ಪಂಜಾಬ್ನಲ್ಲಿ ಆಪ್ ಸರ್ಕಾರ ರಚಿಸಿದರೆ ಹೊಸ ತೆರಿಗೆಯಿಲ್ಲ: ಕೇಜ್ರಿವಾಲ್
ಚಂಡೀಗಢ, ಜನವರಿ 29: ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಯಾವುದೇ ಹೊಸ ತೆರಿಗೆಯನ್ನು ವಿಧಿಸಲಾಗುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಶನಿವಾರ ಪಂಜಾಬ್ನ ಜಲಂಧರ್ ಪ್ರದೇಶದಲ್ಲಿ ಭರ್ಜರಿ ಪ್ರಚಾರ ನಡೆಸಿದರ ಆಪ್ ಮುಖ್ಯಸ್ಥ ಕೇಜ್ರಿವಾಲ್, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜನರ ಮೇಲೆ ಹೆಚ್ಚುವರಿ ತೆರಿಗೆ ಭಾರ ಹಾಕುವುದಿಲ್ಲ ಎಂದು ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಪ್ರಚಾರ ದೆಹಲಿಯಲ್ಲಿ ಮಾತನಾಡಿದ್ದ ಕೇಜ್ರಿವಾಲ್, ಪಂಜಾಬ್ನಲ್ಲಿ ತಮ್ಮ ಪಕ್ಷವು ಸರ್ಕಾರವನ್ನು ರಚಿಸಿದರೆ, ರಾಜ್ಯದ ವಾರ್ಷಿಕ ಹಣಕಾಸು ಬಜೆಟ್ ಅನ್ನು ಸಾರ್ವಜನಿಕರ ಸಲಹೆಗಳೊಂದಿಗೆ ಸಿದ್ಧಪಡಿಸಲಾಗುವುದು ಎಂದು ಹೇಳಿದ್ದರು. ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ ತಮ್ಮ ಸರ್ಕಾರ ಬಜೆಟ್ ಅನ್ನು ಸಿದ್ಧಪಡಿಸುತ್ತದೆ ಎಂಬ ಭರವಸೆ ನೀಡಿದ್ದರು.
ಬಜೆಟ್ ಮಂಡನೆಗೆ ಸಾರ್ವಜನಿಕರ ಸಲಹೆ:
ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು 2022-23ರ ಹಣಕಾಸು ವರ್ಷದ ಬಜೆಟ್ಗಾಗಿ ಚರ್ಚೆಯನ್ನು ಪ್ರಾರಂಭಿಸಿದೆ. ಬಜೆಟ್ ಮಂಡನೆಗೆ ಮೊದಲು ದೆಹಲಿಯ ಸಾಮಾನ್ಯ ಜನರು ಮತ್ತು ಉದ್ಯಮಿಗಳಿಂದ ಸಲಹೆಗಳನ್ನು ಪಡೆಯಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದರು. ಪಂಜಾಬ್ನಲ್ಲಿಯೂ ಎಎಪಿ ಸರ್ಕಾರ ರಚನೆಯಾದಾಗ ಇದೇ ರೀತಿಯಲ್ಲಿ ಬಜೆಟ್ ಸಿದ್ಧಪಡಿಸಲಾಗುತ್ತದೆ. ಪಂಜಾಬ್ನ ಬಜೆಟ್ ಅನ್ನು ಸಿದ್ಧಪಡಿಸುವ ಮೊದಲು, ಸಾಮಾನ್ಯ ಜನರು, ವಿಶೇಷವಾಗಿ ವ್ಯಾಪಾರಿಗಳು, ಉದ್ಯಮಿಗಳು, ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ಉದ್ಯೋಗಿಗಳು ಸೇರಿದಂತೆ ಎಲ್ಲಾ ವರ್ಗಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
ಪಂಜಾಬ್ನ ಜನರು, ವ್ಯಾಪಾರಿಗಳು ಮತ್ತು ಉದ್ಯಮಿಗಳೊಂದಿಗಿನ ಸಭೆಯಲ್ಲಿ ಅವರ ಸಮಸ್ಯೆಗಳನ್ನು ಪರಿಹರಿಸಲು ಎಎಪಿ ಸರ್ಕಾರವು ಸ್ವೀಕರಿಸಿದ ಸಲಹೆಗಳನ್ನು ಬಜೆಟ್ನಲ್ಲಿ ಸೇರಿಸುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆ:
ಪಂಜಾಬ್ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ. ಕಳೆದ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಗದ್ದುಗೆ ನೀಡಿದ್ದರು. 117 ಕ್ಷೇತ್ರಗಳಲ್ಲಿ ಕಾಂಗ್ರೆಸ್ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಆಮ್ ಆದ್ಮಿ ಪಕ್ಷವು 20 ಕಡೆಗಳಲ್ಲಿ ವಿಜಯ ಪತಾಕೆ ಹಾರಿಸಿತ್ತು. ಶಿರೋಮಣಿ ಅಕಾಲಿ ದಳ 18 ಹಾಗೂ ಇತರರು ಎರಡು ಕಡೆಗಳಲ್ಲಿ ಗೆಲುವು ಸಾಧಿಸಿದ್ದರು.
Recommended Video