ಕಾಂಗ್ರೆಸ್ ನಾಯಕನ ಆಹ್ವಾನದ ಮೇರೆಗೆ ಛತ್ತೀಸ್ಗಢಕ್ಕೆ ಬಂದ ಆರ್ಎಸ್ಎಸ್ ಮುಖ್ಯಸ್ಥ!
ನವದೆಹಲಿ, ಸೆ.13: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಛತ್ತೀಸ್ಗಢದ ರಾಯ್ಪುರ ಜಿಲ್ಲೆಯ ಚಂದ್ಖುರಿ ಗ್ರಾಮದ ಮಾತಾ ಕೌಶಲ್ಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಭೂಪೇಶ್ ಬಘೇಲ್ ನೇತೃತ್ವದ ಛತ್ತೀಸ್ಗಢ ಸರ್ಕಾರವು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಹೇಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ನೋಡಲು ರಾಯ್ಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರ ಹಿರಿಯ ಆರ್ಎಸ್ಎಸ್ ಮುಖಂಡರನ್ನು ದೇವಸ್ಥಾನಕ್ಕೆ ಆಹ್ವಾನಿಸಿದ್ದರು. ಅವರ ಆಹ್ವಾನದ ಒಂದು ದಿನದ ನಂತರ ಈ ಭೇಟಿ ನಡೆದಿದೆ.
ಆದರೆ, ಆರೆಸ್ಸೆಸ್ ಪದಾಧಿಕಾರಿಯೊಬ್ಬರು, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಗವತ್ ಅವರ ದೇವಸ್ಥಾನದ ಭೇಟಿಗೂ ಆಡಳಿತ ಪಕ್ಷದ ಆಹ್ವಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಮುಖ್ಯಸ್ಥ ಪ್ರಾಂತ ಸಂಘಚಾಲಕ್ ಡಾ.ಪೂರ್ಣೇಂದು ಸಕ್ಸೇನಾ ಮತ್ತು ಇತರ ಆರ್ಎಸ್ಎಸ್ ರಾಜ್ಯ ಮುಖಂಡರೊಂದಿಗೆ ರಾಜ್ಯದ ರಾಜಧಾನಿ ರಾಯ್ಪುರದಿಂದ 27 ಕಿಮೀ ದೂರದಲ್ಲಿರುವ ಚಂದ್ಖುರಿ ಗ್ರಾಮದ ಮಾತಾ ಕೌಶಲ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಭಗವಾನ್ ರಾಮನ ತಾಯಿ ಮಾತಾ ಕೌಶಲ್ಯಗೆ ಸಮರ್ಪಿತವಾದ ದೇವಾಲಯವನ್ನು ಕಾಂಗ್ರೆಸ್ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ 'ರಾಮ್ ವಾನ್ ಗಮನ್' ಪ್ರವಾಸೋದ್ಯಮ ಸರ್ಕ್ಯೂಟ್ ಯೋಜನೆಯ ಭಾಗವಾಗಿ ನವೀಕರಿಸಿ ಸುಂದರಗೊಳಿಸಿತು. ಚಂದ್ಖುರಿ ಮಾತಾ ಕೌಶಲ್ಯೆಯ ಜನ್ಮಸ್ಥಳವಾಗಿದೆ. ಇದು ಆಕೆಗೆ ಸಮರ್ಪಿತವಾಗಿರುವ ವಿಶ್ವದ ಏಕೈಕ ದೇವಾಲಯವಾಗಿದೆ.
ಭಾಗವತ್ ಅವರ ಭೇಟಿಯ ನಂತರ, ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಟ್ವೀಟ್ನಲ್ಲಿ ಆರೆಸ್ಸೆಸ್ ಮುಖ್ಯಸ್ಥರು ದೇವಾಲಯಕ್ಕೆ ಭೇಟಿ ನೀಡಿದ ನಂತರ ಶಾಂತಿಯ ಭಾವನೆಯನ್ನು ಅನುಭವಿಸಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
"ನಾವು ಮೋಹನ್ ಭಾಗವತ್ ಜಿ ಅವರನ್ನು ಮಾತಾ ಕೌಶಲ್ಯ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದೆವು. ಅಲ್ಲಿಗೆ ಭೇಟಿ ನೀಡಿದ ಮೇಲೆ ಅವರು ಶಾಂತಿಯ ಭಾವವನ್ನು ಅನುಭವಿಸಿರಬೇಕು ಎಂದು ನನಗೆ ಖಾತ್ರಿಯಿದೆ. ಅವರು ದೇವಾಲಯದ ಹೊಸ ನೋಟ, ಮಾ ಕೌಶಲ್ಯೆಯ ಮಾತೃತ್ವ ಮತ್ತು ಭಂಚ (ಸೋದರಳಿಯ) ರಾಮ್ನ ಶಕ್ತಿಯನ್ನು ಅರಿತುಕೊಂಡಿರಬೇಕು "ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸೋಮವಾರ ರಾಯ್ಪುರ ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ್ ದುಬೆ ಅವರು ಆರ್ಎಸ್ಎಸ್ನ ಸಮನ್ವಯ ಸಭೆ ಮುಕ್ತಾಯಗೊಂಡ ಜೈನಮ್ ಮಾನಸ ಭವನಕ್ಕೆ ಆಗಮಿಸಿ, ದೇವಸ್ಥಾನಕ್ಕೆ ಭೇಟಿ ನೀಡುವಂತೆ ಭಾಗವತ್ ಅವರನ್ನು ಉದ್ದೇಶಿಸಿ ಪತ್ರವನ್ನು ಹಸ್ತಾಂತರಿಸಿದರು.