ರೈತರ ಪ್ರತಿಭಟನೆಗೆ ಪಂಜಾಬ್ ಸಿಎಂ ಅಮರಿಂದರ್ ಹೊಣೆ: ಹರಿಯಾಣ ಸಿಎಂ ಖಟ್ಟರ್
ಚಂಡೀಗಡ, ನವೆಂಬರ್ 28: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಸಾವಿರಾರು ರೈತರು ಪ್ರತಿಭಟನೆ ನಡೆಸಲು ದೆಹಲಿಗೆ ಮೆರವಣಿಗೆ ತೆರಳುತ್ತಿರುವುದಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೇ ಹೊಣೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಆರೋಪಿಸಿದ್ದಾರೆ. ರೈತರ ಪ್ರತಿಭಟನೆ ಸಂಬಂಧ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಟ್ವಿಟ್ಟರ್ನಲ್ಲಿ ಪರಸ್ಪರ ಕಿತ್ತಾಟ ನಡೆಸಿದ ಬಳಿಕ ಮತ್ತೊಂದು ವಾಕ್ಸಮರದ ಸೂಚನೆ ದೊರೆತಿದೆ.
ಪಂಜಾಬ್ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳೇ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು ಎಂದು ಖಟ್ಟರ್ ಆರೋಪಿಸಿದ್ದಾರೆ. ಜತೆಗೆ ರೈತರ ಮೇಲೆ ಅಶ್ರುವಾಯುಗಳನ್ನು ಸಿಡಿಸಿ, ಅವರನ್ನು ಲಾಠಿಯಿಂದ ಥಳಿಸಿದ ಕಾರಣಕ್ಕೆ ತೀವ್ರ ಟೀಕೆಗೆ ಗುರಿಯಾಗಿರುವ ಹರಿಯಾಣ ಪೊಲೀಸರ ಶ್ರಮವನ್ನು ಖಟ್ಟರ್ ಶ್ಲಾಘಿಸಿದ್ದಾರೆ.
ರೈತರ ಪ್ರತಿಭಟನೆಗೆ ರಾಜಕೀಯ ಪಕ್ಷಗಳ ಬೆಂಬಲವಿದೆ ಎಂದ ಖಟ್ಟರ್, ರೈತರ ಪ್ರತಿಭಟನೆಗೆ ಖಲಿಸ್ತಾನಿ ಸಂಪರ್ಕವಿದೆ ಎಂದು ಆರೋಪಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಖಟ್ಟರ್, 'ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಹರಿಯಾಣ ರೈತರು ದೂರವೇ ಇದ್ದರು. ಪ್ರತಿರೋಧ ಒಡ್ಡಿದ್ದಕ್ಕಾಗಿ ಹರಿಯಾಣ ರೈತರು ಮತ್ತು ಪೊಲೀಸರಿಗೆ ನಾನು ಧನ್ಯವಾದ ಹೇಳುತ್ತೇನೆ. ಪಂಜಾಬ್ ಮುಖ್ಯಮಂತ್ರಿ ಈ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಈ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದಾರೆ' ಎಂದು ಟೀಕಿಸಿದರು.

ಪಂಜಾಬ್ನಿಂದ ಹರಿಯಾಣ ಮಾರ್ಗವಾಗಿ ದೆಹಲಿಗೆ ಪ್ರಯಾಣಿಸುತ್ತಿದ್ದ ರೈತರನ್ನು ಹರಿಯಾನ ಪೊಲೀಸರು ಬಲಪ್ರಯೋಗದಿಂದ ತಡೆಯಲು ಪ್ರಯತ್ನಿಸಿದಾಗ ಉಂಟಾದ ಘರ್ಷಣೆಗೆ ಸಂಬಂಧಿಸಿದಂತೆ ಖಟ್ಟರ್ ವಿರುದ್ಧ ಅಮರಿಂದರ್ ಸಿಂಗ್ ಹರಿಹಾಯ್ದಿದ್ದರು. ರೈತರು ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿರುವಾಗ ಈ ರೀತಿ ದೌರ್ಜನ್ಯ ನಡೆಸಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದ್ದರು. ಇದು ಟ್ವಿಟ್ಟರ್ನಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಕಿತ್ತಾಟಕ್ಕೆ ಕಾರಣವಾಗಿತ್ತು.












Click it and Unblock the Notifications