ಪಂಜಾಬ್ನ ಕಿರಾತ್ಪುರದಲ್ಲಿ ಕಂಗನಾ ರಣಾವತ್ ಕಾರಿಗೆ ರೈತರ ಘೆರಾವ್
ಚಂಡೀಗಢ ಡಿಸೆಂಬರ್ 3: ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿಕೊಳ್ಳುವ ಬಾಲಿವುಡ್ ನಟಿ ಕಂಗನಾ ರಣಾವತ್ ಇಂದು ರೈತರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಶುಕ್ರವಾರ ಪಂಜಾಬ್ನ ಕಿರಾತ್ಪುರದಲ್ಲಿ ತಮ್ಮ ಕಾರನ್ನು ರೈತರು ಸುತ್ತುವರಿದಿದ್ದಾರೆ ಎಂದು ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ.
ಚಂಡೀಗಢ-ಉನಾ ಹೆದ್ದಾರಿಯಲ್ಲಿರುವ ಕಿರಾತ್ಪುರ ಸಾಹಿಬ್ನ ಬುಂಗಾ ಸಾಹಿಬ್ನಲ್ಲಿ ಈ ಘಟನೆ ನಡೆದಿದೆ. ದೃಶ್ಯಗಳಲ್ಲಿ ನಟಿಯ ಬಿಳಿ ಬಣ್ಣದ ಕಾರನ್ನು ದೊಡ್ಡ ಸಂಖ್ಯೆಯ ರೈತರು ಸುತ್ತುವರೆದಿರುವುದನ್ನು ಕಾಣಬಹುದು. ಜನಸಂದಣಿಯನ್ನು ನಿಯಂತ್ರಿಸುವ ಪೊಲೀಸ್ ಸಿಬ್ಬಂದಿಯೂ ದೃಶ್ಯದಲ್ಲಿ ಕಾಣಸಿಗುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೈತ ಮುಖಂಡ ರಾಕೇಶ್ ಟಿಕಾಯತ್, ಕಂಗನಾ ರಣಾವತ್ ಕಾರಿನ ಮೇಲೆ ನಡೆದಿರುವ ದಾಳಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. "ನನಗೆ ಯಾವುದೇ ಮಾಹಿತಿ ಇಲ್ಲ, ಘಟನೆಯ ವಿವರಗಳನ್ನು ಪಡೆದ ನಂತರವೇ ಪ್ರತಿಕ್ರಿಯೆ ನೀಡುತ್ತೇನೆ" ಎಂದು ಅವರು ಹೇಳಿದ್ದಾರೆ.

ದೃಶ್ಯದಲ್ಲಿ ನಟಿ ಕಂಗನಾ ರಣಾವತ್ ಕಾರಿಗೆ ರೈತರು ಸುತ್ತುವರಿದಿದ್ದಾರೆ. ಜೊತೆಗೆ ರೈತರ ಪ್ರತಿಭಟನೆಯ ಪೋಸ್ಟ್ಗಳಿಗೆ ನಟಿಗೆ ಬೆದರಿಕೆ ಹಾಕಿದ್ದಾರೆಂದು ಕಂಗನಾ ದೂರಿದ್ದಾರೆ. ಈ ಹಿಂದೆ ರೈತರ ಪ್ರತಿಭಟನೆ ಕುರಿತ ಪೋಸ್ಟ್ಗಳಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿರುವುದಾಗಿ ನಟಿ ಕಂಗನಾ ರಣಾವತ್ ಮಂಗಳವಾರ ಹೇಳಿದ್ದಾರೆ.
ರಣಾವತ್ ಅವರು ರೈತರ ಚಳವಳಿಯ ವಿರುದ್ಧ ಟೀಕಿಸಿ ಇನ್ಸ್ಟಾಗ್ರಾಮ್ನಲ್ಲಿ ಹಿಂದಿಯಲ್ಲಿ ಸುದೀರ್ಘ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಹೀಗಾಗಿ ತನ್ನ ಇತ್ತೀಚಿನ ಪೋಸ್ಟ್ಗಳಿಂದಾಗಿ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ ಎಂದು ನಟಿ ಆರೋಪಿಸಿದ್ದಾರೆ. "ನನ್ನ ಈ ಪೋಸ್ಟ್ನಲ್ಲಿ ವಿಚ್ಛಿದ್ರಕಾರಕ ಶಕ್ತಿಗಳಿಂದ ನನಗೆ ನಿರಂತರ ಬೆದರಿಕೆಗಳು ಬರುತ್ತಿವೆ. ಬಟಿಂಡಾದ ಒಬ್ಬ ವ್ಯಕ್ತಿ ನನ್ನನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ. ಈ ರೀತಿಯ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನಕ್ಸಲೀಯರು ಅಮಾಯಕ ಯೋಧರನ್ನು ಕೊಲ್ಲುತ್ತಾರೆ. ತುಕ್ಡೆ ತುಕ್ಡೆ ಗ್ಯಾಂಗ್ಗಳು ಅಥವಾ ಖಲಿಸ್ತಾನ್ ರಚನೆಯ ಕನಸು ಕಾಣುತ್ತಿರುವ ವಿದೇಶದಲ್ಲಿ ಕುಳಿತಿರುವ ಭಯೋತ್ಪಾದಕರು ಹಾಗೂ ದೇಶದಲ್ಲಿ ಭಯೋತ್ಪಾದಕ ಶಕ್ತಿಗಳ ಹಿಂದೆ ಪಿತೂರಿ ಮಾಡುವವರ ವಿರುದ್ಧ ನಾನು ಮಾತನಾಡುವುದನ್ನು ಮುಂದುವರಿಸುತ್ತೇನೆ" ಎಂದು ರನೌತ್ ಹೇಳಿದರು.

ಜೊತೆಗೆ ಕಂಗನಾ ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾನೂನುಗಳ ರದ್ದು ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. "ದುಃಖಕರ, ನಾಚಿಕೆಗೇಡಿನ, ಸಂಪೂರ್ಣ ಅನ್ಯಾಯ. ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದರೆ ಸಂಸತ್ತಿನಲ್ಲಿ ಆಯ್ಕೆಯಾದ ಸರ್ಕಾರ ಯಾಕೆ. ಇದನ್ನು ಬಯಸಿದ ಎಲ್ಲರಿಗೂ ಅಭಿನಂದನೆಗಳು," ಎಂದು ಕಂಗನಾ ರಣಾವತ್ ಬರೆದಿದ್ದಾರೆ ಎನ್ನುವ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ಕೇಂದ್ರ ಕೃಷಿ ಮಸೂದೆ ಹಾಗೂ ಅದಕ್ಕೆ ಸಂಬಂಧಿಸಿದ ರೈತ ಹೋರಾಟದ ವಿರುದ್ಧ ಸರಣಿ ಟ್ವೀಟ್ ಮೂಲಕ ಟೀಕಾಸ್ತ್ರ ಪ್ರಯೋಗಿಸಿರುವ ನಟಿ ಕಂಗನಾ, "ಪ್ರಧಾನಿ ಮೋದಿಜೀ, ನಿದ್ರಿಸುತ್ತಿರುವವರನ್ನು ಎಚ್ಚರಗೊಳಿಸಬಹುದು. ತಪ್ಪು ತಿಳವಳಿಕೆ ಇದ್ದರೇ ಅದನ್ನು ಪರಿಹರಿಸಬಹುದು. ಆದರೆ ನಿದ್ದೆ ಮಾಡುವಂತೆ ನಟಿಸುವವರ, ಅರ್ಥ ಮಾಡಿಕೊಳ್ಳದಂತೆ ನಟಿಸುವವರರಿಗೆ ನೀವು ತಿಳಿಸಲು ಪ್ರಯತ್ನಸಿದರೆ ಏನು ಪ್ರಯೋಜನ..? ಇವರು ಅದೇ ಭಯೋತ್ಪಾದಕರು. ಸಿಎಎಯಿಂದ ಯಾರು ಪೌರತ್ವ ಕಳೆದುಕೊಳ್ಳದಿದ್ದರೂ ರಕ್ತದ ಕೋಡಿ ಹರಿಸಿದವರೇ ಇಂದು ಈ ಕೃಷಿ ಮಸೂದೆಯ ವಿರುದ್ಧವೂ ಹೋರಾಡುತ್ತಿದ್ದಾರೆ" ಎಂದಿದ್ದರು.

ಈ ಹಿಂದೆ ಕಂಗನಾ "1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಭಿಕ್ಷೆ [ಭಿಕ್]' ಎಂದು ಹೇಳುವ ಮೂಲಕ ನಟಿ ಕಂಗನಾ ರಣಾವತ್ ವಿವಾದ ಹುಟ್ಟುಹಾಕಿದ್ದರು. ಮಹಾತ್ಮ ಗಾಂಧಿಯನ್ನು ಗುರಿಯಾಗಿಟ್ಟುಕೊಂಡು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿದವರಿಂದ ಸ್ವಾತಂತ್ರ್ಯ ಬಂದಿರಲು ಸಾಧ್ಯವಿಲ್ಲ. ಅಂಥವರಿಂದ ಭಿಕ್ಷೆ ಮಾತ್ರ ಸಿಗುತ್ತದೆ. ಹೀಗಾಗಿ ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ" ಎಂದು ಕಂಗನಾ ತಮ್ಮ ಸರಣಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿ ಮಾಡಿತ್ತು.












Click it and Unblock the Notifications