ಹರಿಯಾಣದಲ್ಲಿ ಶಾಲೆ ತೊರೆದ 12.5 ಲಕ್ಷ ಖಾಸಗಿ ಶಾಲಾ ವಿದ್ಯಾರ್ಥಿಗಳು!
ಚಂಡೀಗಢ, ಜು. 03: ಹರಿಯಾಣದ ಖಾಸಗಿ ಶಾಲೆಗಳ 12.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಸುಮಾರು ಮೂರು ತಿಂಗಳಾದರೂ ಇನ್ನೂ ಶಾಲೆಗೆ ದಾಖಲಾಗಿಲ್ಲ. ಈ ಹಿನ್ನೆಲೆ ಶಾಲಾ ಶಿಕ್ಷಣ ನಿರ್ದೇಶನಾಲಯವು ಜಿಲ್ಲಾ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಇಷ್ಟೂ ಪ್ರಮಾಣದ ಮಕ್ಕಳು ಶಾಲೆ ತೊರೆದಿರುವುದಕ್ಕೆ ಆತಂಕ ವ್ಯಕ್ತಪಡಿಸಿದೆ.
ಖಾಸಗಿ ಶಾಲೆಗಳು ಹರಿಯಾಣ ಶಿಕ್ಷಣ ಇಲಾಖೆಗೆ ಸಲ್ಲಿಸಿದ ಅಂಕಿ ಅಂಶಗಳ ಪ್ರಕಾರ, ಜೂನ್ 28 ರವರೆಗೆ 2021-22ರ ಶೈಕ್ಷಣಿಕ ಅಧಿವೇಶನಕ್ಕೆ 17.31 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ, ಕಳೆದ ವರ್ಷ 29.83 ಲಕ್ಷ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದರು. ರಾಜ್ಯದಲ್ಲಿ 14,500 ಸರ್ಕಾರಿ ಶಾಲೆಗಳು ಮತ್ತು 8,900 ಖಾಸಗಿ ಶಾಲೆಗಳಿವೆ.
ಕೊರೊನಾ ಸೋಂಕಿನ ಕಾರಣದಿಂದಾಗಿ ಲಾಕ್ಡೌನ್ ಹಿನ್ನೆಲೆ ಶಾಲಾ ಕಾಲೇಜುಗಳು ಮುಚ್ಚಿದ ನಂತರ ಆನ್ಲೈನ್ ತರಗತಿಗಳನ್ನು ಆರಂಭಿಸಲಾಗಿದೆ. ಆದರೆ ಅದೆಷ್ಟೋ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಇನ್ನೂ ಈ ಲಾಕ್ಡೌನ್ ಹಿನ್ನೆಲೆ ಉದ್ಯೋಗವಿಲ್ಲದ ಕಾರಣ ಹಲವಾರು ವಿದ್ಯಾರ್ಥಿಗಳ ಪೋಷಕರಿಗೆ ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ.

ವಿದ್ಯಾರ್ಥಿಗಳು ಶಾಲೆಯಿಂದ ದೂರವೇಕೆ ಇದ್ದಾರೆ?
ಅಧಿಕಾರಿಗಳ ಪ್ರಕಾರ ಈ ಮಕ್ಕಳಲ್ಲಿ ಕೆಲವರು ಶುಲ್ಕ ವಿಚಾರದಲ್ಲಿ ಶಾಲೆಗಳಿಂದ ದಾಖಲಾಗದೇ ಇರಬಹುದು. ಕೆಲವರು ಸರ್ಕಾರಿ ಶಾಲೆಗಳಿಗೆ ಹೋಗಿರಬಹುದು. ಆದಾಗ್ಯೂ, "ಸಾಂಕ್ರಾಮಿಕ-ಪ್ರೇರಿತ ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ತರಗತಿ ಹಾಜರಾಗಲು ಆಗದೆ ಹಲವಾರು ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆದಿದ್ದಾರೆ," ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. "ವಿದ್ಯಾರ್ಥಿಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು ಕಷ್ಟ ಅನುಭವಿಸಿದ್ದಾರೆ. ಇದಲ್ಲದೆ, ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಕಳೆದುಕೊಂಡಿದ್ದಾರೆ," ಎಂದು ಅಧಿಕಾರಿ ತಿಳಿಸಿದ್ದಾರೆ.

ಶಾಲಾ ಶಿಕ್ಷಣ ನಿರ್ದೇಶನಾಲಯದ ನಿರ್ದೇಶನ ಹೇಳಿದ್ದಿಷ್ಟು..
ಇನ್ನು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿರುವ ಬಗ್ಗೆ ಈ ವಾರ ನಿರ್ದೇಶನವವೊಂದನ್ನು ಶಾಲಾ ಶಿಕ್ಷಣ ನಿರ್ದೇಶನಾಲಯವು ನೀಡಿದೆ. "ಖಾಸಗಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದ 12.51 ಲಕ್ಷ ವಿದ್ಯಾರ್ಥಿಗಳ ವಿವರಗಳನ್ನು ಎಂಐಎಸ್ (ನಿರ್ವಹಣಾ ಮಾಹಿತಿ ವ್ಯವಸ್ಥೆ) ಯಲ್ಲಿ ನವೀಕರಿಸಲಾಗಿಲ್ಲ. ಈ 12.51 ಲಕ್ಷ ವಿದ್ಯಾರ್ಥಿಗಳ ಡೇಟಾವನ್ನು ನವೀಕರಿಸಲು ಖಾಸಗಿ ಶಾಲೆಗಳ ಮುಖ್ಯಸ್ಥರು / ವ್ಯವಸ್ಥಾಪಕರೊಂದಿಗೆ ಸಭೆ ನಡೆಸಬೇಕು. ಇದರಿಂದಾಗಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವ ಭೀತಿ ದೂರಮಾಡಬಹುದು," ಎಂದು ಹೇಳಿದೆ.

ಪರಿಶೀಲಿಸಲಾಗುವುದು ಎಂದ ಶಿಕ್ಷಣ ಸಚಿವ
ಈ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿಢೀರ್ ಇಳಿಕೆ ಬಗ್ಗೆ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ಪ್ರತಿಕ್ರಿಯೆ ನೀಡಿರುವ ಹರಿಯಾಣ ಶಿಕ್ಷಣ ಸಚಿವ ಕನ್ವರ್ ಪಾಲ್ ಗುರ್ಜರ್, "ಈ ವಿಚಾರ ತಿಳಿದು ಆಶ್ಚರ್ಯವಾಯಿತು. ಈ ಸಮಸ್ಯೆಯನ್ನು ನಾವು ಪರಿಶೀಲಿಸುತ್ತೇವೆ," ಎಂದು ತಿಳಿಸಿದ್ದಾರೆ. ಫತೇಹಾಬಾದ್ ಹಳ್ಳಿಯ ಖಾಸಗಿ ಶಾಲೆಯೊಂದರ ನಿರ್ವಹಣೆಯ ಸದಸ್ಯ ರಾಮ್ ಮೆಹರ್ ಮಾತನಾಡಿ, "ಈ ವರ್ಷವೂ ಶಾಲೆಗಳು ತೆರೆಯುವುದಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಈ ಪರಿಸ್ಥಿತಿಗಳಲ್ಲಿ, ಕೆಲವು ಖಾಸಗಿ ಶಾಲಾ ವಿದ್ಯಾರ್ಥಿಗಳು, ಮುಖ್ಯವಾಗಿ ಕಿರಿಯ ತರಗತಿಗಳ ವಿದ್ಯಾರ್ಥಿಗಳು ಯಾವುದೇ ಆನ್ಲೈನ್ ತರಗತಿಗೆ ಹಾಜರಾಗಿಲ್ಲ," ಎಂದಿದ್ದಾರೆ.

ಆದಾಯ ನಷ್ಟದಿಂದ ಶಿಕ್ಷಣಕ್ಕೆ ಕುತ್ತು
"ಆದಾಯ ನಷ್ಟದಿಂದಾಗಿ ತಮ್ಮ ಮಕ್ಕಳನ್ನು ಇನ್ನು ಮುಂದೆ ಶಾಲೆಗೆ ಕಳುಹಿಸಲು ಸಾಧ್ಯವಾಗದ ಅನೇಕರು ಇದ್ದಾರೆ. ಹೆಚ್ಚಿನ ಸಂಖ್ಯೆಯ ಕಾರ್ಮಿಕರು, ವಿಶೇಷವಾಗಿ ನಿರ್ಮಾಣ-ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರ ಮಕ್ಕಳು ಮನೆಯಲ್ಲಿ ಕುಳಿತಿದ್ದಾರೆ," ಎಂದು ಫತೇಹಾಬಾದ್ ಜಿಲ್ಲೆಯ ಚೌಬರಾ ಗ್ರಾಮದ ಕಾರ್ಮಿಕ ಮುಖಂಡ ರಾಜೇಶ್ ಚೌಬರಾ ಹೇಳಿದ್ದಾರೆ. ಇನ್ನು "ಶಾಲೆಗೆ ಹಾಜರಾಗದ ಮಕ್ಕಳ ಪೈಕಿ ಹಲವು ಮಂದಿ ವಲಸೆ ಕುಟುಂಬಗಳಿಗೆ ಸೇರಿದವರಾಗಿದ್ದು, ಉದ್ಯೋಗವಿಲ್ಲದೆ ಸ್ಥಳೀಯ ಸ್ಥಳಗಳಿಗೆ ಮರಳಿದ್ದಾರೆ" ಎಂದು ಖಾಸಗಿ ಶಾಲೆಗಳ ಮಾಲೀಕರು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗೆ ಹೋಗಲು ಪ್ರೋತ್ಸಾಹ
ಈ ನಡುವೆ ಮಕ್ಕಳನ್ನು ತಮ್ಮ ಶಾಲೆಗಳಿಗೆ ಸೆಳೆಯಲು ಸರ್ಕಾರಿ ಶಾಲೆಗಳು ಮಾಡಿದ ಪ್ರಯತ್ನಗಳು ಕೂಡಾ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆಗೆ ಕಾರಣ ಎಂದು ಖಾಸಗಿ ಶಾಲೆಗಳು ಅಭಿಪ್ರಾಯಿಸಿದೆ. ಕೈತಾಲ್ ಜಿಲ್ಲೆಯ ಭಟ್ಟಾ ಗ್ರಾಮದಲ್ಲಿ ಧ್ವನಿವರ್ಧಕದ ಮೂಲಕ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುವಂತೆ ಪೋಷಕರನ್ನು ಒತ್ತಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಶಿಕ್ಷಕರೊಬ್ಬರು ಈ ಧ್ವನಿವರ್ಧಕದ ಮೂಲಕ, "ನಮ್ಮ ಶಾಲೆಯಲ್ಲಿ ಎಲ್ಲಾ ಪಠ್ಯಕ್ಕೆ ಶಿಕ್ಷಕರು ಇದ್ದಾರೆ. ಹಾಗೆಯೇ ವೈದ್ಯಕೀಯೇತರ ವಿಷಯಗಳಿಗೆ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಖಾಸಗಿ ಶಾಲೆಗಳ ಭಾರಿ ಶುಲ್ಕವನ್ನು ತಪ್ಪಿಸಲು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿಕೊಳ್ಳಿ. ಅಬ್ ಕಿ ಬಾರಿ ಶಾಲಾ ಸರ್ಕಾರಿ (ಈ ಬಾರಿ ಸರ್ಕಾರಿ ಶಾಲೆಗಳನ್ನು ಆರಿಸಿ)", ಎಂದು ಒತ್ತಾಯಿಸಿದ್ದಾರೆ.
ಆದರೆ ಈ ವಿಚಾರದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಫೆಡರೇಶನ್ ಆಫ್ ಪ್ರೈವೇಟ್ ಸ್ಕೂಲ್ಸ್ ವೆಲ್ಫೇರ್ ಅಸೋಸಿಯೇಶನ್ನ ಅಧ್ಯಕ್ಷ ಕುಲಭೂಷಣ್ ಶರ್ಮಾ, "ಹಿಂದಿನ ಸಂಸ್ಥೆಯಿಂದ ಶಾಲಾ ಬಿಡುವ ಪ್ರಮಾಣಪತ್ರ (ಎಸ್ಎಲ್ಸಿ) ಪಡೆಯದೆ ಯಾವುದೇ ವಿದ್ಯಾರ್ಥಿಯು ಹೊಸ ಶಾಲೆಯಲ್ಲಿ ಪ್ರವೇಶ ಪಡೆಯಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿಬಂಧನೆ ಇದೆ. ಆದರೆ ಸರ್ಕಾರಿ ಶಾಲೆಗಳು ಇದನ್ನು ಉಲ್ಲಂಘಿಸುತ್ತಿದೆ. ಸರ್ಕಾರಿ ಶಾಲೆಗಳು ಎಸ್ಎಲ್ಸಿ ಪಡೆದಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ವಿದ್ಯಾರ್ಥಿಗಳ ದಾಖಲಾತಿ ಮಾಡುತ್ತದೆ," ಎಂದು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಸರ್ಕಾರಿ ಅಧಿಕಾರಿಗಳು, "ನಾವು 8 ನೇ ತರಗತಿಯವರೆಗೆ ಯಾವುದೇ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳುವ ಶಿಕ್ಷಣ ಹಕ್ಕು ಕಾಯ್ದೆಯ ನಿಬಂಧನೆಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದೇವೆ," ಎಂದಿದ್ದಾರೆ. "ನಾವು ಸದ್ಯ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಿರದಂತೆ ವಿದ್ಯಾರ್ಥಿಗಳನ್ನು ತಾತ್ಕಾಲಿಕ ಆಧಾರದ ಮೇಲೆ ಮಾತ್ರ ದಾಖಲಾತಿ ಮಾಡುತ್ತಿದ್ದೇವೆ," ಎಂದು ಹರಿಯಾಣ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಶಾಲಾ ಶಿಕ್ಷಣ) ಮಹಾವೀರ್ ಸಿಂಗ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications