ರಾಹುಲ್ ಗಾಂಧಿ ವಿದೇಶಕ್ಕೆ: ಪಂಜಾಬ್ ರ್ಯಾಲಿ ಮುಂದೂಡಿಕೆ, ಕಾಂಗ್ರೆಸ್ನಲ್ಲಿ ಅಸಮಾಧಾನ
ಚಂಡೀಗಢ, ಡಿಸೆಂಬರ್ 31: ಪಂಜಾಬ್ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಿಂದಾಗಿ ಪಂಜಾಬ್ನ ಮೊಗಾದಲ್ಲಿ ಜನವರಿ 3 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ಘೋಷಣೆಡ ಮಾಡಿದೆ. ಇದಾದ ಬೆನ್ನಲ್ಲೇ ರಾಹುಲ್ ಗಾಂಧಿ ವೈಯಕ್ತಿಕ ವಿಚಾರದಲ್ಲಿ ವಿದೇಶಕ್ಕೆ ಹೋಗಿದ್ದು, ಈ ಹಿನ್ನೆಲೆ ಪಕ್ಷವು ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಿದೆ.
ದೆಹಲಿಯ ಎಐಸಿಸಿ ಪ್ರಧಾನ ಕಛೇರಿಯಲ್ಲಿ ಪಕ್ಷದ 137 ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಒಂದು ದಿನದ ನಂತರ ರಾಹುಲ್ ಬುಧವಾರ ಭಾರತದಿಂದ ಹೊರಕ್ಕೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿದೆ. ಹೊಸ ವರ್ಷದಲ್ಲಿ ಇಟಲಿಯಲ್ಲಿ ಇರಲಿದ್ದಾರೆ. ಕಳೆದ ವರ್ಷದಂತೆ ತನ್ನ ತಾಯಿಯ ಅಜ್ಜಿಯೊಂದಿಗೆ ಸಮಯ ಕಳೆಯಲಿದ್ದಾರೆ.
"ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಭೇಟಿಗಾಗಿ ಇಟಲಿಗೆ ಹೋಗಿದ್ದಾರೆ. ಬಿಜೆಪಿ ಮತ್ತು ಅದರ ಮಾಧ್ಯಮ ಮಿತ್ರರು ಅನಗತ್ಯವಾಗಿ ವದಂತಿಗಳನ್ನು ಹಬ್ಬಿಸಬಾರದು," ಎಂದು ಕಾಂಗ್ರೆಸ್ನ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ಹಾಗೆಯೇ ಮಾಜಿ ಕಾಂಗ್ರೆಸ್ ಅಧ್ಯಕ್ಷ ವಿದೇಶದಲ್ಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ನವೆಂಬರ್ನಲ್ಲಿ ಸುಮಾರು ಮೂರು ವಾರಗಳ ಕಾಲ ಅಜ್ಞಾತ ವಿದೇಶಿ ಸ್ಥಳದಲ್ಲಿ ಕಳೆದ ರಾಹುಲ್, ಈಗ ಜನವರಿ 15 ಮತ್ತು 16 ರಂದು ಪಂಜಾಬ್ ಮತ್ತು ಗೋವಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ಗುರುವಾರ ತಿಳಿಸಿವೆ.

ರಾಹುಲ್ ವಿದೇಶ ಪ್ರವಾಸದಿಂದ ಕಾಂಗ್ರೆಸ್ನಲ್ಲಿ ಅಸಮಾಧಾನ
ವಿಧಾನಸಭೆ ಚುನಾವಣೆಗಾಗಿ ಎಲ್ಲಾ ಸಿದ್ದತೆಗಳು ನಡೆಯುತ್ತಿರುವ ನಡುವೆ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿರುವುದು ಕಾಂಗ್ರೆಸ್ನಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ನವೆಂಬರ್ನಲ್ಲಿ ಸುಮಾರು ಮೂರು ವಾರಗಳ ಕಾಲ ಅಜ್ಞಾತ ವಿದೇಶಿ ಸ್ಥಳದಲ್ಲಿ ರಾಹುಲ್ ಗಾಂಧಿ ಇದ್ದರು. ಈ ನಡುವೆ ಪಂಜಾಬ್ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಮತ್ತು ಪಕ್ಷಾಂತರ ನಡೆಯುತ್ತಿದೆ. ಈ ನಡುವೆ ಮತ್ತೆ ರಾಹುಲ್ ವಿದೇಶಕ್ಕೆ ತೆರಳಿರುವುದು ಕಾಂಗ್ರೆಸ್ನ ಪಂಜಾಬ್ ಘಟಕದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವುದು ಗೊತ್ತೆ ಇರಲಿಲ್ಲ!
ಕಾಂಗ್ರೆಸ್ ಪಕ್ಷವು ಈಗಾಗಲೇ ರ್ಯಾಲಿಗೆ ಸಿದ್ಧತೆಯನ್ನು ಪ್ರಾರಂಭ ಮಾಡಿತ್ತು. ಸ್ಥಳವನ್ನು ಕೂಡಾ ಅಂತಿಮ ಮಾಡಿತ್ತು ಎಂದು ಪಂಜಾಬ್ ರಾಜ್ಯ ನಾಯಕರು ಹೇಳಿದ್ದಾರೆ. "ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿದ್ದಾರೆ ಎಂದು ನಮಗೆ ತಿಳಿದಿರಲಿಲ್ಲ. ಪ್ರತಿಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಹಾಗೂ ಸುರ್ಜೇವಾಲಾ ಭೇಟಿಯನ್ನು ಸಮರ್ಥಿಸಿಕೊಂಡ ನಂತರವೇ ಈ ಬಗ್ಗೆ ಮಾಹಿತಿ ಸಿಕ್ಕಿದೆ," ಎಂದು ನಾಯಕರೊಬ್ಬರು ಹೇಳಿದ್ದಾರೆ.

ಟಿಕೆಟ್ ಹಂಚಿಕೆ ಕೂಡಾ ಈಗ ವಿಳಂಬ
"ಈಗ ರ್ಯಾಲಿಯನ್ನು ಮುಂದೂಡಲಾಗಿದೆ. ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಪಿಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮತ್ತು ಇತರ ನಾಯಕರನ್ನು ಒಂದೇ ವೇದಿಕೆಯಲ್ಲಿ ಕರೆತರಲು ರಾಹುಲ್ ಅವರಿಗೆ ಸಾಧ್ಯವಾಗುತ್ತದೆ ಹಾಗೂ ಪಕ್ಷದ ಹಿತಾಸಕ್ತಿಗಳಿಗೆ ಧಕ್ಕೆ ತರುವ ಧ್ವನಿಗಳನ್ನು ನಾವು ಮೌನಗೊಳಿಸಬಹುದು ಎಂದು ನಾವು ಭಾವಿಸಿದ್ದೆವು. ಈಗ ರಾಹುಲ್ ಗಾಂಧಿ ಇಲ್ಲದೆ ಟಿಕೆಟ್ ಹಂಚಿಕೆ ಪ್ರಕ್ರಿಯೆ ಕೂಡಾ ವಿಳಂಬಗೊಳ್ಳುತ್ತಿದೆ," ಎಂದರು.

ಸಿಧು ವಿರುದ್ಧ ಸಚಿವ ರಾಣಾ ಗುರ್ಜಿತ್ ಸಿಂಗ್ ವಾಗ್ದಾಳಿ
ಈ ಎಲ್ಲಾ ಬೆಳವಣಿಗೆಯ ನಡುವೆ ನವಜೋತ್ ಸಿಂಗ್ ಸಿಧು ವಿರುದ್ಧ ಸಚಿವ ರಾಣಾ ಗುರ್ಜಿತ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. "ನನಗೆ ಪಕ್ಷದ ಟಿಕೆಟ್ ನಿರಾಕರಿಸುವಂತೆ ನಾನು ಅವರಿಗೆ ಸವಾಲು ಹಾಕುತ್ತೇನೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲುತ್ತೇನೆ," ಎಂದು ಹೇಳಿದ್ದಾರೆ. "ಇನ್ನು ಈ ಗೊಂದಲಗಳ ನಡುವೆ ಕಾಂಗ್ರೆಸ್ಗೆ ಪಕ್ಷದ ಅಧಿಕಾರವನ್ನು ಉಳಿಸಿಕೊಳ್ಳಬೇಕು ಎಂಬುವುದು ಅಲ್ಲ ಯಾರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂಬುವುದೇ ದೊಡ್ಡ ವಿಚಾರವಾಗಿದೆ," ಎಂದು ತರಾಟೆಗೆ ತೆಗೆದುಕೊಂಡರು. ಇನ್ನು ಪಕ್ಷದ ನಾಯಕರೊಬ್ಬರು "ಉನ್ನತ ನಾಯಕತ್ವವು ಮಧ್ಯಪ್ರವೇಶಿಸಿ ಸಿಧುವನ್ನು ನಿಯಂತ್ರಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ಈಗ ಎಲ್ಲವೂ ಬದಲಾದಂತೆ ಕಾಣುತ್ತದೆ," ಎಂದಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications