ಕ್ಯಾಪ್ಟನ್ ಅಮರಿಂದರ್ ವಿರುದ್ಧ ತಿರುಗಿಬಿದ್ದಿದ್ದ ನವಜೋತ್ ಸಿಂಗ್ ಸಿಧುಗೆ ಹಿಂಬಡ್ತಿ
ಚಂಡೀಗಢ, ಜೂನ್ 06 : ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ತಿರುಗಿಬಿದ್ದಿದ್ದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ವ್ಯವಹಾರ ಸಚಿವ, ಮಾತಿನ ಮಲ್ಲ ನವಜೋತ್ ಸಿಂಗ್ ಸಿಧುವಿಗೆ ಹಿಂಬಡ್ತಿ ನೀಡಲಾಗಿದೆ.
ಲೋಕಸಭಾ ಚುನಾವಣೆಯ ಸಂದರ್ಭದಿಂದಲೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಸಿಡಿದೆದ್ದಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು, ಗುರುವಾರ ನಡೆದಿದ್ದ ಸಂಪುಟ ಸಭೆಯಲ್ಲಿಯೂ ಭಾಗವಹಿಸಿರಲಿಲ್ಲ. ಅವರ ಖಾತೆಯನ್ನು ಬದಲಾಯಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿತ್ತು.
ಈ ಹಿನ್ನೆಲೆಯಲ್ಲಿ ಸಿಧು ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸಲಾಗಿದ್ದು, ಅವರನ್ನೇ ಮಂತ್ರಿಗಿರಿಯಿಂದ ಕೆಳಗಿಳಿಯಲು ಸೂಚಿಸಲಾಗುವುದು ಎಂದು ತಿಳಿದುಬಂದಿತ್ತು. ಆದರೆ, ಅವರನ್ನು ಸಂಪುಟದಿಂದ ಕೈಬಿಡದೆ ಬೇರೆ ಖಾತೆಯನ್ನು ನೀಡಲಾಗಿದೆ. ಹೊಸ ಖಾತೆಯನ್ನು ಅವರು ಸ್ವೀಕರಿಸುತ್ತಾರಾ? ಲೋಕಸಭಾ ಚುನಾವಣೆಯ ಸೋಲಿಗೆ ತಮ್ಮನ್ನು ಅನಗತ್ಯವಾಗಿ ದೂಷಿಸಲಾಗುತ್ತಿದೆ ಎಂದು ಸಿಧು ಬಹಿರಂಗವಾಗಿಯೇ ಅಮರಿಂದರ್ ಸಿಂಗ್ ವಿರುದ್ಧ ಆರೋಪಿಸಿದ್ದರು.

ಲೋಕಸಭೆ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ಕಾಂಗ್ರೆಸ್ ಅಂತಹ ಕಳಪೆ ಪ್ರದರ್ಶನವನ್ನೇನೂ ನೀಡಿಲ್ಲ. ಹದಿಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ 8ರಲ್ಲಿ ಜಯ ಗಳಿಸಿದ್ದರೆ, ಶಿರೋಮಣಿ ಅಕಾಲಿ ದಳ ಮತ್ತು ಭಾರತೀಯ ಜನತಾ ಪಕ್ಷಗಳೆರಡು 2 ಕ್ಷೇತ್ರಗಳಲ್ಲಿ ಗೆದ್ದಿವೆ. ಉಳಿದೊಂದು ಕ್ಷೇತ್ರ ಆಮ್ ಆದ್ಮಿ ಪಕ್ಷದ ಪಾಲಿಗಿದೆ.
ಲೋಕಸಭಾ ಚುನಾವಣೆಯಲ್ಲಿ ನವಜೋತ್ ಸಿಂಗ್ ಸಿಧು ಅವರ ಹೆಂಡತಿ ನವಜೋತ್ ಕೌರ್ ಸಿಧು ಅವರಿಗೆ ಕ್ಯಾ. ಅಮರಿಂದರ್ ಸಿಂಗ್ ಅವರು ಟಿಕೆಟ್ ನಿರಾಕರಿಸಿದ್ದರು. ಆವಾಗಿನಿಂದಲೂ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಕ್ಯಾಪ್ಟನ್ ಅಮರಿಂದರ್ ಅವರು ಮಹಿಳೆಯನ್ನು ಅಗೌರವದಿಂದ ನೋಡಿದ್ದಾರೆ ಎಂದು ಆರೋಪಿಸಿದ್ದರು.
ಆದರೆ, ಸಿಧು ಅವರು ಮಾಡಿದ ಟೀಕೆಯಿಂದಾಗಿ ತಮಗಲ್ಲ, ಇಡೀ ಪಕ್ಷಕ್ಕೇ ಧಕ್ಕೆಯಾಗಿದೆ ಎಂದು ಅಮರಿಂದರ್ ಸಿಂಗ್ ಅವರು ಪ್ರತ್ಯಾರೋಪ ಮಾಡಿದ್ದರು. ನಂತರ, ಚುನಾವಣಾ ಪ್ರಚಾರದುದ್ದಕ್ಕೂ ನರೇಂದ್ರ ಮೋದಿ, ಸ್ಮೃತಿ ಇರಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ತಮ್ಮದೇ ನಾಯಕ ಅಮರಿಂದರ್ ವಿರುದ್ಧವೂ ಸಿಧು ಭಾರೀ ಟೀಕಾ ಪ್ರಹಾರ ಮಾಡಿದ್ದರು.
ಅಲ್ಲದೆ, ಚುನಾವಣೆಯಲ್ಲಿ ಒಂದು ವೇಳೆ ರಾಹುಲ್ ಗಾಂಧಿ ಅವರಿಗೆ ಸೋಲುಂಟಾದರೆ ರಾಜಕೀಯದಿಂದಲೇ ಸನ್ಯಾಸ ತೆಗೆದುಕೊಳ್ಳುವುದಾಗಿ ನವಜೋತ್ ಸಿಂಗ್ ಸಿಧು ಅವರು ಘೋಷಿಸಿದ್ದರು. ಹಿಂದೆ ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕಾಗಿ ಕಪಿಲ್ ಶರ್ಮಾ ಅವರ ರಿಯಾಲಿಟಿ ಶೋನಿಂದಲೇ ಗೇಟ್ ಪಾಸ್ ಪಡೆದಿದ್ದ ಸಿಧು, ಈಗ ರಾಜಕೀಯ ನಿವೃತ್ತಿ ಘೋಷಿಸುತ್ತಾರಾ?












Click it and Unblock the Notifications