ಕಲಾಪ ಕ್ಯಾನ್ಸಲ್: ಪಂಜಾಬ್ ರಾಜ್ಯಪಾಲರ ನಡೆಗೆ ಅರವಿಂದ್ ಕೇಜ್ರಿವಾಲ್ ಟೀಕೆ
ಚಂಡೀಗಢ, ಸೆಪ್ಟೆಂಬರ್ 22: ಪಂಜಾಬಿನಲ್ಲಿ ವಿಶ್ವಾಸಮತ ಯಾಚನೆಗೆ ವಿಶೇಷ ವಿಧಾನಸಭೆ ಅಧಿವೇಶನ ನಡೆಸಬೇಕೆಂಬ ರಾಜ್ಯ ಸರ್ಕಾರದ ಬೇಡಿಕೆಯನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ತಿರಸ್ಕರಿಸಿದ್ದಕ್ಕೆ ಆಮ್ ಆದ್ಮಿ ಪಕ್ಷ (ಎಎಪಿ) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪ್ರಜಾಪ್ರಭುತ್ವ ಮುಗಿದು ಹೋಗಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಸಚಿವ ಸಂಪುಟ ಕರೆದ ಅಧಿವೇಶನವನ್ನು ರಾಜ್ಯಪಾಲರು ನಿರಾಕರಿಸುವುದು ಹೇಗೆ ಎಂದು ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ, 'ಪ್ರಜಾಪ್ರಭುತ್ವ ಮುಗಿಯಿತು. ಎರಡು ದಿನಗಳ ಹಿಂದೆ ರಾಜ್ಯಪಾಲರು ಅಧಿವೇಶನಕ್ಕೆ ಅನುಮತಿ ನೀಡಿದ್ದರು. ಆಪರೇಷನ್ ಕಮಲ ಫೇಲ್ ಆಗುವುದಕ್ಕೆ ಶುರುವಾಗುತ್ತಿದ್ದಂತೆ ಅನುಮತಿಯನ್ನು ವಾಪಸ್ ಪಡೆಯುವಂತೆ ಮೇಲಿಂದ ಕರೆ ಬಂದಿತ್ತು ಎಂದು ದೂಷಿಸಿದ್ದಾರೆ.
ನಿರ್ದಿಷ್ಟ ನಿಯಮಗಳ ಅನುಪಸ್ಥಿತಿ ಬಗ್ಗೆ ಉಲ್ಲೇಖಿಸಿರುವ ರಾಜ್ಯಪಾಲರು ಸೆಪ್ಟೆಂಬರ್ 22ರಂದು ವಿಶೇಷ ಅಧಿವೇಶನಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ. ರಾಜ್ಯಪಾಲರ ಈ ನಡೆಯು ಆಪ್ ಸರ್ಕಾರವನ್ನು ಕೆರಳಿಸಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಪಂಜಾಬ್ ನೆಲದಲ್ಲಿ ಸರ್ಕಾರ ಉರುಳಿಸುವ ಹುನ್ನಾರ:
ಭಾರತೀಯ ಜನತಾ ಪಕ್ಷ ತನ್ನ ಶಾಸಕರನ್ನು ಸೆಳೆಯುವ ಮೂಲಕ ಪಂಜಾಬ್ನಲ್ಲಿ ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಎಎಪಿ ಆರೋಪಿಸಿದ ಕೆಲವು ದಿನಗಳ ನಂತರ, ಮುಖ್ಯಮಂತ್ರಿ ಭಗವಂತ್ ಮಾನ್ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಘೋಷಿಸಿದ್ದರು.
ರಾಜ್ಯಪಾಲರ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಎಎಪಿ ನಾಯಕ ರಾಘವ್ ಚಡ್ಡಾ, "ರಾಜ್ಯಪಾಲರ ಹಿಂಪಡೆಯುವ ಆದೇಶವು ಅವರ ಉದ್ದೇಶವೇನು ಎಂಬುದರ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ವಿಧಾನಸಭೆಯನ್ನು ಎದುರಿಸುವ ಸರ್ಕಾರದ ನಿರ್ಧಾರಕ್ಕೆ ಯಾವುದೇ ಆಕ್ಷೇಪಣೆ ಏಕೆ ಇರಬೇಕು ಎಂಬುದು ಯಾವುದೇ ಸಮಂಜಸವಾದ ತಿಳುವಳಿಕೆಯನ್ನು ಮೀರಿದೆ? ಎಂದಿದ್ದಾರೆ.
ಕಾಂಗ್ರೆಸ್ ನಾಯಕ ಸುಖಪಾಲ್ ಸಿಂಗ್ ಖೈರಾ ಮತ್ತು ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ರಾಜ್ಯಪಾಲರನ್ನು ಸಂಪರ್ಕಿಸಿ, ರಾಜ್ಯ ಸರ್ಕಾರದ ಪರವಾಗಿ 'ವಿಶ್ವಾಸ ನಿರ್ಣಯ' ಮಂಡಿಸಲು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲು ಯಾವುದೇ ಕಾನೂನು ಅವಕಾಶವಿಲ್ಲ ಎಂದು ವಾದಿಸಿದರು.
ಕಾಂಗ್ರೆಸ್ ನಾಯಕ ಪ್ರತಾಪ್ ಬಾಜ್ವಾ ಅವರು ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು ರಾಹುಲ್ ಗಾಂಧಿಯವರಲ್ಲ ಎಂದು ಎಎಪಿ ಹೇಳಿಕೆಯಲ್ಲಿ ತಿಳಿಸಿದೆ.
"ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟಾಗಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಕೊಂದಿವೆ. ಚುನಾಯಿತ ಸರ್ಕಾರದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ರಾಜ್ಯಪಾಲರಿಗೆ ಇರಲಿಲ್ಲ. ಎಎಪಿ ಯಾವಾಗಲೂ ದಬ್ಬಾಳಿಕೆಯ ನೀತಿಗಳ ವಿರುದ್ಧ ಹೋರಾಡುತ್ತಿದೆ ಮತ್ತು ಹೋರಾಟವನ್ನು ಮುಂದುವರಿಸುತ್ತದೆ," ಎಂದು ಎಎಪಿ ಹೇಳಿದೆ. ಇದರ ಮಧ್ಯೆ ರಾಜ್ಯಪಾಲರ ಕ್ರಮವನ್ನು ಅಕಾಲಿದಳ ಸ್ವಾಗತಿಸಿದ್ದು, ಮುಖ್ಯಮಂತ್ರಿ ಭಗವಂತ್ ಮಾನ್ ಯೋಜನೆಯನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದೆ.











Click it and Unblock the Notifications