾಜಿ ಡಿಸಿಎಂ ಸುಖಜಿಂದರ್ ಸಿಂಗ್ ರಾಂಧವ ಅವರು ಭೇಟಿ ನೀಡಿ ಮೃತರ ಕುಟುಂಬದ ಇತರ ಸದಸ್ಯರಿಗೆ ಸಾಂತ್ವನ ಹೇಳಿದರು.
ಇದೇ ವೇಳೆ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ನಿನ್ನೆಯದ್ದು ಪ್ರತೀಕಾರದ ಹತ್ಯೆ ಘಟನೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಗ್ಯಾಂಗ್ ವಾರ್ನ ಭಾಗವಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಕಾಕತಾಳೀಯವಾಗಿ, ಪಂಜಾಬ್ನಲ್ಲಿ ಆಮ್ ಆದ್ಮಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಭಗವಂತ್ ಸಿಂಗ್ ಮಾನ್ ಅವರು ೪೨೪ ಜನರ ಭದ್ರತೆ ವ್ಯವಸ್ಥೆ ಹಿಂಡೆದಿದ್ದರು. ಅದಾಗಿ ಎರಡೇ ದಿನದಲ್ಲಿ ಈ ಭೀಕರ ಹತ್ಯೆಯಾಗಿದೆ. ಪಂಜಾಬ್ನಲ್ಲಿ ವಿಐಪಿ ಸಂಸ್ಕೃತಿಯನ್ನು ಕೊನೆಗಾಣಿಸುವ ಪ್ರಯತ್ನದ ಭಾಗವಾಗಿ ಮಾನ್ ಸರಕಾರ ಈ ಕ್ರಮ ಕೈಗೊಂಡಿತ್ತು.
ಘಟನೆ ಆಗಿದ್ದು ಹೀಗೆ:
ಸಿಧು ಮೂಸೆವಾಲ ತಮ್ಮ ಇಬ್ಬರು ಸ್ನೇಹಿತರ ಜೊತೆ ಪಂಜಾಬ್ನ ಮಾನಸ ಜಿಲ್ಲೆಯ ಜವಾಹರ್ ಕೇ ಎಂಬ ಗ್ರಾಮಕ್ಕೆ ಜೀಪ್ನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಎರಡು ಕಾರುಗಳು ಎದುರಿಗೆ ಬಂದು ಅಡ್ಡಗಟ್ಟಿವೆ. ಬಳಿಕ ಅಪರಿಚಿತ ದುಷ್ಕರ್ಮಿಗಳು ಜೀಪ್ನೊಳಕ್ಕೆ ಗುಂಡಿನ ಸುರಿಮಳೆಗೈದಿದ್ದಾರೆ. ಕಾರನ್ನು ಮೂಸೆವಾಲರೇ ಡ್ರೈವ್ ಮಾಡುತ್ತಿದ್ದರು. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗೆ ಪ್ರಾಣಪಕ್ಷಿ ಹಾರಿತ್ತು.

ಕೆನಡಾದ ಪಾತಕಿಯಿಂದ ಕೃತ್ಯ?
ಈ ಘಟನೆ ಗ್ಯಾಂಗ್ ವಾರ್ ಫಲ ಎಂಬುದು ಪೊಲೀಸರ ಸದ್ಯದ ಅನುಮಾನ. ಕುತೂಹಲವೆಂದರೆ ಕೆನಡಾದ ಪಾತಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯನೆನ್ನಲಾದ ಲಕಿ ಎಂಬಾತ ತಾನು ಈ ಹತ್ಯೆ ನಡೆಸಿರುವುದಾಗಿ ಹೇಳಿಕೊಂಡಿದ್ದಾನೆ. ಇದು ಕಳೆದ ವರ್ಷ ಸಂಭವಿಸಿದ ವಿಕಿ ಮುದ್ದುಖೆರಾ ಎಂಬುವರ ಹತ್ಯೆಗೆ ಪ್ರತೀಕಾರ ಆಗಿರಬಹುದು ಅಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯನಾಗಿದ್ದ ವಿಕಿ ಮುದ್ದುಕೇರಾನ ಕೊಲೆ ಘಟನೆಯಲ್ಲಿ ಸಿಧು ಮೂಸೆವಾಲರ ಮ್ಯಾನೇಜರ್ ಶಗನ್ಪ್ರೀತ್ ಎಂಬುವರ ಹೆಸರು ಕೇಳಿಬಂದಿತ್ತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications