ಹರ್ಯಾಣದಲ್ಲಿ ಬಿಜೆಪಿಗೆ ಆತ್ಮಹತ್ಯೆ ಪ್ರಕರಣ ಆರೋಪಿ ಗೋಪಾಲನ ಬೆಂಬಲ
ಚಂದೀಗಢ, ಅಕ್ಟೋಬರ್ 25: ಮಾಜಿ ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣ, ಕಿಡ್ನಾಪ್ ಕೇಸ್ ಗಳಲ್ಲಿ ಜಾಮೀನು ಪಡೆದು ಹೊರ ಬಂದಿರುವ ಮಾಜಿ ಸಚಿವ, ಹಾಲಿ ಶಾಸಕ ಗೋಪಾಲ್ ಕಾಂಡಾ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಹರ್ಯಾಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರಿಂದ ಬಿಜೆಪಿಗೆ ಜೆಜೆಪಿ ಹಾಗೂ ಸ್ವತಂತ್ರ ಅಭ್ಯರ್ಥಿಗಳ ನೆರವು ಅಗತ್ಯವಾಗಿದೆ.
ದುಷ್ಯಂತ್ ಚೌಟಾಲಾ ಅವರ ಜನನಾಯಕ ಜನತಾ ಪಕ್ಷ ಸೆಳೆಯಲು ಕಾಂಗ್ರೆಸ್ ಮುಂದಾಗಿದ್ದು, ಸಿಎಂ ಸ್ಥಾನ ನೀಡುವ ಭರ್ಜರಿ ಆಫರ್ ನೀಡಿದೆ. ಜೊತೆಗೆ 7 ಪಕ್ಷೇತರ ಅಭ್ಯರ್ಥಿಗಳು ಕೂಡ ಕಿಂಗ್ ಮೇಕರ್ಸ್ ಆಗಲಿದ್ದಾರೆ. ಬಿಜೆಪಿಗೆ ಈಗ ಎಲ್ಲಾ ಪಕ್ಷೇತರರ ಬೆಂಬಲ ಅಗತ್ಯವಾಗಿದೆ. ಮೆಹಮ್ ಕ್ಷೇತ್ರದ ಬಾಲ್ರಾಜ್ ಕುಂಡು, ಪ್ರಿತಾಲಾದ ನಯನಾ ಪಾಲ್ ರಾವತ್, ಪುಂಡ್ರಿಯ ರಣಧೀರ್ ಸಿಂಗ್ ಗೊಲ್ಲೆನ್, ಸಿರ್ಸಾದಲ್ಲಿ ಗೋಪಾಲ್ ಕಾಂಡಾ, ರನಿಯಾದ ರಂಜಿತ್ ಸಿಂಗ್ ಹಾಗೂ ಬಡಷಾಪುರ್ ಕ್ಷೇತ್ರದ ರಾಕೇಶ್ ದುಲ್ತಬಾದ್ ಪಕ್ಷೇತರರಾಗಿ ಜಯಗಳಿಸಿದ್ದಾರೆ. ಬಾಲ್ರಾಜ್ ಕುಂಡು ಹಾಗೂ ನಯನಾ ಪಾಲ್ ರಾವತ್ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಜಯ ಗಳಿಸಿದ್ದಾರೆ.

ನಡ್ಡಾ ಜೊತೆ ಮಾತುಕತೆ: "ನಾನು ನಡ್ಡಾಜೀ ಜೊತೆ ಮಾತುಕತೆ ನಡೆಸಿದ್ದೇನೆ, ಕಾಂಗ್ರೆಸ್ ಕೂಡಾ ಬೆಂಬಲ ಕೋರಿ ಮನವಿ ಮಾಡಿದೆ. ಆದರೆ, ಕಾಂಗ್ರೆಸ್ ಜೊತೆಗಿನ ಈ ಹಿಂದಿನ ಅನುಭವವನ್ನು ಮನಗಂಡು ಎಲ್ಲಾ ಪಕ್ಷೇತರರು ಈ ಬಾರಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಲು ಸಿದ್ಧ ಎಂದಿದ್ದಾರೆ. ಮೋದಿ ಸರ್ಕಾರದಿಂದ ದೇಶ ಪ್ರಗತಿ ಪಥದತ್ತ ಸಾಗಿದೆ. ನಾವೆಲ್ಲರೂ ಯಾವುದೇ ಷರತ್ತಿಲ್ಲದೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ' ಎಂದು ಶಾಸಕ ಗೋಪಾಲ್ ಕಾಂಡ ಹೇಳಿದ್ದಾರೆ.
ಹರ್ಯಾಣ 90 ಕ್ಷೇತ್ರಗಳಲ್ಲಿ, 40ರಲ್ಲಿ ಬಿಜೆಪಿ, 31 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಜೆಪಿ 10, ಐಎನ್ಎಲ್ಡಿ 1 ಸ್ಥಾನ, ಇತರೆ 7 ಸ್ಥಾನ, ಹರ್ಯಾಣ ಲೋಕಹಿತ ಪಕ್ಷ 1ಸ್ಥಾನ ಗೆದ್ದುಕೊಂ ಡಿವೆ. ಹರ್ಯಾಣದಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದು, ಬಹುಮತಕ್ಕೆ 46 ಸ್ಥಾನಗಳನ್ನು ಹೊಂದಬೇಕಿದೆ. ಈಗ ಕಾಂಗ್ರೆಸ್+ಜೆಜೆಪಿ+ ಇತರೆ ಅಭ್ಯರ್ಥಿಗಳು ಸೇರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ.
2014ರ ವಿಧಾನಸಭೆ ಚುನಾವಣೆಯಲ್ಲಿ 90 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್ 15 ಸ್ಥಾನ ಮಾತ್ರ ಗಳಿಸಲು ಸಾಧ್ಯವಾಯಿತು. 2019ರಲ್ಲಿ ಹರ್ಯಾಣದಲ್ಲಿ ಅಕ್ಟೋಬರ್ 21ರಂದು ಮತದಾನ ಹಾಗೂ ಅಕ್ಟೋಬರ್ 24ರಂದು ಫಲಿತಾಂಶ ಹೊರಬಂದಿದೆ.












Click it and Unblock the Notifications