ಪಂಜಾಬ್ ಅಖಾಡಕ್ಕೆ ಇಳಿಕ ಆಪ್ ಅನ್ನು "ಲೂಟಿಕೋರರ ಪಕ್ಷ" ಎಂದ ಸಿಎಂ ಚನ್ನಿ
ಚಂಡೀಘರ್, ಡಿಸೆಂಬರ್ 11: ಪಂಜಾಬ್ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿದೆ. ಈ ನಡುವೆ ಆಮ್ ಆದ್ಮಿ ಪಾರ್ಟಿಯು "ದರೋಡೆಕೋರರು ಮತ್ತು ಲೂಟಿಕೋರರ" ಪಕ್ಷ ಎಂದು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ದೂಷಿಸಿದ್ದಾರೆ.
ರಾಜ್ಯದಲ್ಲಿ "ಪಂಜಾಬಿಯೇತರರು" ತಮ್ಮ "ಚುನಾವಣೆ ಗಿಮಿಕ್" ಮೂಲಕ ಜನರನ್ನು ಮರುಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ. ಅಲ್ಲದೇ ಆಮ್ ಆದ್ಮಿ ಪಕ್ಷವನ್ನು ಅಪಹಾಸ್ಯ ಮಾಡಿದ ಅವರು ಅದನ್ನು "ಖಾಸ್" (ವಿಶೇಷ) ಪಕ್ಷ ಎಂದು ಕರೆದಿದ್ದಾರೆ.
ಮಾನ್ಸಾದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ರಾಜ್ಯವನ್ನು ಬಾದಲ್ಗಳು "ಲೂಟಿ" ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದಲೇ ಸಿಎಂ ಆಗಿದ್ದ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ "ದುರಾಡಳಿತ" ನಡೆಸಿದ್ದಾರೆ ಎಂದು ಕಿಡಿ ಕಾರಿದರು.

ಪಂಜಾಬಿಯೇತತರಿಂದ ಚುನಾವಣಾ ಗಿಮಿಕ್:
ರಾಜ್ಯದಲ್ಲಿ "ಖಾಸ್ ಪಕ್ಷದ' ಪಂಜಾಬಿಯೇತರರು ತಮ್ಮ ಚುನಾವಣಾ ಗಿಮಿಕ್ಗಳಿಂದ ಜನರನ್ನು ಮರುಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪಂಜಾಬಿಗಳಿಗೆ ಈ ಬಗ್ಗೆ ಸಾಕಷ್ಟು ಅರಿವಿದ್ದು, ಅವರಿಗೆ ಪಾಠ ಕಲಿಸುತ್ತಾರೆ," ಎಂದು ಚರಂಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
"ಹೊರಗಿನವರ" ಪೋಸ್ಟರ್ಗಳನ್ನು ಎಲ್ಲೆಡೆ ಹಾಕುವುದರ ಮೂಲಕ ಪಂಜಾಬ್ ಅನ್ನು ವಶಪಡಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಆದರೆ ಅವರ "ಹಗಲು ಕನಸು" ಎಂದಿಗೂ ನಿಜವಾಗುವುದಿಲ್ಲ, ಏಕೆಂದರೆ ಪಂಜಾಬಿಗಳು ಈ "ಕಪ್ಪು ಹೃದಯದ ಕಾಲಾ ಆಂಗ್ರೇಜ್" ಅನ್ನು ಹೊರಹಾಕುತ್ತಾರೆ ಎಂದ ಸಿಎಂ, ಎಎಪಿಯನ್ನು "ದರೋಡೆಕೋರರು ಮತ್ತು ಲೂಟಿಕೋರರ" ಪಕ್ಷ ಎಂದು ಕರೆದರು.
ತಮ್ಮ "ಹಿಡನ್ ಅಜೆಂಡಾ" ತೋರಿಸುವ ಪೋಸ್ಟರ್ಗಳು ಮತ್ತು ಹೋರ್ಡಿಂಗ್ಗಳಲ್ಲಿ ಪಂಜಾಬ್ನ ಯಾವುದೇ ನಾಯಕರಿಗೆ ಆಪ್ ಜಾಗ ನೀಡುತ್ತಿಲ್ಲ. ಡಿಸೆಂಬರ್ ತಿಂಗಳ ಆರಂಭದಲ್ಲಿ ಸಿಎಂ ಚರಂಜಿತ್ ಸಿಂಗ್ ಚನ್ನಿ, ಆಪ್ ಅನ್ನು 2022ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿರುವ 'ಕಾಲೇ ಆಂಗ್ರೇಜ್' (ಕಪ್ಪು ಬ್ರಿಟಿಷರು) ಪಕ್ಷ ಎಂದು ಕರೆದಿದ್ದರು.
