Breaking news: ಪಂಜಾಬ್ ಚುನಾವಣೆ ದಿನಾಂಕ ಮರುನಿಗದಿ ಮಾಡಿದ ಚುನಾವಣಾ
ಚಂಡೀಗಢ, ಜನವರಿ 17: ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಸೇರಿದಂತೆ ಬಿಜೆಪಿ ಹಾಗೂ ಹಲವಾರು ನಾಯಕರುಗಳು ಪಂಜಾಬ್ ಚುನಾವಣೆಯನ್ನು ಮುಂದೂಡಿಕೆ ಮಾಡಬೇಕು ಎಂದು ಆಗ್ರಹ ಮಾಡಿದ್ದರು. ಇದರಂತೆ ಚುನಾವಣಾ ಆಯೋಗವು ಇಂದು ಸಭೆ ನಡೆಸಿದ್ದು, ಪಂಜಾಬ್ ಚುನಾವಣೆ ದಿನಾಂಕವನ್ನು ಮರುನಿಗದಿ ಮಾಡಿದೆ.
ಪಂಜಾಬ್ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕವನ್ನು ಬದಲಾಯಿಸುವುದಾಗಿ ಭಾರತೀಯ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ. ಪಂಜಾಬ್ನ 117 ಅಸೆಂಬ್ಲಿ ಸ್ಥಾನಗಳಿಗೆ ಮತದಾನವನ್ನು ಮೊದಲು ಫೆಬ್ರವರಿ 14 ರಂದು ನಿಗದಿಪಡಿಸಲಾಗಿತ್ತು.

ಹಲವಾರು ರಾಜಕೀಯ ಪಕ್ಷಗಳು ದಿನಾಂಕವನ್ನು ಬದಲಾಯಿಸುವಂತೆ ಚುನಾವಣಾ ಸಮಿತಿಯನ್ನು ಒತ್ತಾಯಿಸಿದವು. ಫೆಬ್ರವರಿ 16 ರಂದು ಗುರು ರವಿದಾಸ್ ಜಯಂತಿ ಹಿನ್ನೆಲೆಯಿಂದಾಗಿ ದಿನಾಂಕ ಬದಲಾವಣೆ ಮಾಡುವ ಒತ್ತಾಯ ಕೇಳಿ ಬಂದಿತ್ತು. ಬಿಜೆಪಿ, ಬಿಎಸ್ಪಿ, ಎಸ್ಎಡಿ (ಸಂಯುಕ್ತ) ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯಸ್ಥ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯನ್ನು ಮರು ನಿಗದಿಪಡಿಸುವಂತೆ ಚುನಾವಣಾ ಸಮಿತಿಗೆ ಮನವಿ ಮಾಡಿದ್ದರು.

ಕಾಂಗ್ರೆಸ್ ನಾಯಕ ಮತ್ತು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಕೂಡ ಗುರು ರವಿದಾಸ್ ಜಯಂತಿಯ ದೃಷ್ಟಿಯಿಂದ ಚುನಾವಣೆಯನ್ನು ಆರು ದಿನಗಳ ಕಾಲ ಮುಂದೂಡುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು. ಗುರು ರವಿದಾಸ್ ಜಯಂತಿಗೆ ಉತ್ತರ ಪ್ರದೇಶದ ವಾರಣಾಸಿಗೆ ತೆರಳುವ ಭಕ್ತರು ಮತ ಚಲಾಯಿಸಲು ಅನುಕೂಲವಾಗುವಂತೆ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಕನಿಷ್ಠ ಆರು ದಿನಗಳ ಕಾಲ ಮುಂದೂಡಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಶನಿವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.
"ಮೇಲೆ ಉಲ್ಲೇಖ ಮಾಡಿ ಕಾರಣದಂತೆ ಚುನಾವಣೆಯ ಮತದಾನವನ್ನು ಕನಿಷ್ಠ ಆರು ದಿನಗಳ ಕಾಲ ಮುಂದೂಡುವುದು ನ್ಯಾಯಯುತ ಮತ್ತು ಸೂಕ್ತವೆಂದು ಪರಿಗಣಿಸಲಾಗಿದೆ. ಇದು ಸುಮಾರು 20 ಲಕ್ಷ ಜನರು ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ನೀವು ಇದನ್ನು ಸಹಾನುಭೂತಿಯಿಂದ ಪರಿಗಣಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ಅಗತ್ಯವಿದ್ದಂತೆ ಮಾಡಿ," ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರರಿಗೆ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಶನಿವಾರ ಪತ್ರ ಬರೆದಿದ್ದಾರೆ.
ಗುರು ರವಿದಾಸ್ ಜಯಂತಿ
ಈ ವರ್ಷ ಫೆಬ್ರವರಿ 16 ರಂದು ಗುರು ರವಿದಾಸ್ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಂತ ಗುರು ರವಿದಾಸ್ ಅವರ 645 ನೇ ಜನ್ಮದಿನವನ್ನು ಆಚರಿಸಲಾಗುತ್ತದೆ. ಗುರು ರವಿದಾಸ್ ಭಕ್ತಿ ಚಳವಳಿಯ ಪ್ರಸಿದ್ಧ ಸಂತರಾಗಿದ್ದು, ರವಿದಾಸ್ಗೆ ಮಾನ್ಯತೆ ಪಡೆದ ಸುಮಾರು 40 ಕವಿತೆಗಳನ್ನು ಪವಿತ್ರ ಸಿಖ್ ಧರ್ಮಗ್ರಂಥವಾದ ಆದಿ ಗ್ರಂಥದಲ್ಲಿ ಸೇರಿಸಲಾಗಿದೆ. ಜಾತೀಯತೆಯ ತಾರತಮ್ಯ ಪದ್ಧತಿಯನ್ನು ಹೋಗಲಾಡಿಸಲು ಗುರು ರವಿದಾಸ್ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಗುರು ರವಿದಾಸ್ ಜಯಂತಿಯಂದು, ಧಾರ್ಮಿಕ ವಿಧಿಗಳ ಭಾಗವಾಗಿ ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಹೆಚ್ಚಾಗಿ ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ವಾರಣಾಸಿಗೆ ಭಕ್ತರು ತೆರಳುತ್ತಾರೆ.
ಇನ್ನು ಚುನಾವಣೆ ದಿನಾಂಕ ಮರುನಿಗದಿ ಮಾಡಿದ ಬಳಿಕದ ಮಾಹಿತಿ ಪ್ರಕಾರ, ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್ನಲ್ಲಿ ಚುನಾವಣೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications