ಪಟಿಯಾಲದಲ್ಲಿ 2 ಗುಂಪುಗಳ ಘರ್ಷಣೆ: ಕರ್ಫ್ಯೂ ಜಾರಿ
ಪಟಿಯಾಲಾ, ಏಪ್ರಿಲ್ 29:ಪಂಜಾಬ್ನ ಪಟಿಯಾಲದಲ್ಲಿ ಇಂದು ಖಾಲಿಸ್ತಾನ್ ವಿರೋಧಿ ಪ್ರತಿಭಟನಾ ಮೆರವಣಿಗೆಯ ವೇಳೆ ಎರಡು ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯಿಂದಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇಂದು ಸಂಜೆ 7 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ.
ಖಲಿಸ್ತಾನಿ ಗುಂಪುಗಳ ವಿರುದ್ಧ ಇಂದು ಪಂಜಾಬ್ ಶಿವಸೇನೆ ಕಾರ್ಯಾಧ್ಯಕ್ಷ ಹರೀಶ್ ಸಿಂಗ್ಲಾ ನೇತೃತ್ವದಲ್ಲಿ ಶಿವಸೇನೆ ಮೆರವಣಿಗೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಪಟಿಯಾಲದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಬಳಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ಮತ್ತು ಕತ್ತಿಗಳು ಝಳಪಿಸಿವೆ. ಗುಂಪು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜೊತೆಗೆ ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ರ್ಯಾಲಿಯ ಜನಸಂದಣಿಯಿಂದ ಹಲವಾರು ಜನರು "ಖಾಲಿಸ್ತಾನ್ ಮುರ್ದಾಬಾದ್" ಘೋಷಣೆಗಳನ್ನು ಎತ್ತಿದಾಗ ಸಿಖ್ ಸಂಘಟನೆಯ ಸದಸ್ಯರು ಮತ್ತು ಹಿಂದೂ ಸಂಘಟನೆಯ ಸದಸ್ಯರ ನಡುವೆ ರ್ಯಾಲಿಯಲ್ಲಿ ಪರಸ್ಪರ ಘರ್ಷಣೆ ನಡೆದಿದೆ. ಕೆಲವು ಸಿಖ್ ಸಂಘಟನೆಗಳ ಸದಸ್ಯರು ಕತ್ತಿಗಳನ್ನು ಹಿಡಿದು ಬೀದಿಗಿಳಿದರು. ಎರಡೂ ಗುಂಪುಗಳು ಕಲ್ಲು ತೂರಾಟ ಆರಂಭಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಘಟನೆಯ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿವೆ. ಇದರಲ್ಲಿ ಒಂದು ವರ್ಗದ ಜನರು ಕತ್ತಿಗಳನ್ನು ಝಳಪಿಸುವುದನ್ನು ಮತ್ತು ಘೋಷಣೆಗಳನ್ನು ಕೂಗುವುದನ್ನು ಕಾಣಬಹುದು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕೆಲವರು ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.
ಸಿಎಂ ಭಗವಂತ್ ಮಾನ್ ಹೇಳಿಕೆ
ಘಟನೆಯ ಕುರಿತು ಪ್ರತಿಕ್ರಿಯಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪೊಲೀಸ್ ಮಹಾನಿರ್ದೇಶಕರೊಂದಿಗೆ (ಡಿಜಿಪಿ) ಮಾತನಾಡಿದ್ದೇನೆ ಮತ್ತು ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲಾಗಿದೆ ಎಂದು ಹೇಳಿದರು.
Koo AppThe incident of clashes in Patiala are deeply unfortunate. I spoke with the DGP, peace has been restored in the area. We are closely monitoring the situation and will not let anyone create disturbance in the State. Punjab’s peace and harmony is of utmost importance.- Bhagwant Mann (@bhagwantmann) 29 Apr 2022
"ಪಟಿಯಾಲದಲ್ಲಿ ನಡೆದ ಘರ್ಷಣೆಯ ಘಟನೆಯು ಅತ್ಯಂತ ದುರದೃಷ್ಟಕರವಾಗಿದೆ. ನಾನು ಡಿಜಿಪಿ ಜೊತೆ ಮಾತನಾಡಿದ್ದೇನೆ, ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲಾಗಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ರಾಜ್ಯದಲ್ಲಿ ಯಾರೂ ಗೊಂದಲ ಸೃಷ್ಟಿಸಲು ಬಿಡುವುದಿಲ್ಲ. ಪಂಜಾಬ್ನ ಶಾಂತಿ ಮತ್ತು ಸೌಹಾರ್ದತೆ ಅತ್ಯಂತ ಮಹತ್ವದ್ದಾಗಿದೆ" ಭಗವಂತ್ ಮಾನ್ ಹೇಳಿದರು.
'ಶಾಂತಿ ಮತ್ತು ಭ್ರಾತೃತ್ವವನ್ನು ಕಾಪಾಡಿಕೊಳ್ಳಿ'
ಈ ವೇಳೆ ಪಟಿಯಾಲ ಡೆಪ್ಯುಟಿ ಕಮಿಷನರ್ ಸಾಕ್ಷಿ ಸಾಹ್ನಿ ಅವರು ಶಾಂತಿಗಾಗಿ ಕರೆ ನೀಡಿದರು ಮತ್ತು "ಸಲ್ಲದ ಸುದ್ದಿಗಳಿಗೆ ಬಲಿಯಾಗಬೇಡಿ" ಎಂದು ಜನರನ್ನು ಒತ್ತಾಯಿಸಿದರು. "ಜಿಲ್ಲಾಡಳಿತವು ಪಟಿಯಾಲ ಮತ್ತು ಪಂಜಾಬ್ನ ಎಲ್ಲಾ ಸಹೋದರ ಸಹೋದರಿಯರಿಗೆ ಶಾಂತಿ ಮತ್ತು ಸಹೋದರತೆಯನ್ನು ಕಾಪಾಡಿಕೊಳ್ಳಲು ಮನವಿ ಮಾಡುತ್ತದೆ" ಎಂದು ಸಾಕ್ಷಿ ಸಾಹ್ನಿ ಹೇಳಿದ್ದಾರೆ.
#WATCH | Punjab: A clash broke out between two groups near Kali Devi Mandir in Patiala today.
— ANI (@ANI) April 29, 2022
Police personnel deployed at the spot to maintain law and order situation. pic.twitter.com/yZv2vfAiT6
"ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಶಾಂತಿ ಮತ್ತು ಸಾಮರಸ್ಯವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜೊತೆಗೆ ಎಲ್ಲರಿಗೂ ಆಧಾರರಹಿತ ಸುದ್ದಿ/ಸಾಮಾಜಿಕ ಮಾಧ್ಯಮಗಳ ಫಾರ್ವರ್ಡ್ಗಳಿಗೆ ಬಲಿಯಾಗಬೇಡಿ ಮತ್ತು ತಮ್ಮ ತಮ್ಮ ಮನೆಗಳಿಗೆ, ತಂಗುವ ಸ್ಥಳಗಳಿಗೆ ಹಿಂತಿರುಗಲು ವಿನಂತಿಸಲಾಗಿದೆ" ಎಂದು ಸಾಕ್ಷಿ ಸಾಹ್ನಿ ಹೇಳಿದ್ದಾರೆ.
ವಿವಾದವನ್ನು ಬಗೆಹರಿಸಲು ಎರಡು ಗುಂಪುಗಳ ನಡುವೆ ಮಾತುಕತೆಗೆ ಕರೆ ನೀಡಿದ ಸಾಕ್ಷಿ ಸಾಹ್ನಿ, "ನಮ್ಮ ಎಲ್ಲಾ ಧರ್ಮಗಳು ಮತ್ತು ಅವುಗಳ ಮೂಲ ತತ್ವಗಳು ಶಾಂತಿ ಮತ್ತು ಸೌಹಾರ್ದತೆ ಕೇಂದ್ರವಾಗಿವೆ. ಯಾವುದೇ ವಿವಾದ ಅಥವಾ ತಪ್ಪು ತಿಳುವಳಿಕೆ ಇದ್ದರೂ ಅದನ್ನು ಮಾತುಕತೆಯ ಮೂಲಕ ಪರಿಹರಿಸುವುದು ಮುಖ್ಯ" ಎಂದು ಹೇಳಿದರು.