ನಿಮಗೆ ಸುಳ್ಳು ಭರವಸೆ ಬೇಕಿದ್ದರೆ, ಮೋದಿ, ಕೇಜ್ರಿವಾಲ್ ಮಾತು ಕೇಳಿ: ರಾಹುಲ್
ಚಂಡೀಗಢ, ಫೆಬ್ರವರಿ 15: ನಿಮಗೆ ಸುಳ್ಳು ಭರವಸೆಗಳು ಬೇಕಿದ್ದರೆ ಪ್ರಧಾನಿ ಮೋದಿ ಹಾಗೂ ಕೇಜ್ರಿವಾಲ್ ಮಾತನ್ನು ಕೇಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಂಜಾಬ್ ಜನತೆಗೆ ಹೇಳಿದ್ದಾರೆ.
ನಾನು ಸತ್ಯವನ್ನೆ ಹೇಳುತ್ತೇನೆ ಸುಳ್ಳು ಭರವಸೆ ನಿಡುವುದಿಲ್ಲ, ಸುಳ್ಳು ಭರವಸೆ ಕೇಳ ಬಯಸಿದರೆ ಅದನ್ನ ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅಕಾಲಿ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಅವರ ಭಾಷಣಗಳಲ್ಲಿ ಕೇಳಬೇಕು ಎಂದಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಯುಕ್ತ ಪಟಿಯಾಲ ಜಿಲ್ಲೆಯ ರಾಜಪುರದಲ್ಲಿ 'ನವಿ ಸೋಚ್ ನವ ಪಂಜಾಬ್' ಎಂಬ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ನಾನು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ನೀವು (ಸಾರ್ವಜನಿಕರು) ಸುಳ್ಳು ಭರವಸೆಗಳನ್ನು ನೀಡುವುದನ್ನು ಕೇಳಲು ಬಯಸಿದರೆ, ಮೋದಿ ಜೀ, ಬಾದಲ್ ಜಿ ಮತ್ತು ಕೇಜ್ರಿವಾಲ್ ಜಿಯವರ ಮಾತುಗಳನ್ನು ಕೇಳಿ. ಸತ್ಯವನ್ನು ಮಾತ್ರ ಹೇಳಲು ನನಗೆ ಕಲಿಸಲಾಗಿದೆ. " ಎಂದರು.

ಪಂಜಾಬ್ ಅಪಾಯದಿಂದ ಹೊರಗುಳಿಯುವುದನ್ನು ಖಚಿತಪಡಿಸಿಕೊಳ್ಳಲು, ಎಲ್ಲರೂ ಒಗ್ಗಟ್ಟಿನಿಂದ ನಡೆಯಬೇಕು ಎಂದರು. ವಿಧಾನಸಭಾ ಚುನಾವಣೆಯಲ್ಲಿ ಯಾವುದೇ "ಪ್ರಯೋಗ" ಕ್ಕೆ ಹೋಗದಂತೆ ಪಂಜಾಬ್ನ ಮತದಾರರಿಗೆ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದರು, ಗಡಿ ರಾಜ್ಯಕ್ಕೆ ಶಾಂತಿಯನ್ನು ಕಾಪಾಡುವುದು ಅತ್ಯಂತ ಮುಖ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅದು ಸಾದ್ಯ ಎಂದು ಹೇಳಿದರು.
2014ಕ್ಕೂ ಮುನ್ನ ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದ್ಯಾವುದನ್ನೂ ಮಾಡಿಲ್ಲ ಎಂದರು.
ದೇಶದಲ್ಲಿ ಈ ಮೊದಲು ಕಪ್ಪುಹಣ ಮತ್ತು ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಆ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಪ್ರಧಾನಿಯವರು ಈಗ ಏಕೆ ಉದ್ಯೋಗ ಮತ್ತು ಕಪ್ಪುಹಣದ ಬಗ್ಗೆ ಮಾತನಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ಬಡತನವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬಡವರು, ರೈತರು, ಸಣ್ಣ ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳ ಪರ ಸರ್ಕಾರವನ್ನು ಚನ್ನಿ ಮುನ್ನೆಡೆಸುತ್ತಾರೆಯೇ ವಿನಃ ಕೋಟ್ಯಾಧಿಪತಿಗಳ ಸರ್ಕಾರವನ್ನಲ್ಲ," ಎಂದಿದ್ದಾರೆ.
ನಮ್ಮ ಮುಂದೆ ಪಂಜಾಬ್ ಚುನಾವಣೆಗಳಿವೆ. ಇದು ಸಾಮಾನ್ಯ ಚುನಾವಣೆಗಳಂತೆ ಅಲ್ಲ. ನೀವು ಹೊಸ ಸರ್ಕಾರವನ್ನು ಆಯ್ಕೆ ಮಾಡಬೇಕು. ಇಂದು ದೇಶದ ಪ್ರತಿ ರಾಜ್ಯದಲ್ಲೂ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನೋಟು ಅಮಾನ್ಯೀಕರಣದ ಸಮಯದಲ್ಲಿ ಕಪ್ಪುಹಣದ ವಿರುದ್ಧ ನಮ್ಮ ಹೋರಾಟ ಎಂದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಸಣ್ಣ ವ್ಯಾಪಾರಿಗಳು ಮತ್ತು ರೈತರ ಜೇಬಿನಿಂದ ಹಣವನ್ನು ಕಿತ್ತುಕೊಂಡಿತು. ರೈತರು ಮತ್ತು ಸಣ್ಣ ವ್ಯಾಪಾರಿಗಳಿಂದ ಪಡೆದ ಹಣವನ್ನು ಕೋಟ್ಯಾಧಿಪತಿಗಳಿಗೆ ನೀಡಿದ್ದಾರೆ.
ಪ್ರಧಾನಿ ಮೋದಿ ಅಂದು, ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಣ, 2 ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ಹೇಳುತ್ತಿದ್ದರು, ನಿಮಗೆ ಅದು ಸಿಕ್ಕಿದೆಯೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಪಂಜಾಬ್ನಲ್ಲಿ ಫೆಬ್ರವರಿ 20ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬರಲಿದೆ.












Click it and Unblock the Notifications