ಬಾದಲ್ ವಿರುದ್ಧ ಚನ್ನಿ ಸಿಡಿಮಿಡಿ:
ಬಾದಲ್ ಮತ್ತು ಅಕಾಲಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಚನ್ನಿ, "ತಮ್ಮ ಸ್ವಂತ ವ್ಯಾಪಾರ ಸಾಮ್ರಾಜ್ಯಗಳನ್ನು ಸ್ಥಾಪಿಸಲು ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿದ್ದಾರೆ," ಎಂದು ಆರೋಪಿಸಿದರು. ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡಾ ಸಾಮಾನ್ಯ ಜನರ ಸಮಸ್ಯೆಗಳಿಗೆ ಕಿಂಚಿತ್ತೂ ಗಮನ ಕೊಡದೇ ಇಂತಹ ದುಷ್ಕೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಅವರು ಆರೋಪಿಸಿದರು.
"ಈ ರೀತಿಯ ಜನರು ಗಣ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದಲೇ ಸಾಮಾನ್ಯ ಜನರ ಕಷ್ಟವನ್ನು ಎಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗಣ್ಯರು ಯಾವುದೇ ಜಾತಿ ಅಥವಾ ಧರ್ಮವನ್ನು ಹೊಂದಿಲ್ಲ, ಏಕೆಂದರೆ ಅವರ ಏಕೈಕ ಉದ್ದೇಶ ತಮ್ಮ ಜೇಬಿಗೆ ಹಣ ತುಂಬಿಸಿಕೊಳ್ಳುವುದೇ ಆಗಿರುತ್ತದೆ," ಎಂದು ಚನ್ನಿ ಆರೋಪಿಸಿದರು.
ಅಮರಿಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಚರಂಜಿತ್ ಸಿಂಗ್ ಚನ್ನಿ, ತಮ್ಮ ಹಿಂದಿನವರು ಸಲಹೆಗಾರರ ಸೇನೆಯನ್ನು ನೇಮಿಸಿಕೊಂಡಿದ್ದರು. ಸಾರ್ವಜನಿಕರಿಗೆ "ಅನಗತ್ಯವಾಗಿ ಕಿರುಕುಳ" ನೀಡಲು ನೂರಾರು ಪೊಲೀಸ್ ಸಿಬ್ಬಂದಿಯೊಂದಿಗೆ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಅಮರೀಂದರ್ ಸಿಂಗ್ ಮೈತ್ರಿ ಮಂತ್ರ:
ಪಂಜಾಬ್ ಕಾಂಗ್ರೆಸ್ನಲ್ಲಿ ಉಂಟಾಗಿದ್ದ ಬಿಕ್ಕಟ್ಟಿನಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷದಿಂದ ಹೊರಬಂದಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತನ್ನ ಪಕ್ಷ 'ಪಂಜಾಬ್ ಲೋಕ ಕಾಂಗ್ರೆಸ್' ಕಣಕ್ಕಿಳಿಯಲಿದ್ದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂದಿದ್ದಾರೆ. ಆದಷ್ಟು ಬೇಗ ಮೈತ್ರಿ ಘೋಷಣೆಯಾಗಲಿದ್ದು, ಸೀಟು ಹಂಚಿಕೆ ನಡೆಯಲಿದೆ ಎಂದಿದ್ದಾರೆ. ಇದರ ಜೊತೆ ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಶಿರೋಮಣಿ ಅಕಾಲಿ ದಳದ ಮಾಜಿ ಮುಖಂಡ ಸುಖ್ ದೇವ್ ಸಿಂಗ್ ದಿಂಡ್ಸಾ ಅವರೊಂದಿಗೂ ಮಾತಕತೆ ನಡೆದಿದೆ. ಇದೀಗ ಪಂಜಾಬ್ ಲೋಕ ಕಾಂಗ್ರೆಸ್, ಬಿಜೆಪಿ ಹಾಗೂ ಶಿರೋಮಣಿ ಅಕಾಲಿ ದಳ ಮೈತ್ರಿ ಮಾಡಿಕೊಂಡು ಚುನಾಚಣೆ ಎದುರಿಸುವ ಸಾಧ್ಯತೆ ಇದೆ.












Click it and Unblock the Notifications